ಡೀಮ್ಡ್ ಯೂನಿವರ್ಸಿಟಿಗಳಿಂದ ತುಳು ಕೋಟಾಕ್ಕೆ ತೊಡಕು: ಜಯಕರ್ ಶೆಟ್ಟಿ ಇಂದ್ರಾಳಿ

| Published : Aug 04 2024, 01:18 AM IST

ಸಾರಾಂಶ

ತುಳುಕೂಟ ಉಡುಪಿ, ತ್ರಿಶಾ ವಿದ್ಯಾ ಪದವಿಪೂರ್ವ ಕಾಲೇಜ್ ಕಟಪಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ವತಿಯಿಂದ ‘ಜೋಕ್ಲೆಗಾದ್ ಆಟಿದ ತಿರ್ಲ್’ ಕಾರ್ಯಕ್ರಮ ಕಟಪಾಡಿ ತ್ರಿಶಾ ವಿದ್ಯಾ ಕಾಲೇಜ್‌ನಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ತುಳು ಮಾತೃಭಾಷೆ ಮಾತನಾಡುವ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ಬಯಸಿದ್ದಲ್ಲಿ ತುಳು ಕೋಟಾದಡಿ ವೈದ್ಯಕೀಯ ಕಾಲೇಜುಗಳಲ್ಲಿ ಅವಕಾಶವಿದ್ದು, ಕೆಲವು ಯುನಿರ್ಸಿಟಿಗಳು ಡೀಮ್ಡ್ ಯೂನಿವರ್ಸಿಟಿಗಳಾಗಿ ಬದಲಾಗುತ್ತಿರುವುರಿಂದ ತುಳು ಕೋಟಾಕ್ಕೆ ತೊಡಕಾಗಿದೆ ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ತಿಳಿಸಿದ್ದಾರೆ.

ತುಳುಕೂಟ ಉಡುಪಿ, ತ್ರಿಶಾ ವಿದ್ಯಾ ಪದವಿಪೂರ್ವ ಕಾಲೇಜ್ ಕಟಪಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ವತಿಯಿಂದ ‘ಜೋಕ್ಲೆಗಾದ್ ಆಟಿದ ತಿರ್ಲ್’ ಕಾರ್ಯಕ್ರಮ ಕಟಪಾಡಿ ತ್ರಿಶಾ ವಿದ್ಯಾ ಕಾಲೇಜ್‌ನಲ್ಲಿ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಟಪಾಡಿ ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಸಿಎ ಗೋಪಾಲಕೃಷ್ಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳುನಾಡಿನ ಮಣ್ಣಿನ ಸಂಸ್ಕೃತಿ ಶಕ್ತಿಶಾಲಿಯಾಗಿದೆ. ಈ ಮಣ್ಣಿನ ಲ್ಲಿ ಅನೇಕ ವಿಶೇಷತೆಗಳಿವೆ. ತುಳುನಾಡಿನಲ್ಲಿ ಹುಟ್ಟಿದ ನಾವೆಲ್ಲ ಧನ್ಯರು ಎಂದರು.

ತುಳುನಾಡಿನ ಆಟಿ‌ ಕಳೆಂಜನಿಗೆ ಪಡಿಯಕ್ಕಿ ಕೊಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ತ್ರಿಶಾ ಪಿ.ಯು. ಕಾಲೇಜಿನ ವಿದ್ಯಾರ್ಥಿ ಭವೀಷ್ ಬೆಳ್ಳಾರೆ ಆಟಿಯ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮ, ಕಟಪಾಡಿ ಎಸ್.ವಿ.ಎಸ್. ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ. ಸತ್ಯೇಂದ್ರ ಪೈ, ತ್ರಿಶಾ ವಿದ್ಯಾ ಪಿ.ಯು. ಕಾಲೇಜು ಪ್ರಾಂಶುಪಾಲ ಡಾ. ಅನಂತ್ ಪೈ, ಸಮಾಜಸೇವಕ ಉಡುಪಿ ವಿಶ್ವನಾಥ ಶೆಣೈ, ಕಾರ್ಯಕ್ರಮ ಸಂಚಾಲಕಿ ವಿದ್ಯಾಸರಸ್ವತಿ, ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರ್ ಭಾಗವಹಿಸಿದ್ದರು.