ಉಡುಪಿ: ಉಡುಪಿಯ ಯುವಜನತೆಗೆ ಉದ್ಯೋಗ, ಇಂಟರ್ನ್‌ಶಿಪ್ ಮತ್ತು ವೃತ್ತಿ ಮಾರ್ಗದರ್ಶನ ಒದಗಿಸುವ ಆಶಯದಿಂದ ಮೇ 18ರಂದು ಕೊಡವೂರಿನಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದೆ ಎಂದು ಈ ಉದ್ಯೋಗ ಮೇಳದ ಅಧ್ಯಕ್ಷೆ ಡಾ. ದಿವ್ಯರಾಣಿ‌ ಬುಧವಾರ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.ಸಾರಲತಾ ಐಟಿ ಸೊಲ್ಯೂಷನ್ಸ್ ಮತ್ತು ಸರಳಾ ಬಾಬುರಾವ್‌ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.ಟೊಯೋಟಾ-ಕಿರ್ಲೋಸ್ಕರ್, ಇನ್‌ವೆಂಜ‌ರ್ ಟೆಕ್ನಾಲಜೀಸ್, ಮೆಜೆಸ್ಟಿಕ್ ಗ್ಲೋಬಲ್ ಲಾಜಿಸ್ಟಿಕ್ಸ್, ಅನಾನ್ ಗ್ರೂಪ್ ವಿನ್‌ಮ್ಯಾನ್ ಸಾಫ್ಟ್‌ವೇರ್, ಅಮೆಝಾನ್, ಬ್ರೇವರಾ ಟೆಕ್ನಾಲಜೀಸ್, ವಿಆರ್‌ಎನ್ ಇನ್ಫೋಟೆಕ್, ಡಾ.ರೆಡ್ಡಿಸ್ ಫೌಂಡೇಶನ್, ಸ್ವಿಗ್ಗಿ, ಎಚ್‌ಡಿಎಫ್‌ಸಿ ಬ್ಯಾಂಕ್, ಮಣಿಪಾಲ್‌ ಪೇಮೆಂಟ್ ಆ್ಯಂಡ್ ಐಡೆಂಟಿಟಿ ಮತ್ತು ಅಕೋಲೇಡ್ ಮುಂತಾದ ಕಂಪನಿಗಳು ಭಾಗವಹಿಸಲಿವೆ. ಪದವಿ, ಡಿಪ್ಲೊಮಾ, ಎಂಜಿನಿಯರಿಂಗ್, ಐಟಿಐ, ಪಿಯುಸಿ, ಎಸ್‌ಎಸ್‌ಎಲ್‌ಸಿ ಹಾಗೂ ವಿವಿಧ ಕೌಶಲ್ಯಾಧರಿತ ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ 6 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶ ಲಭ್ಯವಾಗಲಿವೆ. ಹೊಸ ಅಭ್ಯರ್ಥಿಗಳು ಹಾಗೂ ಅನುಭವ ಹೊಂದಿದವರಿಗೆ ಅವಕಾಶವಿದೆ.ವಿಶೇಷವಾಗಿ ಈ ಮೇಳದಲ್ಲಿ ಸ್ಟಾರ್ಟ್ಅಪ್ ಹಾಗೂ ಸ್ವಯಂ ಉದ್ಯೋಗ ಮಾರ್ಗದರ್ಶನ ನಡೆಸಲಾಗುತ್ತದೆ. ಮಣಿಪಾಲ್ ಯುನಿವರ್ಸಲ್ ಬಿಸಿನೆಸ್ ಇಂಕ್ಯೂಬೇಟರ್ಸ್, ಯೆನಪೋಯ ಟೆಕ್ನಾಲಜಿ ಇಂಕ್ಯೂಬೇಟರ್ ಮತ್ತು ರುಡೋಟಿ ಸಂಸ್ಥೆಗಳು ಉದ್ಯಮ ಆರಂಭಿಸಲು ಬಯಸುವ ಯುವಜನತೆಗೆ ಮಾರ್ಗದರ್ಶನ ಹಾಗೂ ಮೆಂಟರ್‌ಶಿಪ್ ನೀಡಲಿವೆ ಎಂದು ಡಾ.ದಿವ್ಯಾರಾಣಿ ಹೇಳಿದರು.ಆಸಕ್ತರು ಅಂದು ಬೆಳಗ್ಗೆ 9 ಗಂಟೆಯಿಂದ ಅಪರಾಹ್ನ 4 ರವರೆಗೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಸಮೀಪದ ವಿಪ್ರಶ್ರೀ ಸಭಾಭವನಕ್ಕೆ ನೇರವಾಗಿ ಭೇಟಿ ನೀಡಬಹುದು. ಅಭ್ಯರ್ಥಿಗಳು ಕನಿಷ್ಠ 5ರಿಂದ 7 ಪ್ರತಿಗಳ ಸಿವಿ‌ ಹಾಗೂ ಐಡಿ ಕಾರ್ಡ್ ತರಬೇಕು ಎಂದವರು ತಿಳಿಸಿದರು.ಉದ್ಯೋಗ ಮೇಳದ ಕಾರ್ಯದರ್ಶಿ ರೇವತಿ ನಾಡಿಗೇರ್, ಮೇ 18ರಂದು ನಡೆಯುವ ಉದ್ಘಾಟನ ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ. ಖಾದರ್, ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್‌, ಕಾರ್ಯಕ್ರಮ ಪ್ರಾಯೋಜಕ ಪ್ರಸಾದ್ ರಾಜ್ ಕಾಂಚನ್, ಎಚ್.ಪಿ.ಆರ್ ಗ್ರೂಪ್‌ನ ಅಧ್ಯಕ್ಷ ಹರಿಪ್ರಸಾದ್ ರೈ, ನಗರಸಭೆ ಆಯುಕ್ತ ಮಹಾಂತೇಶ್ ಹಂಗರಗಿ, ಶ್ರೀನಿವಾಸ್ ಯುನಿವರ್ಸಿಟಿ ನಿರ್ದೇಶಕಿ ಡಾ.ದಿವ್ಯಾರಾಣಿ ಪ್ರದೀಪ್ ಭಾಗವಹಿಸಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಾತ್ವಿಕ್ ಎಸ್. ಆಚಾರ್ಯ, ಧ್ರುವರಾಜ್ ಮೊದಲಾದವರಿದ್ದರು.