ಕೊನೆಗೂ ಪಾವಗಡದ ಗ್ರಾಮಗಳಿಗೆ ಹರಿದ ತುಂಗಭದ್ರೆ

| Published : Mar 21 2025, 12:32 AM IST

ಸಾರಾಂಶ

ಕನ್ನಡಪ್ರಭ ವರದಿಯ ಬೆನ್ನಲೇ ಗುರುವಾರ ಪಾವಗಡ ಉಪ ವಿಭಾಗದ ಗ್ರಾಮೀಣ ಕಿರುನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳ ತಂಡ ಬೃಹತ್‌ ಟ್ಯಾಂಕ್‌ಗಳನ್ನು ಪರಿಶೀಲಿಸುವ ಮೂಲಕ ಅಭಾವವಿರುವ ಗ್ರಾಮಗಳಿಗೆ

ಕನ್ನಡಪ್ರಭವಾರ್ತೆ ಪಾವಗಡ

ಕನ್ನಡಪ್ರಭ ವರದಿಯ ಬೆನ್ನಲೇ ಗುರುವಾರ ಪಾವಗಡ ಉಪ ವಿಭಾಗದ ಗ್ರಾಮೀಣ ಕಿರುನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳ ತಂಡ ಬೃಹತ್‌ ಟ್ಯಾಂಕ್‌ಗಳನ್ನು ಪರಿಶೀಲಿಸುವ ಮೂಲಕ ಅಭಾವವಿರುವ ಗ್ರಾಮಗಳಿಗೆ ಮನೆಮನೆಯ ಸಂಪರ್ಕದ ಪೈಪ್‌ಲೈನ್‌ ಮೂಲಕ ತುಂಗಭದ್ರಾ ಕುಡಿಯುವ ನೀರು ಸರಬರಾಜು ಮಾಡಿದರು.

ದಿ.19ರಂದು ಪತ್ರಿಕೆಯಲ್ಲಿ ಸಿಎಂ ಬರೋದ್ಯಾವಾಗ,ನೀರು ಕೊಡೋದ್ಯಾವಾಗ ಎನ್ನುವ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು. ಪರಿಣಾಮ ಮನೆಗಳಿಗೆ ನೀರು ಸರಬರಾಜಾಗಿದೆ. ಬೃಹತ್‌ ಓವರ್‌ಹೆಡ್‌ ಟ್ಯಾಂಕ್‌ಗಳ ಪರಿಶೀಲನೆ ಹಾಗೂ ಶುದ್ಧೀಕರಿಸಿದ ನೀರಿನ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿದರು. ಟ್ಯಾಂಕ್‌ಗಳ ಪರಿಶೀಲನೆ ಬಳಿಕ ನೀರು ಕುಡಿಯಲು ಯೋಗ್ಯವಾಗಿದೆ ಎಂಬ ಪರೀಕ್ಷೆಯ ವರದಿಯ ಬಳಿಕ ಸಮಸ್ಯೆ ಇರುವ ಪ್ಲೊರೈಡ್‌ ಯುಕ್ತ ನೀರಿನ ಸೇವನೆಯನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ತಾಲೂಕಿನ ಕೋಟಗುಡ್ಡ ಹಾಗೂ ಶೈಲಾಪುರ ಗ್ರಾಮಗಳಿಗೆ ತೆರಳಿ ಕುಡಿಯುವ ನೀರಿನ ಕುರಿತು ಪರಿಶೀಲನೆ ನಡೆಸಿದರು. ಸಾರ್ವಜನಿಕರೊಂದಿಗೆ ಚರ್ಚಿಸಿದ ಬಳಿಕ ಬೃಹತ್‌ ಟ್ಯಾಂಕ್‌ಗಳಲ್ಲಿ ಸಂಗ್ರಹವಾಗಿದ್ದ ತುಂಗಭದ್ರಾ ಕುಡಿಯುವ ನೀರನ್ನು ಮತ್ತೊಮ್ಮೆ ಪರಿವೀಕ್ಷಣೆ ನಡೆಸಿ ಈ ನೀರು ಕುಡಿಯಲು ಯೋಗ್ಯವಾಗಿದೆ ಎಂಬ ವರದಿ ಆಧಾರದ ಮೇರೆಗೆ, ಈ ಎರಡು ಗ್ರಾಮಗಳ ಮನೆಮನೆಗೆ ತುಂಗಭದ್ರಾ ಯೋಜನೆಯ ನೀರು ಸರಬರಾಜು ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಬೇಸಿಗೆ ಪ್ರಾರಂಭವಾಗುತ್ತಿರುವ ಹಿನ್ನಲೆಯಲ್ಲಿ ಈಗಾಗಲೇ ಕಾರ್ಯನ್ಮುಖರಾಗಿದ್ದು ಅತಿ ಶೀಘ್ರದಲ್ಲಿಯೇ ತಾಲೂಕಿನ ಎಲ್ಲ ಗ್ರಾಮಗಳಿಗೆ ತುಂಗಭದ್ರಾ ಕುಡಿಯುವ ನೀರು ಹರಿಸಲಿದ್ದೇವೆ ಎಂದು ಜಿಪಂ ಕುಡಿಯುವ ನೀರು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಜಿಪಂ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಎಇಇ ಕಾವ್ಯ ಜಿಪಂ ಸಹಾಯಕ ಎಂಜಿನಿಯರ್‌ ಬಸಲಿಂಗಪ್ಪ ಪಾಟೀಲ್, ತುಂಗಭದ್ರಾ ಯೋಜನೆಯ ಮೆಗಾ ಗುತ್ತಿಗೆ ಕಂಪನಿಯ ಅಧಿಕಾರಿ ಅಶೋಕ್,ನವೀನ್ ಹಾಗೂ ಗ್ರಾಮಸ್ಥರು ಮತ್ತು ಸ್ಥಳೀಯ ಗ್ರಾಪಂ ವಾಟರ್ ಮ್ಯಾನ್ ಗಳು ಇದ್ದರು.

ಬಾಕ್ಸ್‌.. ತಾಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾದ ಬೆನ್ನಲೇ ಕೇಬಲ್ ವೈರ್ ಹಾಕುತ್ತಿದ್ದ ವೇಳೆ ಜೆಸಿಬಿಯಿಂದ ಬಗೆದ ಪರಿಣಾಮ ಪೈಪ್ ಲೈನ್ ಹೊಡೆದು ತುಂಗಭದ್ರಾ ಯೋಜನೆಯ ನೀರು ಪೋಲಾಗುತ್ತಿರುವ ಘಟನೆ ಗುರುವಾರ ತಾಲೂಕಿನ ಟಿ.ಎನ್‌.ಪೇಟೆ ಹೊರವಲಯದಲ್ಲಿ ನಡೆದಿದೆ. ತಾಲೂಕಿನ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಬವಣೆ ನಿವಾರಿಸುವತ್ತ ಜಿಪಂ ಕುಡಿಯುವ ನೀರು ವಿಭಾಗದ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದು ಮತ್ತೊಂದೆಡೆ ಖಾಸಗಿ ಗುತ್ತಿಗೆದಾರರು ನೆಟ್‌ ವರ್ಕ್‌ವೊಂದರ ಕೇಬಲ್‌ ಆಳವಡಿಸಲು ಜೆಸಿಬಿಗಳಿಂದ ನೆಲ ಬಗೆಯುತ್ತಿರುವ ಪರಿಣಾಣ ರಸ್ತೆ ಪಕ್ಕದ ಪೈಪ್‌ ಲೈನ್‌ ಒಡೆದು ಗ್ರಾಮಗಳ ಟ್ಯಾಂಕ್‌ಗಳಿಗೆ ಸರಬರಾಜ್‌ ಅಗಬೇಕಿದ್ದ ಕುಡಿಯುವ ನೀರು ಹೆಚ್ಚು ಪೋಲಾಗುತ್ತಿರುವುದಾಗಿ ಸಾರ್ವ ಜನಿಕರು ಅರೋಪಿಸಿದ್ದಾರೆ.