ಸಾರಾಂಶ
ಸಾವಿರಾರು ಭಕ್ತರ ಭಾಗವಹಿಸುವಿಕೆಯಲ್ಲಿ ಶ್ರೀ ಶಾರದಾ ಮಾತೆಯ ವಿಸರ್ಜನಾ ಶೋಭಾಯಾತ್ರೆ ದೇವಳದದಿಂದ ಹೊರಟು ಹಳೇ ಡಯಾನ ಸರ್ಕಲ್, ಕೆ.ಎಂ. ಮಾರ್ಗ, ತ್ರಿವೇಣಿ ಸರ್ಕಲ್, ಚಿತ್ತರಂಜನ್ ಸರ್ಕಲ್, ಮುಖ್ಯ ರಸ್ತೆಯಲ್ಲಿ ಸಾಗಿ ಬಂದು ಕೊಳದಪೇಟೆಯಾಗಿ, ಶ್ರೀ ದೇವಳಕ್ಕೆ ಬಂದು ದೇವಳದ ಪದ್ಮ ಸರೋವರದಲ್ಲಿ ತೆಪ್ಪೋತ್ಸವ ನಡೆಸಿ ಜಲಸ್ತಂಭನ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ತೆಂಕಪೇಟೆಯ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ನವರಾತ್ರಿ ಸಂದರ್ಭ ಪೂಜಿಸಲಾದ ಶ್ರೀ ಶಾರದಾ ಮಾತೆಯ ವಿಸರ್ಜನಾ ಶೋಭಾಯಾತ್ರೆಯು ಸೋಮವಾರ ವಿಜೃಂಭಣೆಯಿಂದ ನಡೆಯಿತು.ಈ ಸಂದರ್ಭ ಶ್ರೀ ದೇವಿಗೆ ಮಲ್ಲಿಗೆಯ ವಿಶೇಷ ಅಲಂಕಾರ ಮಾಡಲಾಗಿತ್ತು. ಅರ್ಚಕ ವಿನಾಯಕ್ ಭಟ್, ಶ್ರೀ ಶಾರದಾ ದೇವಿಗೆ ಆರತಿ ಬೆಳಗಿಸಿ ವಿಸರ್ಜನಾ ಮೆರವಣಿಗೆ ಚಾಲನೆ ನೀಡಿದರು.ನಂತರ ಸಾವಿರಾರು ಭಕ್ತರ ಭಾಗವಹಿಸುವಿಕೆಯಲ್ಲಿ ಶ್ರೀ ಶಾರದಾ ಮಾತೆಯ ವಿಸರ್ಜನಾ ಶೋಭಾಯಾತ್ರೆ ದೇವಳದದಿಂದ ಹೊರಟು ಹಳೇ ಡಯಾನ ಸರ್ಕಲ್, ಕೆ.ಎಂ. ಮಾರ್ಗ, ತ್ರಿವೇಣಿ ಸರ್ಕಲ್, ಚಿತ್ತರಂಜನ್ ಸರ್ಕಲ್, ಮುಖ್ಯ ರಸ್ತೆಯಲ್ಲಿ ಸಾಗಿ ಬಂದು ಕೊಳದಪೇಟೆಯಾಗಿ, ಶ್ರೀ ದೇವಳಕ್ಕೆ ಬಂದು ದೇವಳದ ಪದ್ಮ ಸರೋವರದಲ್ಲಿ ತೆಪ್ಪೋತ್ಸವ ನಡೆಸಿ ಜಲಸ್ತಂಭನ ಮಾಡಲಾಯಿತು.ಶೋಭಾಯಾತ್ರೆಯಲ್ಲಿ ಮಂಗಳವಾದ್ಯ, ನಾಸಿಕ್ ಬ್ಯಾಂಡ್, ಸ್ತಬ್ಧ ಚಿತ್ರಗಳಾದ ಶ್ರೀ ವೆಂಕಟರಮಣ, ಶ್ರೀ ರಾಮನ ಪಟ್ಟಾಭೀಷೇಕ, ಕೂರ್ಮಾವತಾರ, ಶಿವ ತಾಂಡವ, ಕೊಲ್ಲೂರು ಮೂಕಾಂಬಿಕ, ಸರಸ್ಪತಿ ಮುಂತಾದ ವಿವಿಧ ಆಕರ್ಷಕ ಟ್ಯಾಬ್ಲೋಗಳು ಮೆರವಣಿಗೆಗೆ ಮೆರಗು ತಂದವು. ಶ್ರೀ ರಾಘವೇಂದ್ರ ಭಜನಾ ಉಡುಪಿ ತಂಡದವರಿಂದ ಪದ್ಮ ಸರೋವರದ ದಡದಲ್ಲಿ ವಿಶೇಷ ಭಜನೆ ಜರುಗಿತು.ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಪಿ.ವಿ. ಶೆಣೈ, ನರಹರಿ ಪೈ, ವಿಶಾಲ್ ಶೆಣೈ, ಆಡಳಿತ ಮಂಡಳಿ ಸದಸ್ಯರು, ಜಿ.ಎಸ್.ಬಿ. ಯುವಕ ಮಂಡಳಿ, ಮಹಿಳಾ ಮಂಡಳಿ ಸದಸ್ಯರು, ಶ್ರೀ ಶಾರದಾ ಮಹೋತ್ಸವ ಸಮಿತಿಯ ಸದಸ್ಯರು, ಸಾವಿರಾರು ಭಕ್ತರು ಪಾಲ್ಗೊಂಡರು.