ಕನ್ನಡಪ್ರಭ ವಾರ್ತೆ ವಿಜಯಪುರ ಆದರ್ಶನಗರ ಮತ್ತು ಗೋಲಗುಮ್ಮಜ್ ಪೊಲೀಸ್ ಠಾಣಾ ಸರಹದ್ದಿನ ಇಬ್ಬರು ಆರೋಪಿಗಳಾದ ಸುರೇಶ ಉರ್ಫ್ ಸಾಗರ ತಂದೆ ಲಕ್ಷ್ಮಣ ರಾಠೋಡ ಹಾಗೂ ಸೈಯದಫಜಲುಲ್ಲಾ ಸೈಫುದ್ದೀನ್ ಇನಾಂದಾರ ಈ ಕುಖ್ಯಾತ ರೌಡಿಗಳನ್ನು ಗೂಂಡಾ ಕಾಯ್ದೆಯಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಆದರ್ಶನಗರ ಮತ್ತು ಗೋಲಗುಮ್ಮಜ್ ಪೊಲೀಸ್ ಠಾಣಾ ಸರಹದ್ದಿನ ಇಬ್ಬರು ಆರೋಪಿಗಳಾದ ಸುರೇಶ ಉರ್ಫ್ ಸಾಗರ ತಂದೆ ಲಕ್ಷ್ಮಣ ರಾಠೋಡ ಹಾಗೂ ಸೈಯದಫಜಲುಲ್ಲಾ ಸೈಫುದ್ದೀನ್ ಇನಾಂದಾರ ಈ ಕುಖ್ಯಾತ ರೌಡಿಗಳನ್ನು ಗೂಂಡಾ ಕಾಯ್ದೆಯಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

*ಹಂಚನಾಳ ತಾಂಡಾದ ಆರೋಪಿ ಸುರೇಶ ಉರ್ಫ್ ಸಾಗರ ತಂದೆ ಲಕ್ಷ್ಮಣ ರಾಠೋಡ ಇವನು ಒಂದು ಕೊಲೆ, ಮೂರು ಕೊಲೆ ಪ್ರಯತ್ನ ಹಾಗೂ ಹತ್ತು ಭಾರತೀಯ ಆಯುಧ ಕಾಯ್ದೆ ಅಡಿಯಲ್ಲಿ ಹೀಗೆ ಗ್ರಾಮೀಣ ಠಾಣೆಯಲ್ಲಿ 06, ಆದರ್ಶನಗರ ಠಾಣೆಯಲ್ಲಿ 04, ತಿಕೋಟಾ ಠಾಣೆಯಲ್ಲಿ 01, ಜಲನಗರ ಠಾಣೆಯಲ್ಲಿ 01, ಬಸವನ ಬಾಗೇವಾಡಿ ಠಾಣೆಯಲ್ಲಿ 01 ಹಾಗೂ ಸಿಂದಗಿ ಠಾಣೆಯಲ್ಲಿ 01 ಸೇರಿ ಒಟ್ಟು 14 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ತನ್ನ ಸಹಚರರೊಂದಿಗೆ ಸೇರಿ ಪದೇಪದೇ ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗಿ, ಸಮಾಜಕ್ಕೆ ಕಂಟಕಪ್ರಾಯವಾಗಿದ್ದರಿಂದ ಈತನನ್ನು ಗೂಂಡಾ ಕಾಯ್ದೆಯಲ್ಲಿ ಬಂಧಿಸಲಾಗಿದೆ.

*ನಗರದ ಗಚ್ಚಿನಮಹಲ ಏರಿಯಾ ಆರೋಪಿ ಸೈಯದಫಜಲುಲ್ಲಾ ಸೈಫುದ್ದೀನ್ ಇನಾಂದಾರ ಇವನು ಎರಡು ಕೊಲೆ, ಒಂದು ಕೊಲೆಯತ್ನ, ಒಂದು ದರೋಡೆಗೆ ಯತ್ನ ಹೀಗೆ ಗಾಂಧಿಚೌಕ ಠಾಣೆಯಲ್ಲಿ 01, ಗೋಗುಮ್ಮಜ್ ಠಾಣೆಯಲ್ಲಿ 01, ಜಲನಗರ ಠಾಣೆಯಲ್ಲಿ 01, ಬಬಲೇಶ್ವರ ಠಾಣೆಯಲ್ಲಿ 01 ಒಟ್ಟು 4 ಪ್ರಕರಣಗಳಲ್ಲಿ ಭಾಗಿಯಾಗಿದ್ಧಾನೆ. ತನ್ನ ಸಹಚರರೊಂದಿಗೆ ಸೇರಿಕೊಂಡು ಪದೇಪದೇ ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಯನ್ನು ಹಾಳುಗೆಡುವುದಲ್ಲದೇ, ಅಮಾಯಕ ಜನರ ಪ್ರಾಣಹಾನಿ ಮಾಡುವುದರಿಂದ ಇವನನ್ನು ಗೂಂಡಾ ಕಾಯ್ದೆಯಲ್ಲಿ ಬಂಧಿಸಲಾಗಿದೆ.

ಇವರಿಬ್ಬರೂ ನಿರಂತರವಾಗಿ ತನ್ನ ಸಮಾಜಘಾತಕ ಕೃತ್ಯಗಳನ್ನು ಮುಂದುವರಿಸಿ ಸಮಾಜದಲ್ಲಿ ಶಾಂತಿ, ನೆಮ್ಮದಿ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದು, ಇವರುಗಳ ಚಟುವಟಿಕೆಗಳನ್ನು ನಿಯಂತ್ರಿಸಲು ಮತ್ತು ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಗೂಂಡಾ ಕಾಯ್ದೆಯಡಿಯಲ್ಲಿ ಬಂಧನದಲ್ಲಿಡಲು ಪೊಲೀಸ್ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. 2026 ಏ.11 ರಂದು ಜಿಲ್ಲಾಧಿಕಾರಿಗಳು ಬಂಧನ ಆಜ್ಞೆ ಹೊರಡಿಸಿದ್ದು, ರೌಡಿ ಆಸಾಮಿಗಳನ್ನು ಬಂಧಿಸಿ ಕೇಂದ್ರ ಕಾರಾಗೃಹ ಮಂಗಳೂರು ಮತ್ತು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದು ಬಂಧನ ಪ್ರಕ್ರಿಯೆ ಮಾಡಲಾಗಿದೆ ಎಂದು ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

---------

12bij03, 12bij03a: ಇಬ್ಬರು ಕುಖ್ಯಾತ ರೌಡಿಗಳನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಿದ ಪೊಲೀಸರು