ಸಾರಾಂಶ
ಕಾರವಾರ: ಪ್ರವಾಸ ಕಥನಕ್ಕೆ ಶತಮಾನಗಳ ಇತಿಹಾಸವಿದೆ. ಪ್ರವಾಸಿ ಸಾಹಿತ್ಯಕ್ಕೆ ತನ್ನದೇ ಆದ ವೈಶಿಷ್ಟ್ಯತೆಗಳಿದ್ದು, ಇದು ಪ್ರವಾಸದ ಹಾಗೂ ಜೀವನಾನುಭವಗಳ ವಿನಿಮಯಗಳ ಸಾರವಾಗಿದೆ ಎಂದು ಹಿರಿಯ ನಾಟಕಕಾರ, ಸಾಹಿತಿ ವ್ಯಾಸ್ ದೇಶಪಾಂಡೆ ನುಡಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತು, ಕಾರವಾರ ತಾಲೂಕು ಘಟಕ ಹಾಗು ಪ್ರೀತಿಪದ ಇವರ ಸಂಯುಕ್ತ ಆಶ್ರಯದಲ್ಲಿ ಕಾರವಾರದ ಲೇಖಕ ಎಂ.ಜಿ. ನಾಯ್ಕ ಅವರ ಭೂಗೋಳದ ಇನ್ನೊಂದು ಮಗ್ಗಲಲ್ಲಿ ಪ್ರವಾಸ ಕಥನವನ್ನು ಬಿಡುಗಡೆ ಮಾಡಿ ಮಾತನಾಡಿದರು.ಪುಸ್ತಕ ಪರಿಚಯಿಸಿದ ಲೇಖಕ ಶ್ರೀಧರ ನಾಯಕ, ಎನ್.ಜಿ. ನಾಯ್ಕ ಅವರ ಪ್ರವಾಸ ಕಥನ ಸಂಗ್ರಹಯೋಗ್ಯವಾಗಿದೆ. ಅಮೆರಿಕದ ಹಲವು ಪ್ರೇಕ್ಷಣೀಯ ತಾಣಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ ಎಂದರು.
ಹಿರಿಯ ಪತ್ರಕರ್ತ ಸಂಪಾದಕ ಗಂಗಾಧರ ಹಿರೇಗುತ್ತಿ, ಎನ್.ಜಿ. ನಾಯ್ಕ ಒಬ್ಬ ಆದರ್ಶ ವ್ಯಕ್ತಿತ್ವದ ಶ್ರೇಷ್ಠ ಮನುಷ್ಯ. ಅವರ ಪ್ರಜಾಸತ್ತಾತ್ಮಕವಾದ ನಿಲುವು ಹಾಗೂ ಪ್ರಗತಿಪರವಾದ ಧೋರಣೆಗಳು ಅವರ ಬರಹ ಮತ್ತು ಕೆಲಸದ ಮೂಲಕ ನಿದರ್ಶನಗೊಂಡಿವೆ ಎಂದರು.ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಜಾರ್ಜ್ ಫನಾಂಡಿಸ್, ಹಿರಿಯ ಲೇಖಕ ಕೃಷ್ಣಾ ನಾಯಕ ಹಿಚ್ಕಡ್, ಲೇಖಕಿ ಪ್ರೇಮಾ ಟಿ.ಎಂ.ಆರ್, ಎನ್.ಜಿ. ನಾಯ್ಕ ಅವರ ಸರಳತೆ, ಸಹೃದಯತೆ ಹಾಗೂ ಸಾಹಿತ್ಯ ಸಂಘಟನೆಗಳ ಬಗ್ಗೆ ಬಣ್ಣಿಸಿದರು.
ಕಾರವಾರ ಬೈಸಿಕಲ್ ಕ್ಲಬ್ ನ ಸೂರಜ್ ಹೆಗಡೆ, ಪವನ್ ಸಾವಂತ್ ಶುಭ ಹಾರೈಸಿದರು.ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ಪ್ರವಾಸ ಕಥನಗಳು ತನ್ನದೇ ಆದ ಐತಿಹ್ಯವನ್ನು ಹೊಂದಿವೆ. ಇದೀಗ ದಾಖಲಾರ್ಹ ಪುಸ್ತಕಗಳ ಸಾಲಿನಲ್ಲಿ ಎನ್.ಜಿ. ನಾಯ್ಕ ಅವರ ಕೃತಿ ಸೇರ್ಪಡೆಯಾಗುತ್ತಿರುವುದು ಸಂತಸ ತಂದಿದೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ರಾಮಾ ನಾಯ್ಕ ಸ್ವಾಗತಿಸಿದರು. ಪ್ರಕಾಶಕಿ ಯಮುನಾ ಗಾಂವಕರ ಪ್ರಾಸ್ತಾವಿಕ ನುಡಿದರು. ಕಾರ್ತಿಕ್ ನಾಯ್ಕ್ ವಂದಿಸಿದರು. ಕಸಾಪ ಗೌರವ ಕಾರ್ಯದರ್ಶಿ ಗಣೇಶ ಬಿಷ್ಟನ್ನವರ್ ನಿರೂಪಿಸಿದರು. ಬಾಬು ಶೇಖ್, ಶಿವಾನಂದ ತಾಂಡೇಲ, ಜಿ.ಡಿ. ಮನೋಜೆ ಮತ್ತಿತರರು ಇದ್ದರು.ಎನ್.ಜಿ. ನಾಯ್ಕ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.