ಕನ್ನಡಪ್ರಭ ವಾರ್ತೆ ಬೆಳಗಾವಿ

ಕನ್ನಡಪ್ರಭ ಬೆಳಗಾವಿ ಕಚೇರಿಯ ಜಾಹೀರಾತು ವಿಭಾಗದ ಹಿರಿಯ ವ್ಯವಸ್ಥಾಪಕರಾಗಿದ್ದ ಸಂತೋಷ ಕರೀಕಟ್ಟಿ ಅವರ ನಿಧನದ ಹಿನ್ನೆಲೆಯಲ್ಲಿ ನಗರದ ವಾರ್ತಾ ಭವನದಲ್ಲಿ ಮಂಗಳವಾರ ಶ್ರದ್ಧಾಂಜಲಿ ಸಭೆ ನಡೆಯಿತು.ಕನ್ನಡಪ್ರಭ ಬೆಳಗಾವಿ ಬ್ಯುರೋ ಮುಖ್ಯಸ್ಥ ಬ್ರಹ್ಮಾನಂದ ಹಡಗಲಿ ಮಾತನಾಡಿ, ಸಂತೋಷ ಕರೀಕಟ್ಟಿ ಅವರೊಂದಿಗಿನ ಆತ್ಮೀಯ ಒಡನಾಟವನ್ನು ನೆನಪಿಸಿಕೊಂಡರು. ಕರೀಕಟ್ಟಿ ಅವರ ಆತ್ಮಿಯತೆ, ಅವರ ಕಾರ್ಯವನ್ನು ಇದೆ ವೇಳೆ ಅವರು ಸ್ಮರಿಸುವುದರು. ಅಲ್ಲದೆ, ಪತ್ರಿಕಾ ಕ್ಷೇತ್ರದಲ್ಲಿ ಕೆಲಸದ ಒತ್ತಡ ಹೆಚ್ಚಾಗಿರುವುದರಿಂದ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಜೊತೆಗೆ ಕುಟುಂಬದೊಂದಿಗೆ ಸಮಯ ಕಳೆಯುವುದಕ್ಕೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.ಪತ್ರಕರ್ತ ಶ್ರೀಶೈಲ ಮಠದ, ಅರುಣಕುಮಾರ ಅಮಾಸಿ, ವಿವೇಕಾನಂದ ಪೂಜಾರಿ, ರಾಜೇಶ ಹವಾಲ್ದಾರ ಹಾಗೂ ಮಾರುತಿ ಕೋಳೆಕರ ಮಾತನಾಡಿ, ಸಂತೋಷ ಕರೀಕಟ್ಟಿ ಅವರ ಅಕಾಲಿಕ ಅಗಲಿಕೆ ಬೆಳಗಾವಿಯ ಪತ್ರಿಕೋದ್ಯಮ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಎಲ್ಲರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದ ಅವರು ತಮ್ಮ ಸರಳತೆ, ಸ್ನೇಹಪರತೆ ಹಾಗೂ ಕರ್ತವ್ಯನಿಷ್ಠೆಯಿಂದ ಎಲ್ಲರ ಮನಸು ಗೆದ್ದಿದ್ದರು ಎಂದು ಸ್ಮರಿಸಿದರು.ಈ ಸಂದರ್ಭದಲ್ಲಿ ಧನಂಜಯ ಹೊಂಗಲ, ವಿಜಯ ಹನ್ನಿಕೇರಿ, ಅವಿನಾಶ ನಾಯಿಕ, ಎನ್‌.ರಾಮಚಂದ್ರ, ಗುರುನಾಥ ತೆಂಗಿನಕೇರಿ, ದೀಪಕ, ಆಕಾಶ ಕಣಬರಕರ, ಏಕನಾಥ ಕಾಂಬಳೆ, ಮಲಿಕ ಮುಲ್ಲಾ, ಚಿದಾನಂದ ಪಾಟೀಲ ಸೇರಿದಂತೆ ವಿವಿಧ ಪತ್ರಿಕೆಗಳ ಜಾಹೀರಾತು, ಮುದ್ರಣ ಮತ್ತು ಪ್ರಸರಣ ವಿಭಾಗಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಸಭೆಯಲ್ಲಿ ಸಂತೋಷ ಕರೀಕಟ್ಟಿ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು. ಅವರ ಅಗಲಿಕೆಯಿಂದ ದುಃಖಿತಗೊಂಡಿರುವ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಲಾಯಿತು.