ಉಡುಪಿ: ಖ್ಯಾತ ಹೃದ್ರೋಗ ತಜ್ಞ ಡಾ. ರಂಜನ್‌ ಶೆಟ್ಟಿ ನೇತೃತ್ವದ ತಪಾಸಣೆ ಶಿಬಿರ

| Published : Aug 17 2025, 03:18 AM IST

ಉಡುಪಿ: ಖ್ಯಾತ ಹೃದ್ರೋಗ ತಜ್ಞ ಡಾ. ರಂಜನ್‌ ಶೆಟ್ಟಿ ನೇತೃತ್ವದ ತಪಾಸಣೆ ಶಿಬಿರ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿಯ ಹೈಟೆಕ್ ಮೆಡಿಕೇರ್ ಆಸ್ಪತ್ರೆಯಲ್ಲಿ ತಿಂಗಳಿಗೊಮ್ಮೆ ವಿಶೇಷ ‘ಹೃದ್ರೋಗ ಆರೈಕೆ ಮತ್ತು ಜಾಗೃತಿ ಶಿಬಿರ’ವನ್ನು ತಾನು ನಡೆಸಿಕೊಡಲಿರುವುದಾಗಿ ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯ ನೈದ್ಯಕೀಯ ನಿರ್ದೇಶಕ, ಖ್ಯಾತ ಹೃದ್ರೋಗ ತಜ್ಞ ಡಾ. (ಪ್ರೊ) ರಂಜನ್ ಶೆಟ್ಟಿ ಹೇಳಿದ್ದಾರೆ.

ಯುವಜನತೆಯಲ್ಲಿ ಹೆಚ್ಚುತ್ತಿರುವ ಹೃದಯಾಘಾತದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ

ಉಡುಪಿ: ಭಾರತದಲ್ಲಿ ಯುವಜನರು ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತ ಮತ್ತು ಇತರ ಹೃದ್ರೋಗಗಳಿಗೆ ತುತ್ತಾಗುತ್ತಿರುವ ಪ್ರಕರಣಗಳು ಇತ್ತೀಚೆಗೆ ಆತಂಕಕಾರಿಯಾಗಿ ಹೆಚ್ಚುತ್ತಿವೆ. ಅಧಿಕ ಕೊಲೆಸ್ಟ್ರಾಲ್ ಮತ್ತು ರಕ್ತನಾಳಗಳಲ್ಲಿನ ಅಡಚಣೆಯಂತಹ ಸಮಸ್ಯೆಗಳು ಬಾಲ್ಯದಿಂದಲೇ ಆರಂಭವಾಗಬಹುದು. ಈ ಹಿನ್ನೆಲೆಯಲ್ಲಿ ನಗರದ ಹೈಟೆಕ್ ಮೆಡಿಕೇರ್ ಆಸ್ಪತ್ರೆಯಲ್ಲಿ ತಿಂಗಳಿಗೊಮ್ಮೆ ವಿಶೇಷ ‘ಹೃದ್ರೋಗ ಆರೈಕೆ ಮತ್ತು ಜಾಗೃತಿ ಶಿಬಿರ’ವನ್ನು ತಾನು ನಡೆಸಿಕೊಡಲಿದ್ದೇನೆ ಎಂದು ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯ ನೈದ್ಯಕೀಯ ನಿರ್ದೇಶಕ, ಖ್ಯಾತ ಹೃದ್ರೋಗ ತಜ್ಞ ಡಾ. (ಪ್ರೊ) ರಂಜನ್ ಶೆಟ್ಟಿ ಹೇಳಿದ್ದಾರೆ.

ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಗಂಭೀರ ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ಮತ್ತು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದರ ಬಗ್ಗೆ ಜಾಗೃತಿ ಮೂಡಿಸುವುದು ಈ ಶಿಬಿರದ ಮುಖ್ಯ ಉದ್ದೇಶ ಎಂದರು.ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತದ ಪ್ರಮಾಣವು ತೀವ್ರ ಹೆಚ್ಚಾಗಿರುವುದು ಮತ್ತು ನಮ್ಮ ದೇಶದಲ್ಲಿ ಹೃದಯಾಘಾತಕ್ಕೆ ತುತ್ತಾಗುವವರಲ್ಲಿ ಶೇ. 50ರಷ್ಟು ಮಂದಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂಬುದು ಆಘಾತಕಾರಿ. ಆದರೆ, ಸಕಾಲಿಕ ಆರೋಗ್ಯ ತಪಾಸಣೆ ಮತ್ತು ಜೀವನಶೈಲಿಯಲ್ಲಿನ ಸಕಾರಾತ್ಮಕ ಬದಲಾವಣೆಗಳಿಂದ ಶೇ. 80ಕ್ಕಿಂತಲೂ ಹೆಚ್ಚು ಹೃದ್ರೋಗಗಳನ್ನು ಖಂಡಿತವಾಗಿಯೂ ತಡೆಯಲು ಸಾಧ್ಯವಿದೆ. 20ರಿಂದ 30 ಅಥವಾ 40ನೇ ವಯಸ್ಸಿನಲ್ಲಿಯೇ ಈ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಂಡರೆ, ಭವಿಷ್ಯದಲ್ಲಿ ಎದುರಾಗಬಹುದಾದ ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ದೊಡ್ಡ ಮಟ್ಟದಲ್ಲಿ ತಗ್ಗಿಸಬಹುದು ಎಂದು ವಿವರಿಸಿದರು.

ದಿನವಿಡೀ ನಡೆಯಲಿರುವ ಈ ಶಿಬಿರದಲ್ಲಿ ತಮ್ಮ ವೈದ್ಯಕೀಯ ತಂಡವು ಸಾರ್ವಜನಿಕರಿಗಾಗಿ ಹೃದ್ರೋಗ ತಪಾಸಣೆ ಮತ್ತು ಇತರ ಮೂಲಭೂತ ಪರೀಕ್ಷೆಗಳನ್ನು ನಡೆಸಲಿದೆ. ಇದಲ್ಲದೆ, ಆರೋಗ್ಯಕರ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ, ಮತ್ತು ಒತ್ತಡ ನಿರ್ವಹಣೆಯ ಕುರಿತು ತಜ್ಞರಿಂದ ಸಮಾಲೋಚನೆ ಹಾಗೂ ಸಲಹೆಗಳನ್ನು ನೀಡಲಾಗುವುದು. ಜೊತೆಗೆ, ಹೃದ್ರೋಗದ ಆರಂಭಿಕ ಲಕ್ಷಣಗಳು ಹಾಗೂ ತಡೆಗಟ್ಟುವ ವಿಧಾನಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಯುವಜನರು ತಮ್ಮ ಹೃದಯದ ಆರೋಗ್ಯದ ಬಗ್ಗೆ ಸ್ವತಃ ಹೊಣೆಗಾರಿಕೆ ವಹಿಸಿಕೊಳ್ಳಬೇಕು ಮತ್ತು ಮುಂದೆಂದೂ ಸರಿಪಡಿಸಲಾಗದಂತಹ ಹಾನಿ ಸಂಭವಿಸುವ ಮುನ್ನವೇ ತಮ್ಮ ಜೀವನಶೈಲಿಯಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅವರನ್ನು ಪ್ರೇರೇಪಿಸುವುದೇ ಈ ಉಪಕ್ರಮದ ಪ್ರಮುಖ ಗುರಿಯಾಗಿದೆ. ಉಡುಪಿಯ ಯುವಜನತೆ ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.