ಹೊಸಪೇಟೆ: ತುಂಗಭದ್ರಾ ಜಲಾಶಯದ ವ್ಯಾಪ್ತಿಗೆ ಒಳಪಡುವ ನೂರಾರು ಎಕರೆ ಪ್ರದೇಶವು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸರ್ಕಾರಗಳ ಜಂಟಿ ಆಸ್ತಿಯಾಗಿದ್ದು, ಇಲ್ಲಿ ನಡೆಯುತ್ತಿರುವ ಯಾವುದೇ ಅತಿಕ್ರಮಣ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಒಆರ್ವಿ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ನಗರದ ತುಂಗಭದ್ರಾ ಜಲಾಶಯ ಆಡಳಿತ ಮಂಡಳಿಯ ಕಚೇರಿಯಲ್ಲಿ ಬುಧವಾರ ಸುದ್ಧಿಗೊಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.ಭಾರತೀಯ ಅಧಿಕೃತ ರಹಸ್ಯಗಳ ಕಾಯ್ದೆ 1923ರ ಅನ್ವಯ ಜಲಾಶಯದ ಪ್ರದೇಶ, ಪವರ್ ಹೌಸ್, ಸುತ್ತಮುತ್ತಲಿನ ಸ್ಥಳಗಳನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಹೊಸಪೇಟೆ ವ್ಯಾಪ್ತಿಯ 207.41 ಎಕರೆ ಹಾಗೂ ಅಮರಾವತಿ ವ್ಯಾಪ್ತಿಯ 488.74 ಎಕರೆ ಸೇರಿದಂತೆ ಒಟ್ಟು 696.15 ಎಕರೆ ಪ್ರದೇಶವು ಮಂಡಳಿಯ ಸ್ವಾಧೀನದಲ್ಲಿದೆ. ಇದರಲ್ಲಿ ಗಾರ್ಡನ್, ಹಿನ್ನೀರು, ನಿಶಾನಿ ಕ್ಯಾಂಪ್, ಅಮರಾವತಿ ಕಾಲನಿ, ಎಚ್ಇಎಸ್ ಕಾಲನಿ ಪ್ರದೇಶಗಳು ಸಹ ಸೇರಿವೆ. ಪ್ರಸ್ತುತ ಮಂಡಳಿಯ ಜಾಗಕ್ಕೆ ಸಂಬಂಧಿಸಿ ವಿವಿಧ ಹಂತಗಳಲ್ಲಿ 23 ಪ್ರಕರಣ ನ್ಯಾಯಾಲಯದಲ್ಲಿವೆ. ಇದರಲ್ಲಿ ಧಾರವಾಡ ಹೈಕೋರ್ಟ್ ಪೀಠ, ಹೊಸಪೇಟೆಯ ಸಿವಿಲ್ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಉಲ್ಲಂಘನೆಯ ಪ್ರಕರಣಗಳೂ ಸೇರಿವೆ. ಜಲಾಶಯದ ಸುರಕ್ಷತೆ ಮತ್ತು ಮಂಡಳಿಯ ಆಸ್ತಿ ರಕ್ಷಿಸುವುದು ಆದ್ಯತೆಯಾಗಿದೆ. ಮಂಡಳಿಯ ಜಾಗ ಅತಿಕ್ರಮಣ ಕುರಿತ ವಿವಿಧ ಹಂತಗಳಲ್ಲಿ 23 ಪ್ರಕರಣ ದಾಖಲಾಗಿವೆ. ಈ ಪೈಕಿ ಒಂದು ಪ್ರಕರಣ ಇತ್ಯರ್ಥವಾಗಿದೆ ಎಂದರು.
ತುಂಗಭದ್ರಾ ಮಂಡಳಿಯ ಅನುಮತಿ ಇಲ್ಲದೇ ಈ ಜಾಗಗಳಲ್ಲಿ ಕಟ್ಟಡ ನಿರ್ಮಾಣ ಅಥವಾ ಇನ್ನಿತರೆ ಯಾವುದೇ ಚಟುವಟಿಕೆ ನಡೆಸುವುದು ಶಿಕ್ಷಾರ್ಹ ಅಪರಾಧ. ಸಾರ್ವಜನಿಕರು ಇಂತಹ ಅಕ್ರಮ ಅತಿಕ್ರಮಣದಾರರೊಂದಿಗೆ ಯಾವುದೇ ವ್ಯವಹಾರ ನಡೆಸಬಾರದು ಎಂದು ಅವರು ಮನವಿ ಮಾಡಿದರು.ಮೇ ಅಂತ್ಯಕ್ಕೆ ಎಲ್ಲ ಕ್ರಸ್ಟ್ ಗೇಟ್ ಅಳವಡಿಕೆ ಪೂರ್ಣ:
ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಭರದಿಂದ ಸಾಗಿದೆ. ಈಗಾಗಲೇ 22 ಗೇಟ್ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಇನ್ನುಳಿದವು ಇದೇ ತಿಂಗಳಲ್ಲಿ ಮುಕ್ತಾಯವಾಗುವ ಭರವಸೆ ಇದೆ. ಜತೆಗೆ ಚೈನ್ ಅಳವಡಿಕೆ ಕಾರ್ಯ ಮೇ ತಿಂಗಳ ಅಂತ್ಯಕ್ಕೆ ಪೂರ್ಣಗೊಂಡು ಜೂನ್ ವೇಳೆಗೆ ಡ್ಯಾಂ ಸಂಪೂರ್ಣ ಸಿದ್ಧವಾಗಿರಲಿದೆ ಎಂದರು.
ತುಂಗಭದ್ರಾ ಮಂಡಳಿಯ ಮುಖ್ಯ ಕಾರ್ಯ ನಿರ್ವಾಹಕ ಎಂಜಿನಿಯರ್ ಎನ್.ಚಂದ್ರಶೇಖರ್, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಎಸ್. ನಾರಾಯಣ ನಾಯ್ಕ್ ಇದ್ದರು.