ಜಾತಿ- ಧರ್ಮ ಭೇದವಿಲ್ಲದೆ ಪಾರದರ್ಶಕ ಆಡಳಿತ: ಸುಧೀರ್‌ ಶೆಟ್ಟಿ

| Published : Sep 18 2024, 01:49 AM IST

ಸಾರಾಂಶ

ಒಂದು ವರ್ಷದ ಅಧಿಕಾರವಧಿ ಪೂರೈಸಿದ ಮೇಯರ್‌ಗೆ ಅಭಿನಂದನೆ ಹಾಗೂ 138.18 ಕೋಟಿ ರು. ವೆಚ್ಚದ ಕಾಮಗಾರಿಗಳ ಉದ್ಘಾಟನೆ, 58.34 ಕೋಟಿ ರು. ವೆಚ್ಚದ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕಳೆದ ಒಂದು ವರ್ಷದ ತನ್ನ ಮೇಯರ್ ಅಧಿಕಾವಧಿಯಲ್ಲಿ ಜಾತಿ, ಧರ್ಮ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಪರಿಗಣಿಸಿ, ಭ್ರಷ್ಟಾಚಾರ ರಹಿತ- ಪಾರದರ್ಶಕ ಆಡಳಿತ ನೀಡಲು ಪ್ರಯತ್ನಿಸಿದ್ದೇನೆ ಎಂದು ನಿರ್ಗಮಿತ ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಹೇಳಿದ್ದಾರೆ.

ಒಂದು ವರ್ಷದ ಅಧಿಕಾರವಧಿ ಪೂರೈಸಿದ ಮೇಯರ್‌ಗೆ ಅಭಿನಂದನೆ ಹಾಗೂ 138.18 ಕೋಟಿ ರು. ವೆಚ್ಚದ ಕಾಮಗಾರಿಗಳ ಉದ್ಘಾಟನೆ, 58.34 ಕೋಟಿ ರು. ವೆಚ್ಚದ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ನನ್ನ ಅಧಿಕಾರವಧಿಯಲ್ಲಿ ನಾರಾಯಣ ಗುರು ಜಯಂತಿಗಾಗಿ ಗುರು ಮಂದಿರಗಳಿಗೆ ತಲಾ 15 ಸಾವಿರ ರು. ನೀಡುವ ಕಾರ್ಯ ಆಗಿದೆ. ಅಂಬೇಡ್ಕರ್‌ ಪ್ರತಿಮೆ ಸಹಿತ ವೃತ್ತ ನಿರ್ಮಾಣಕ್ಕೆ ಶಾಸಕರು ಹಾಗೂ ಪ್ರತಿಪಕ್ಷದವರು ಸಹಕಾರ ನೀಡಿದ್ದಾರೆ. ಮೃತ ಯೋಧರ ಕುಟುಂಬಗಳಿಗೆ ತಲಾ 5 ಲಕ್ಷ ರು., 75 ಮೀ. ಎತ್ತರದ ಧ್ವಜಸ್ತಂಭ ನಿರ್ಮಾಣ, ಜನಸ್ಪಂದನ ಕಾರ್ಯಕ್ರಮಗಳು ಹೀಗೆ ಹಲವು ಕಾರ್ಯಗಳು ನಡೆದಿವೆ. ಎಲ್ಲದಕ್ಕೂ ಸರ್ವರೂ ಉತ್ತಮ ಸಹಕಾರ ನೀಡಿದ್ದಾರೆ ಎಂದು ಸುಧೀರ್‌ ಶೆಟ್ಟಿ ಕಣ್ಣೂರು ಹೇಳಿದರು.

ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಕಳೆದ ಒಂದು ವರ್ಷದ ಅವಧಿಯಲ್ಲಿ ಸುಧೀರ್‌ ಶೆಟ್ಟಿ ಅಧಿಕಾರವಧಿಯಲ್ಲಿ ಉತ್ತಮ ಕಾರ್ಯಗಳು ನಡೆದಿವೆ. ಪಾಲಿಕೆಯ ಆದಾಯ ಹೆಚ್ಚಿಸಬೇಕಾದರೆ ಸೋರಿಕೆಯನ್ನು ನಿಲ್ಲಿಸುವ ಕಾರ್ಯ ಆಗಬೇಕಾಗಿದೆ ಎಂದು ಸಲಹೆ ನೀಡಿದರು.

ಶಾಸಕ ಭರತ್‌ ಶೆಟ್ಟಿ ಮಾತನಾಡಿ, ಈಗ ಶಿಲಾನ್ಯಾಸ ಆಗಿರುವ ಕಾಮಗಾರಿಗಳು ತ್ವರಿಗತಿಯಲ್ಲಿ ಪೂರ್ಣಗೊಳಿಸುವ ಕೆಲಸವನ್ನು ಮುಂದಿನ ಮೇಯರ್‌ ಮಾಡಬೇಕು ಎಂದರು.

ಪಾಲಿಕೆ ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ ಮಾತನಾಡಿ, ನಗರದ ಅಭಿವೃದ್ಧಿ ವಿಚಾರದಲ್ಲಿ ಹಾಗೂ ಜನರ ಸಮಸ್ಯೆಗಳ ಬಗ್ಗೆ ಎಚ್ಚರಿಸುವ ಕೆಲಸವನ್ನು ಪ್ರತಿಪಕ್ಷವಾಗಿ ಮಾಡಿದ್ದೇವೆ. ಅದೇ ರೀತಿ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಿದ್ದೇವೆ ಎಂದರು.

ಆಡಳಿತ ಮತ್ತು ಪ್ರತಿಪಕ್ಷದ ಹಲವು ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಉಪಮೇಯರ್‌ ಸುನೀತಾ, ಸ್ಥಾಯಿ ಸಮಿತಿ ಸದಸ್ಯರು, ಕಾರ್ಪೊರೇಟರ್‌ಗಳು, ಅಧಿಕಾರಿಗಳು ಇದ್ದರು.