ಉಡುಪಿ: ಕರಾವಳಿ ಕರ್ನಾಟಕದ ಪ್ರದೇಶದ ತಿಗಳಾರಿ ಲಿಪಿ ಮತ್ತು ಮೋಡಿ ಕನ್ನಡ ಲಿಪಿಯಲ್ಲಿರುವ ಆಯುರ್ವೇದ ಹಸ್ತಪ್ರತಿಗಳ ಲಿಪ್ಯಂತರ ಕಲಿಕಾ ಕಾರ್ಯಾಗಾರವನ್ನು, ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ನವದೆಹಲಿ ಮತ್ತು ಕೇಂದ್ರೀಯ ಆಯುರ್ವೇದೀಯ ವಿಜ್ಞಾನ ಅನುಸಂಧಾನ ಪರಿಷತ್‌ಗಳ ಮಾರ್ಗದರ್ಶನ ಹಾಗೂ ಆರ್ಥಿಕ ಸಹಭಾಗಿತ್ವದಲ್ಲಿ ಉಡುಪಿಯ ಪುತ್ತಿಗೆ ಮಠದ ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನದ ವತಿಯಿಂದ ಗೀತಾ ಮಂದಿರದಲ್ಲಿ ಭಾನುವಾರ ಆಯೋಜಿಸಲಾಗಿತ್ತು.

ಭಾರತ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ‘ಜ್ಞಾನ ಭಾರತಂ ಮಿಶನ್’ನ ಹಿನ್ನೆಲೆಯಲ್ಲಿ ಈಗಾಗಲೇ ದೇಶದಾದ್ಯಂತ 1 ಕೋಟಿಗೂ ಅಧಿಕ ಹಸ್ತಪ್ರತಿಗಳನ್ನು ಸರ್ವೇ ಮಾಡಲಾಗಿದೆ. ಅದರಂತೆ ವಿವಿಧ ಭಾಷೆಯ, ವಿವಿಧ ವಿಷಯಗಳ ಹಸ್ತಪ್ರತಿಗಳ ಲಿಪ್ಯಂತರ ಕಾರ್ಯವನ್ನು ಆಯೋಜಿಸಲಾಗಿದೆ. ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯದ ಕೇಂದ್ರೀಯ ಆಯುರ್ವೇದ ವಿಜ್ಞಾನ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ಪ್ರೋ. ವೈದ್ಯ ರಬಿನಾರಾಯಣ ಆಚಾರ್ಯ ಉದ್ಘಾಟಿಸಿದರು.ಹೈದರಾಬಾದಿನ ರಾಷ್ಟ್ರೀಯ ಭಾರತೀಯ ವೈದ್ಯಕೀಯ ಪರಂಪರೆ ಸಂಸ್ಥೆಯ ಸಹಾಯಕ ನಿರ್ದೇಶಕ ಡಾ. ಜಿ ಪಿ ಪ್ರಸಾದ್, ನಿಟ್ಟೆ ವಿಶ್ವವಿದ್ಯಾಲಯದ ಐಕೆಎಸ್ ಕೇಂದ್ರದ ನಿರ್ದೇಶಕ ಡಾ ಸುಧೀರ್ ರಾಜ್ ಕೆ. ಭಾಗವಹಿಸಿದ್ದರು.

ಶ್ರೀ ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ, ಬೆಂಗಳೂರಿನ ಕೇಂದ್ರೀಯ ಆಯುರ್ವೇದೀಯ ಅನುಸಂಧಾನ ಸಂಸ್ಥಾನದ ಬೆಂಗಳೂರು ವಿಭಾಗದ ಸಹಾಯಕ ನಿರ್ದೇಶಕರಾದ ಡಾ.ಮಹೇಶ್ವರ ಟಿ, ರಾಜಸ್ಥಾನದ ಎಂ. ಎಸ್. ಪ್ರಾದೇಶಿಕ ಆಯುರ್ವೇದ ಸಂಶೋಧನಾ ಸಂಸ್ಥೆಯ ಸಂಶೋಧನಾಧಿಕಾರಿ ಡಾ. ವಿನೋದ್ ಕುಮಾರ್ ಲಾವಣಿಯಾ, ನವದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಭಾಷಾ ವಿದ್ವಾಂಸ ಡಾ. ಕೀರ್ತಿಕಾಂತ್ ಶರ್ಮಾ, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಡಾ .ಆರ್ ಎಲ್ ನಾರಾಯಣ ಸಿಂಹ, ಡಾ. ದಿಲೀಪ್ ಕುಮಾರ್ ಕಾರ್ ಹಾಗೂ ಉದ್ಯಾವರದ ಎಸ್.ಡಿ.ಎಂ. ಆಯುರ್ವೇದ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ. ಮಹಾಲಕ್ಷ್ಮಿ ಎಂ. ಎಸ್., ಡಾ. ದೀಕ್ಷಿತಾ ಹೆಬ್ಬಾರ್, ಡಾ ಸುದರ್ಶನ್ ಹಾಗೂ ಶ್ರೀ ಪುತ್ತಿಗೆ ವಿದ್ಯಾಪೀಠದ ವಿದ್ವಾಂಸ ಡಾ ಸುನಿಲ್ ಆಚಾರ್ಯ, ಸುಗುಣ ಮಾಲಾ ಪತ್ರಿಕೆಯ ಸಂಪಾದಕ ವಿದ್ವಾನ್ ಮಹಿತೋಷ ಆಚಾರ್ಯ, ಉಡುಪಿಯ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಎಸ್. ಎ. ಕೃಷ್ಣಯ್ಯ ಮುಂತಾದ ಪ್ರಸಿದ್ಧ ವಿದ್ವಾಂಸರು ಉಪಸ್ಥಿತರಿದ್ದರು. ವಾದಿರಾಜ ಸಂಶೋಧನ ಪ್ರತಿಷ್ಠಾನದ ವಿದ್ವಾನ್ ಗೋಪಾಲಾಚಾರ್ಯ ನಿರೂಪಿಸಿದರು.