ವೈಭವದ ಉಡುಪಿ ದಸರಾ: ವಿಸರ್ಜನಾ ಶೋಭಾಯಾತ್ರೆ ಸಂಪನ್ನ
KannadaprabhaNewsNetwork | Published : Oct 25 2023, 01:15 AM IST
ವೈಭವದ ಉಡುಪಿ ದಸರಾ: ವಿಸರ್ಜನಾ ಶೋಭಾಯಾತ್ರೆ ಸಂಪನ್ನ
ಸಾರಾಂಶ
ಭವ್ಯವಾದ ಈ ಶೋಭಾಯಾತ್ರೆಯಲ್ಲಿ ವಿವಿಧ ಕುಣಿತಾ ಭಜನಾ ತಂಡಗಳು, ನಾಸಿಕ್ ಬ್ಯಾಂಡ್, ಚೆಂಡೆ ವಾದನ, ಛತ್ರಪತಿ ಶಿವಾಜಿ ಮಹಾರಾಜ್, ಶಿವಪಾರ್ವತಿ ಇತ್ಯಾದಿ ವೈವಿಧ್ಯಮಯ ಸ್ತಬ್ಧಚಿತ್ರಗಳು, ತಟ್ಟಿರಾಯ, ಕೀಲುಕುದುರೆಗಳು ಮೆರವಣಿಗೆಯ ಮೆರಗು ಹೆಚ್ಚಿಸಿದವು.
ಕನ್ನಡಪ್ರಭ ವಾರ್ತೆ ಉಡುಪಿ ಉಡುಪಿ ನಗರದ ಗೋವಿಂದ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿಯಿಂದ ನಡೆದ 8ನೇ ವರ್ಷದ ಉಡುಪಿ ದಸರಾದಲ್ಲಿ ಪೂಜಿಸಲ್ಪಟ್ಟ ಶಾರದಾ ಮಾತೆಯ ವಿಸರ್ಜನಾ ಶೋಭಾ ಯಾತ್ರೆಯು ಸೋಮವಾರ ಸಂಜೆ ವೈಭವದಿಂದ ನಡೆಯಿತು. ಸಮಿತಿಯ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ ಬೈಕಾಡಿ ಉಪಸ್ಥಿತಿಯಲ್ಲಿ ಯುವ ಉದ್ಯಮಿ ಪಿ. ಅಜೇಯ ಶೆಟ್ಟಿ ಶೋಭಾಯಾತ್ರೆಗೆ ಚಾಲನೆ ನೀಡಿ ಶುಭ ಹಾರೈಸಿದರು. ಭವ್ಯವಾದ ಈ ಶೋಭಾಯಾತ್ರೆಯಲ್ಲಿ ವಿವಿಧ ಕುಣಿತಾ ಭಜನಾ ತಂಡಗಳು, ನಾಸಿಕ್ ಬ್ಯಾಂಡ್, ಚೆಂಡೆ ವಾದನ, ಛತ್ರಪತಿ ಶಿವಾಜಿ ಮಹಾರಾಜ್, ಶಿವಪಾರ್ವತಿ ಇತ್ಯಾದಿ ವೈವಿಧ್ಯಮಯ ಸ್ತಬ್ಧಚಿತ್ರಗಳು, ತಟ್ಟಿರಾಯ, ಕೀಲುಕುದುರೆಗಳು ಮೆರವಣಿಗೆಯ ಮೆರಗು ಹೆಚ್ಚಿಸಿದವು. ಮಂಗಳವಾದ್ಯದೊಂದಿಗೆ ಗೋವಿಂದ ಕಲ್ಯಾಣ ಮಂಟಪದಿಂದ ಹೊರಟ ಶೋಭಾಯಾತ್ರೆಯು ಜೋಡು ರಸ್ತೆ, ಬಿಗ್ ಬಜಾರ್, ಕವಿ ಮುದ್ದಣ ಮಾರ್ಗ, ತ್ರಿವೇಣಿ ಸರ್ಕಲ್, ಸರ್ವಿಸ್ ಬಸ್ ಸ್ಟ್ಯಾಂಡ್ , ಸಿಟಿ ಬಸ್ ನಿಲ್ದಾಣದಿಂದ ಮುಂದೆ ಸಾಗಿ ಬನ್ನಂಜೆ ಶ್ರೀ ಶಂಕರ ನಾರಾಯಣ ದೇವಳದವರೆಗೆ ಸಾಗಿ, ಅಲ್ಲಿನ ಪದ್ಮಸರೋವರದಲ್ಲಿ ಶ್ರೀ ಶಾರದಾ ವಿಗ್ರಹವನ್ನು ವಿಸರ್ಜನೆ ಮಾಡಲಾಯಿತು ಮೂರು ದಿನಗಳ ಕಾಲ ನಡೆದ ಶಾರದಾ ಮಹೋತ್ಸವದಲ್ಲಿ ವೇ.ಮೂ. ದಾಮೋದರ ಭಟ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶಾರದಾ ಮಹೋತ್ಸವ ಸಮಿತಿಯ ಪ್ರಮುಖರಾದ, ಅಂಡಾರು ದೇವಿಪ್ರಸಾದ್ ಶೆಟ್ಟಿ, ಪದ್ಮಾ ರತ್ನಾಕರ್, ಲಕ್ಷ್ಮೀನಾರಾಯಣ ಮಟ್ಟು, ರಾಧಾಕೃಷ್ಣ ಮೆಂಡನ್, ತಾರಾ ಉಮೇಶ್ ಆಚಾರ್ಯ, ಸತೀಶ್ ಕುಮಾರ್ ಉಡುಪಿ, ಸರೋಜಾ ರಾವ್, ವೀಣಾ ಎಸ್.ಶೆಟ್ಟಿ, ಜ್ಯೋತಿ ದೇವಾಡಿಗ, ಸರೋಜಾ ಯಶವಂತ್, ವಿದ್ಯಾ ಸರಸ್ವತಿ ಸುರೇಶ ಶೇರಿಗಾರ್, ಹರೀಶ್ ಪುತ್ರನ್, ವೇದಾವತಿ ಶೆಟ್ಟಿ, ಶೋಭಾ ಶೆಟ್ಟಿ, ಜಯರಾಮ್ ದೇವಾಡಿಗ ಮುಂತಾದವರು ನೇತೃತ್ವ ವಹಿಸಿದ್ದರು. ಫೋಟೋ: ಉಡುಪಿ ಶಾರದೆ ಉಡುಪಿ ದಸರಾದ ವೈಭವದ ಶೋಭಾಯತ್ರೆಗೆ ಚಾಲನೆ