ನವೆಂಬರ್‌ 12ರಂದು ಕೊಳ್ಳೇಗಾಲದಲ್ಲಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗೆ ಗೌರವ

| Published : Nov 11 2024, 12:58 AM IST / Updated: Nov 11 2024, 12:59 AM IST

ನವೆಂಬರ್‌ 12ರಂದು ಕೊಳ್ಳೇಗಾಲದಲ್ಲಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗೆ ಗೌರವ
Share this Article
  • FB
  • TW
  • Linkdin
  • Email

ಸಾರಾಂಶ

ಡಾ.ಶಾಂತಮಲ್ಲಿಕಾರ್ಜುನ ಸ್ವಾಮಿಯವರಿಗೆ ಕರ್ನಾಟಕ ಸಂಸ್ಕೖತ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪದವಿ ದೊರೆತ ಹಿನ್ನೆಲೆ ಭಕ್ತ ಸಮೂಹ ಅವರಿಗೆ ಕೊಳ್ಳೇಗಾಲ ಪಟ್ಟಣ ಮತ್ತು ತಾಲೂಕಿನ ಗುಂಡೇಗಾಲದಲ್ಲಿ ಗೌರವ ಸಮರ್ಪಣಾ ಸಮಾರಂಭವನ್ನು ನ.12ರಂದು ಅಯೋಜಿಸಲಾಗಿದೆ.

ಕರ್ನಾಟಕ ಸಂಸ್ಕೖತ ವಿವಿಯಿಂದ ಸಾಲೂರು ಬೃಹನ್ಮಠದ ಅಧ್ಯಕ್ಷರಿಗೆ ಡಾಕ್ಟರೇಟ್ । ಮಠದ ಭಕ್ತರಿಂದ ಆಯೋಜನೆ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೖಹನ್ಮಠದ ಈಗಿನ ಪೀಠಾಧ್ಯಕ್ಷ ಡಾ. ಶಾಂತಮಲ್ಲಿಕಾರ್ಜುನ ಸ್ವಾಮಿಯವರಿಗೆ ಕರ್ನಾಟಕ ಸಂಸ್ಕೖತ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪದವಿ ದೊರೆತ ಹಿನ್ನೆಲೆ ಭಕ್ತ ಸಮೂಹ ಅವರಿಗೆ ಕೊಳ್ಳೇಗಾಲ ಪಟ್ಟಣ ಮತ್ತು ತಾಲೂಕಿನ ಗುಂಡೇಗಾಲದಲ್ಲಿ ಗೌರವ ಸಮರ್ಪಣಾ ಸಮಾರಂಭವನ್ನು ನ.12ರಂದು ಅಯೋಜಿಸಲಾಗಿದೆ.

ಸಾಲೂರು ಶ್ರೀಗಳಾದ ಡಾ. ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಂಸ್ಕೖತದಲ್ಲಿ ‘ಅಂಶುಮದಾಗಮಮ್ ಸಂಪಾದನಾತ್ಮಕ ಮದ್ಯಯನಮ್’ ಎಂಬ ಮಹಾ ಪ್ರಬಂಧ ಮಂಡಿಸಿದ್ದಕ್ಕಾಗಿ ಶ್ರೀಗಳಿಗೆ ಡಾಕ್ಟರೇಟ್ ಸಂದಿದೆ. ಈ ಹಿನ್ನೆಲೆ ಭಕ್ತ ಸಮೂಹ ಕೊಳ್ಳೇಗಾಲದ ವೆಂಕಟೇಶ್ವರ ಮಹಲ್‌ನಲ್ಲಿ 12ರ ಬೆಳಿಗ್ಗೆ 10 ಕ್ಕೆ ತಾಲೂಕಿನ ಗುಂಡೇಗಾಲದ ಸದ್ಭಕ್ತರಿಂದ 4 ಗಂಟೆಕ್ಕೆ ಗೌರವ ಸಮರ್ಪಣಾ ಸಮಾರಂಭ ಜರುಗಲಿದೆ ಎಂದು ಗುಂಡೇಗಾಲದ ಮಠಾಧ್ಯಕ್ಷರು ತಿಳಿಸಿದ್ದಾರೆ

ಅಪಾರ ವಿದ್ವತ್ ಸಂಪಾದಿಸಿರುವ ಶ್ರೀಗಳು:

ಬಂಡಳ್ಳಿ ಗ್ರಾಮದ ಶರಣ ದಂಪತಿಗಳಾದ ಮಹದೇವಸ್ವಾಮಿ ಮತ್ತು ಸುಂದ್ರಮ್ಮ ಅವರ ಜೇಷ್ಠ ಪುತ್ರರಾಗಿ ಸಾಲೂರು ಶ್ರೀಗಳು 1989ರ ಜೂನ್ 4ರಂದು ಜನಿಸಿದರು. ನಾಗೇಂದ್ರ ಅವರ ಪೂರ್ವಾಶ್ರಮದ ಹೆಸರು. ಓದಿನಲ್ಲಿ ಸದಾ ಮುಂದಿದ್ದ ಶ್ರೀಗಳು ಸಂಸ್ಕೃತ ವೇದ ಶಿಕ್ಷಣವನ್ನು ಸಿದ್ದಗಂಗಾ ಮಠದಲ್ಲಿ, ಆಗಮ ಮತ್ತು ಮಾಧ್ಯಮಿಕ ಸಂಸ್ಕೃತ ಶಿಕ್ಷಣ, ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಮೈಸೂರು ವಿವಿಯಲ್ಲಿ ವ್ಯಾಸಂಗ ಮಾಡಿ ಹಲವು ಚಿನ್ನದ ಪದಕ ಹಾಗೂ ನಗದು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದು ಗುಂಡೇಗಾಲದ ಮಠಾಧ್ಯಕ್ಷರು ಹೇಳಿದ್ದಾರೆ.

ನಾಡಿನ ಖ್ಯಾತ ವಿದ್ವಾಂಸ, ಮಠಾಧಿಪತಿಗಳಾದ ಇಮ್ಮಡಿ ಶಿವಬಸವಸ್ವಾಮಿಗಳ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿ ನೇಪಾಳ, ಮಲೇಷಿಯಾದ ಪ್ರಸಿದ್ಧ ವಿಶ್ವವಿದ್ಯಾಯಲಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಪ್ರಸ್ತುತ ಶ್ರೀಗಳು ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಗುಜರಾತ್, ಹಿಮಾಚಲ ಪ್ರದೇಶ, ದೆಹಲಿ, ಆಂಧ್ರಪ್ರದೇಶ, ತಮಿಳುನಾಡು, ಜಾರ್ಖಂಡ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಭಾಷೆ, ಧರ್ಮ, ಸಾಹಿತ್ಯ-ಸಂಸ್ಕೃತಿ ಮುಂತಾದ ವಿಷಯಗಳಲ್ಲಿ ಹಲವಾರು ಪ್ರಬಂಧಗಳನ್ನು ಮಂಡಿಸಿ ಪ್ರಶಂಸೆಗೆ ಭಾಜನರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಪೀಠಾಧಿಪತಿಯ ಕನಸು ಕಂಡಿರಲಿಲ್ಲ:

ತಮಗೆ ಡಾಕ್ಟರೇಟ್‌ ಪದವಿ ದೊರೆತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಸಾಲೂರು ಮಠದ ಜವಾಬ್ದಾರಿ ವಹಿಸಿಕೊಂಡು ಬಳಿಕ ಪಿಎಚ್‌ಡಿ ಪದವಿ ಪಡೆದುಕೊಂಡಿರುವುದು ವೈಯಕ್ತಿಕವಾಗಿ ಸಂತಸ ತಂದಿದೆ. ನಮ್ಮ ಗುರುಗಳ ಆಸೆ ಹಾಗೂ ಆಶೀರ್ವಾದದಿಂದ ಇದು ಸಾಧ್ಯವಾಗಿದೆ. ಈ ಪದವಿಯನ್ನು ಮಠದ ಸದ್ಭಕ್ತ ಸಮೂಹಕ್ಕೆ ಅರ್ಪಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಮೌಲ್ಯಯುತವಾದುದನ್ನು ಗೌರವಿಸುತ್ತಾರೆ ಎಂಬುದಕ್ಕೆ ಭಕ್ತರ ಪ್ರೀತಿ, ವಿಶ್ವಾಸ ಸಾಕ್ಷಿಯಾಗಿದ್ದು ಭಕ್ತ ಸಮೂಹದ ಪ್ರೀತಿ ವಿಶ್ವಾಸವನ್ನು ಇಮ್ಮಡಿಗೊಳಿಸುವ ಜೊತೆಗೆ ಇಂತಹ ಗೌರವ ಸಮರ್ಪಣಾ ಸಮಾರಂಭಗಳಿಂದ ಇನ್ನಷ್ಟು ಜವಾಬ್ದಾರಿ ಹೆಚ್ಚಿದಂತಾಗಿದೆ. ಮುಖ್ಯವಾಗಿ ಮೂರು ಜನ ನನ್ನ ಅಧ್ಯಯನಕ್ಕೆ ಪ್ರೇರಣೆಯಾಗಿದ್ದಾರೆ. ಗುರುಗಳಾದ ಪಟ್ಟದ ಗುರುಸ್ವಾಮಿಗಳು, ಮೈಸೂರಿನ ಕುಂದೂರು ಮಠದ ಪೂಜ್ಯರು, ನಾಡಿನ ಖ್ಯಾತ ವಿದ್ವಾಂಸರೂ ಆದ ಡಾ.ಇಮ್ಮಡಿ ಶಿವಬಸವ ಸ್ವಾಮಿಗಳು, ಇವರ ಕರಕಮಲ ಸಂಜಾತರೂ ಪ್ರಸ್ತುತ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ನನ್ನ ಪ್ರೌಢ ಪ್ರಬಂಧದ ಮಾರ್ಗದರ್ಶಕರಾದ ಡಾ.‌ ಶರತ್ಚಂದ್ರಸ್ವಾಮಿಗಳ ಮಾರ್ಗದರ್ಶನ, ಭಕ್ತರ ಸಹಕಾರದಿಂದ ನನಗೆ ಪದವಿ ಸಂದಿದೆ ಎಂದು ಹೇಳಿದ್ದಾರೆ.