ಸಾರಾಂಶ
ಹಾನಗಲ್ಲ: ವರ್ಗ ಸಂಘರ್ಷ, ಜಾತೀಯತೆ ತೊಲಗಿಸಲು ಡಾ. ಬಿ.ಆರ್. ಅಂಬೇಡ್ಕರ್ ಅವರು ಜೀವನ ಪೂರ್ತಿ ಶ್ರಮಿಸಿದ್ದು ಅವರ ಜೀವನ ಚರಿತ್ರೆ, ರಚಿಸಿರುವ ಸಂವಿಧಾನದ ಬಗ್ಗೆ ಪ್ರಶಿಕ್ಷಣಾರ್ಥಿಗಳು ಕಡ್ಡಾಯವಾಗಿ ತಿಳಿದುಕೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ ತಿಳಿಸಿದರು.
ಪಟ್ಟಣದ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕ ಯೋಜನೆಯಡಿ ಮಂಗಳವಾರ ಏರ್ಪಡಿಸಿದ್ದ ಅಂಬೇಡ್ಕರ್ ಓದು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ದೇಶಭಕ್ತಿ, ಸೌಹಾರ್ದ, ಭಾವೈಕ್ಯತೆ, ಪ್ರೀತಿ-ಪ್ರೇಮ ಕಲಿಸುವ ಜತೆಗೆ ಸಂವಿಧಾನ ಒಳ್ಳೆಯತನಗಳ ಸಮ್ಮಿಳಿತ ಜೇನುಗೂಡು ಇದ್ದ ಹಾಗೆ. ಅದು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಲ್ಲ ಅದು ಸರ್ವರಿಗೂ ಸಂಬಂಧಿಸಿದ್ದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಚಾರ್ಯ ಡಾ. ಸದಾಶಿವಪ್ಪ ಎನ್. ಮಾತನಾಡಿ, ಅಂಬೇಡ್ಕರ್ ಬೋಧಿಸಿದ್ದ ಮೂರು ರತ್ನಗಳಾದ ಶಿಕ್ಷಣ, ಸಂಘಟನೆ, ಹೋರಾಟದ ಮಹತ್ವವನ್ನು ಶಿಕ್ಷಕರಾಗುವ ನೀವು ಪ್ರತಿ ವಿದ್ಯಾರ್ಥಿಗಳಿಗೂ ಕಲಿಸಿಕೊಡಬೇಕು. ವಿವಿಧತೆಯಲ್ಲಿ ಏಕತೆ ಸಾಧಿಸಲು ಮತ್ತು ಜಗತ್ತಿಗೆ ಸಂವಿಧಾನದ ಆಶಯ ಸಾರಲು ಅಂಬೇಡ್ಕರ್ ಓದು ಅಭಿಯಾನ ಸಹಕಾರಿ ಎಂದು ತಿಳಿಸಿದರು.ಪ್ರಾಸ್ತಾವಿಕವಾಗಿ ಡಾ. ವಿಶ್ವನಾಥ ಬೊಂದಾಡೆ ಮಾತನಾಡಿ, ಸಮಾನತೆ, ಸಮಾಜ ಸುಧಾರಣೆ ಪುಸ್ತಕ ಓದುವುದರಿಂದ ಬರುವುದಿಲ್ಲ. ಅದನ್ನು ಅನುಭವಿಸಿದವರಿಗೆ ಕೇಳಿದರೆ ಅದರ ಮಹತ್ವ ಗೊತ್ತಾಗುತ್ತದೆ. ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಓದು ಒಂದು ತಪಸ್ಸು. ಅವರಿಗೆ ಮನುಷ್ಯರ ಒಡನಾಟಕ್ಕಿಂತ ಪುಸ್ತಕಗಳ ಒಡನಾಟವೇ ಹೆಚ್ಚು ಆನಂದ ಕೊಡುತ್ತಿತ್ತು. ಅವರ ಓದಿನ ಕ್ರಮವೂ ತುಂಬಾ ಭಿನ್ನವಾಗಿತ್ತು. ಅವರು ಇಡೀ ರಾತ್ರಿ ಓದುತ್ತಲೇ ಇರುತ್ತಿದ್ದರಂತೆ. ಒಮ್ಮೆ ಪತ್ನಿ ರಮಾಬಾಯಿ ಬೆಳಗ್ಗೆ ಚಹಾ ಕೊಡಲು ಹೋದರೆ ಅಂಬೇಡ್ಕರ್, ''''ಇದೇನು ರಾತ್ರಿ ಹೊತ್ತಿನಲ್ಲಿ ಚಹಾ ತಂದೆ'''' ಎಂದು ಕೇಳಿದ್ದರಂತೆ. ಹೀಗೆ ದೇಶ, ಕಾಲವನ್ನೇ ಮರೆತು ಅಧ್ಯಯನದಲ್ಲಿ ಮುಳುಗಿಬಿಡುವ ಅಂಬೇಡ್ಕರ್ ಅವರ ದೊಡ್ಡ ಶಕ್ತಿಯೇ ಅಪಾರ ಜ್ಞಾನ, ಅಧ್ಯಯನಶೀಲತೆ, ಸಂಶೋಧನಾಗುಣ. ಅವರ ಈ ಅಪಾರ ಓದೇ ನಮ್ಮ ಸಂವಿಧಾನವನ್ನು ಸರ್ವಶ್ರೇಷ್ಠವಾಗಿಸಿದ್ದು ಎಂದು ತಿಳಿಸಿದರು.
ಪ್ರಶಿಕ್ಷಣಾರ್ಥಿ ನಂದಿನಿ ಪಾಟೀಲ ಕಾನೂನು ನಮಗೋಸ್ಕರ ಇರುವುದು, ಕಾಲಕ್ಕೆ ತಕ್ಕಂತೆ ಸಂವಿಧಾನ ಕಾನೂನು ಬದಲಾವಣೆಯಾಗುತ್ತದೆ. ಭಾರತದಂತಹ ಜಾತಿ ಆಧಾರಿತ, ಲಿಂಗಾಧಾರಿತ ದೇಶದಲ್ಲಿ ಸರ್ವರಿಗೂ ಸಮಾನವಾದ ಕಾನೂನು ತರುವಲ್ಲಿ ಯಶಸ್ವಿಯಾದವರು ಡಾ. ಅಂಬೇಡ್ಕರ್. ವ್ಯಕ್ತಿ ಸರ್ಕಾರದ ಆಡಳಿತದ ಮುಖ್ಯ ಘಟಕವಾದಾಗ ಮಾತ್ರ ಸುಧಾರಣೆ ಸಾಧ್ಯ ಎಂದು ಅಂಬೇಡ್ಕರ್ ತಿಳಿಸಿದ್ದರು ಎಂದರು.ಪ್ರಶಿಕ್ಷಣಾರ್ಥಿ ಕವಿತಾ ಎಚ್. ಮಾತನಾಡಿ, ನಾವು ಇಷ್ಟೊಂದು ಸುಂದರ ಜೀವನ ನಡೆಸಲು ಅಂಬೇಡ್ಕರ್ ರಚಿಸಿದ ಸಂವಿಧಾನವೇ ಕಾರಣ ಎಂದು ನುಡಿದರು.ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಓದು ಅಭಿಯಾನ ಕಾರ್ಯಕ್ರಮದ ನಿಮಿತ್ತ ಆಯೋಜಿಸಿದ್ದ ರಸಪ್ರಶ್ನೆಯಲ್ಲಿ ಸ್ಫೂರ್ತಿ ನಾಯಕ ಪ್ರಥಮ, ವಿಶ್ವನಾಥ ಮೇಟಿ ದ್ವಿತೀಯ, ನಂದಿನಿ ಪಾಟೀಲ ತೃತೀಯ, ಚಿತ್ರಕಲೆಯಲ್ಲಿ ಪ್ರಥಮ ಶ್ರೀದೇವಿ ಪಾನಗಲ್ಲ, ದ್ವಿತೀಯ ಸ್ಫೂರ್ತಿ ನಾಯಕ, ನೀಲಾ ಮುದಿ ತೃತೀಯ ಸ್ಥಾನ ಪಡೆದರು. ಈ ಎಲ್ಲ ಪ್ರಶಿಕ್ಷಣಾರ್ಥಿಗಳು ಪ್ರಶಸ್ತಿ ಪತ್ರ ಹಾಗೂ ಭಾರತದ ಸಂವಿಧಾನ ರಚನಾಸಭೆಯ ಚರ್ಚೆಗಳು ಪುಸ್ತಕಗಳನ್ನು ಉಡುಗೂರೆಯಾಗಿ ಪಡೆದರು.ಪ್ರಶಿಕ್ಷಣಾರ್ಥಿಗಳಾದ ಸಂಗೀತಾ ಬೆಳವತ್ತಿ ಮತ್ತು ಸಂಘಡಿಗರು ಅಂಬೇಡ್ಕರ್ ಅವರ ಜೀವನದ ಪ್ರಮುಖ ಘಟನೆಗಳ ಕುರಿತು ಹಾಗೂ ಅಂಬೇಡ್ಕರ್ ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಸ್ಫೂರ್ತಿ ನಾಯಕ ಮತ್ತು ಬುಡ್ಡಪ್ಪ ದೇವರಮನಿ ನಿರೂಪಿಸಿದರು.ಅನ್ನಪೂರ್ಣ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕಾವೇರಿ ಜೋತೆಪ್ಪನವರ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪ್ರೊ. ಎಂ.ಬಿ. ನಾಯ್ಕ, ಪ್ರೊ. ಆರ್.ವಿ. ಮಾಡಳ್ಳಿ, ಡಾ. ಹರೀಶ.ಟಿ. ತಿರುಕಪ್ಪ, ಡಾ. ಜೀತೇಂದ್ರ ಜಿ.ಟಿ., ಡಾ. ಪ್ರಕಾಶ ಜಿ.ವಿ., ಡಾ. ರುದ್ರೇಶ ಬಿ.ಎಸ್., ಪ್ರೊ. ದಿನೇಶ ಆರ್., ಮಹೇಶ ಅಕ್ಕಿವಳ್ಳಿ, ಎಂ.ಎಂ. ನಿಂಗೋಜಿ, ಎಸ್.ಸಿ. ವಿರಕ್ತಮಠ ಹಾಗೂ ಎಲ್ಲ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.