ಸಾರಾಂಶ
ಕರ್ತವ್ಯಕ್ಕೆ ಹೋಗುತ್ತಿದ್ದ ಪೇದೆ ಸಾವು
ಕನ್ನಡಪ್ರಭ ವಾರ್ತೆ ಬೆಳಗಾವಿ
ಕರ್ತವ್ಯಕ್ಕೆ ಹೋಗಲು ಬಸ್ಗಾಗಿ ಕಾದು ನಿಂತಿದ್ದಾಗ ದ್ವಿಚಕ್ರ ವಾಹನ ಸವಾರ ಡಿಕ್ಕಿ ಹೊಡೆದ ಪರಿಣಾಮ ಪೇದೆ ಸ್ಥಳದಲ್ಲಿಯೇ ಮೃತಪಟ್ಟು, ದ್ವಿಚಕ್ರ ವಾಹನ ಮೇಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಮಂಗಳವಾರ ನಡೆದಿದೆ.ಬೈಲಹೊಂಗಲ ತಾಲೂಕಿನ ನಾವಲಗಟ್ಟಿ ಗ್ರಾಮದವರಾದ, ಎಪಿಎಂಸಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಫಕ್ಕೀರಪ್ಪ ಅರ್ಜುನ ಉಪ್ಪಾರಟ್ಟಿ (35) ಮೃತ ಪೇದೆ. ಬೈಕ್ ಸವಾರರಿಬ್ಬರೂ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಬಿಮ್ಸ್ಗೆ ದಾಖಲಿಸಲಾಗಿದೆ. ಪೇದೆ ಫಕ್ಕೀರಪ್ಪ ಸಂಜೆ ಹೊತ್ತಿಗೆ ರಾತ್ರಿ ಕರ್ತವ್ಯ ಇರುವುದರಿಂದ ಬೆಳಗಾವಿಗೆ ಹೋಗುವುದಾಗಿ ಹೇಳಿ ನಾವಲಗಟ್ಟಿ ಗ್ರಾಮದಿಂದ ಬಂದಿದ್ದರು. ರಾತ್ರಿ ಠಾಣೆಯ ಸೆಂಟ್ರಿ ಕರ್ತವ್ಯ ಇರುವುದರಿಂದ ಕಾಕತಿಯಲ್ಲಿರುವ ಸ್ನೇಹಿತನ ಮನೆಗೆ ತೆರಳಿ ಕೆಲ ಸಮಯ ಕಳೆದಿದ್ದಾರೆ. ಕರ್ತವ್ಯದ ಸಮಯ ಆಗುತ್ತಿದ್ದಂತೆ ಸ್ನೇಹಿತನಿಗೆ ತಿಳಿಸಿ ಬಸ್ಗಾಗಿ ಕಾಕತಿಯ ಹೆದ್ದಾರಿ ಪಕ್ಕ ಕಾಯುತ್ತ ನಿಂತಿದ್ದರು. ನಂತರ ಹಿಂಬದಿಯಿಂದ ಬಂದ ಬೈಕ್ ಇವರಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಪೇದೆ ಸ್ಥಳದಲ್ಲೇ ಅಸುನೀಗಿದ್ದಾರೆ.
ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.