ಉಡುಪಿ: ಇಲ್ಲಿನ ಹಾವಂಜೆಯ ಬೋಧಿಸತ್ವ ಬುದ್ಧವಿಹಾರದಲ್ಲಿ ಬೋಧಿಸತ್ವ ಬುದ್ಧ ಫೌಂಡೇಶನ್ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಮಾರ್ಗ) ಸಹಯೋಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಅಂಗವಾಗಿ ಭೀಮ್ ಜಯಂತೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಮಹಾಬೋಧಿ ಲೋಕಶಾಂತಿ ಬುದ್ಧವಿಹಾರದ ಪೂಜ್ಯ ಪಣ್ಯಪಾಲ ಭಂತೇಜಿ, ಪೂಜ್ಯ ಸದ್ಧಾರಖಿತ ಭಂತೇಜಿ, ಪೂಜ್ಯ ಧಮ್ಮವರೋ ಭಂತೇಜಿ, ಪೂಜ್ಯ ಸಂತಚಿತ್ತೋ ಭಂತೇಜಿ ಅವರ ಸಾನಿಧ್ಯದಲ್ಲಿ ಬುದ್ಧ ವಂದನೆ, ಧಮ್ಮ ವಂದನೆ ಹಾಗೂ ಸಂಘ ವಂದನೆ ನೆರವೇರಿಸಲಾಯಿತು.

ಕಾರ್ಯಕ್ರಮವನ್ನು ಉಡುಪಿ ಜಿಲ್ಲೆ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಅಧ್ಯಕ್ಷ ಅಜಯ್ ಕುಮಾರ್ ಉದ್ಘಾಟಿಸಿದರು. ಬೆಳಗಾವಿ ಕದಸಂಸ (ಅಂಬೇಡ್ಕರ್ ಮಾರ್ಗ) ಇದರ ರಾಜ್ಯ ಸಂಘಟನಾ ಸಂಚಾಲಕ ರಾಜು ಎಂ ತಳವಾರ ವಹಿಸಿದ್ದರು.

ಬೋಧಿಸತ್ವ ಬುದ್ಧ ಫೌಂಡೇಶನ್ ಅಧ್ಯಕ್ಷ ಶೇಖರ್ ಹಾವಂಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಸಾಹಿತಿ ಡಾ. ಕೆ. ಎ. ಓಬಳೇಶ್, ಬ್ರಹ್ಮಾವರದ ರುಡ್ ಸೆಟ್ ನಿರ್ದೇಶಕ ಡಾ ಬೊಮ್ಮಯ್ಯ, ಪತ್ರಕರ್ತ ಅಶೋಕ್ ದಾವಣಗೆರೆ, ಆವರ್ಸೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಿವ್ಯ ಶೇಖರ್, ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ, ಹಾವಂಜೆ ಗ್ರಾಪಂ ಗುಮಾಸ್ತ ಸದಾಶಿವ ಹಾವಂಜೆ ಭಾಗವಹಿಸಿದ್ದರು. ಯುವ ಧಮ್ಮಾಚಾರಿ ಮುರಳಿ ಎಂ. ಮಾರ್ಪಳ್ಳಿ, ಹಿರಿಯ ಧಮ್ಮಾಚಾರಿ ಶಂಭು ಸುವರ್ಣ ಉಪಸ್ಥಿತರಿದ್ದರು, ಬೌದ್ಧ ಉಪಾಸಕ ಪಕೀರಪ್ಪ ಎಂ ಸ್ವಾಗತಿಸಿ, ಜಯಶೀಲ ಬಿ. ರೋಟೆ ಬ್ರಹ್ಮಾವರ ಕಾರ್ಯಕ್ರಮ ನಿರೂಪಿಸಿದರು. ಶರತ್ ಹಾವಂಜೆ ವಂದಿಸಿದರು.