ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ಯೋಜನೆಯ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಯಜ್ಞ (ಕುಸುಮಾ ಮತ್ತು ಕೃಷ್ಣ ಅವರ ಪುತ್ರಿ) ಅವರಿಗೆ ಉದ್ಯಾವರದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷರು ಹಾಗೂ ನಂದಕುಮಾರ್ ಎಸೋಸಿಯೇಟ್ಸ್ ನ ವರಿಷ್ಠರಾದ ಎಂ. ಗಂಗಾಧರ ರಾವ್ ಅವರ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ ನೂತನ ಮನೆ ನಂದಾದೀಪವನ್ನು ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಶನಿವಾರ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಕಾಪು: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ಯೋಜನೆಯ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಯಜ್ಞ (ಕುಸುಮಾ ಮತ್ತು ಕೃಷ್ಣ ಅವರ ಪುತ್ರಿ) ಅವರಿಗೆ ಉದ್ಯಾವರದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷರು ಹಾಗೂ ನಂದಕುಮಾರ್ ಎಸೋಸಿಯೇಟ್ಸ್ ನ ವರಿಷ್ಠರಾದ ಎಂ. ಗಂಗಾಧರ ರಾವ್ ಅವರ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ ನೂತನ ಮನೆ ನಂದಾದೀಪವನ್ನು ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಶನಿವಾರ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ನಂತರ ಶ್ರೀಗಳು ತಮ್ಮ ಅನುಗ್ರಹ ಸಂದೇಶದಲ್ಲಿ, ಗಂಗಾಧರ ರಾವ್ ಅವರು ಮಾದರಿ ಸಂಸ್ಥೆಯ ಮಾದರಿ ಅಧ್ಯಕ್ಷರಾಗಿದ್ದಾರೆ. ತಮ್ಮ ದುಡಿಮೆಯ ಒಂದು ಪಾಲನ್ನು ಸಮಾಜಕ್ಕೆ ಅರ್ಪಿಸಿ ಸಂತೋಷವನ್ನು ಹೊಂದುವ ವಿರಳರಲ್ಲಿ ಒಬ್ಬರು. ಅವರಲ್ಲಿ ಮುಗ್ಧತೆ ಇದೆ. ತಮ್ಮೊಂದಿಗೆ ಇರುವವರು ಸುಖವಾಗಿರಬೇಕೆಂಬ ಕಾಳಜಿಯಿದೆ. ದಾನಿಗಳಿಂದ ಸ್ವೀಕರಿಸಿದ ಹಣದಿಂದ ಸಮಾಜಮುಖಿ ಕೆಲಸ ಮಾಡುವ ಸಂಘಟನೆಯ ವರಿಷ್ಠರು ಸ್ವತಃ ದಾನಿಗಳಾಗಿದ್ದಾಗ ಜನರಿಂದ ಪಡೆಯುವ ನೈತಿಕ ಶಕ್ತಿ ಹೆಚ್ಚುತ್ತದೆ ಎಂದರು.ಈಗಾಗಲೇ ಸಂಸ್ಥೆಯ ಮೂಲಕ ಆರು ಮನೆಗಳ ಪ್ರಾಯೋಜಕತ್ವ ವಹಿಸಿದ ಅವರಿಗೆ ಇಂತಹ ಕೆಲಸ ಮಾಡುವ ಸಾಮರ್ಥ್ಯವನ್ನು ಭಗವಂತ ಇನ್ನೂ ಅತಿಶಯವಾಗಿ ಕರುಣಿಸಲಿ ಎಂದು ಹರಸಿದರು.
ಗಂಗಾಧರ್ ರಾವ್ ಸ್ವಾಗತಿಸಿ ವಿದ್ಯಾಪೋಷಕ್ ವಿದ್ಯಾರ್ಥಿನಿಯ ತಂದೆ ಕೃಷ್ಣ ನಿಷ್ಠಾವಂತ ಕೆಲಸಗಾರ. ಅರ್ಧಕ್ಕೆ ನಿಂತಿದ್ದ ಅವರ ಮನೆಯನ್ನು ಪೂರ್ತಿಗೊಳಿಸಿ ನನ್ನ ಕರ್ತವ್ಯ ನಿರ್ವಹಿಸಿದ್ದೇನೆಂಬ ತೃಪ್ತಿ ನನಗಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಹಿಸಿದ್ದರು. ಉದ್ಯಮಿ ಕೆ. ಸತ್ಯೇಂದ್ರ ಪೈ, ಇಂಜಿನಿಯರ್ಸ್ ಅಸೋಶಿಯೇಷನ್ ಅಧ್ಯಕ್ಷ ಯೋಗಿಶ್ಚಂದ್ರಧರ್, ನ್ಯಾಯವಾದಿ ಎಂ. ಗೋಪಿಕೃಷ್ಣ ರಾವ್, ಹಿರಿಯರಾದ ಯು.ವಿಶ್ವನಾಥ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಈ ಹಿಂದೆ ಮನೆಯ ಪ್ರಾಯೋಜಕತ್ವ ವಹಿಸಿದ್ದ ಮರ್ಣೆ ಉಮೇಶ್ ಭಟ್, ಡಾ. ಜೆ. ಎನ್. ಭಟ್, ಯು. ಎಸ್. ರಾಜಗೋಪಾಲ್ ಆಚಾರ್ಯ, ಅರವಿಂದ ನಾಯಕ್, ಪಿ. ಕೃಷ್ಣಮೂರ್ತಿ ಭಟ್, ವಿಜಯ್ ಕುಮಾರ್ ಮುದ್ರಾಡಿ ಮತ್ತು ಪ್ರಾಯೋಜಕತ್ವ ವಹಿಸಲಿರುವ ವಿಷ್ಣುಮೂರ್ತಿ ಭಟ್, ಸುದರ್ಶನ ಮೂರ್ತಿ - ಲಕ್ಷ್ಮಿ ದಂಪತಿ ಭಾಗವಹಿಸಿದ್ದರು. ಉಡುಪಿ ಇಂಜಿನಿಯರ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷರುಗಳಾದ ಎಂ.ಗೋಪಾಲ ಭಟ್, ಪಾಂಡುರಂಗ ಆಚಾರ್ ಮತ್ತು ಪದಾಧಿಕಾರಿಗಳು, ಯಕ್ಷಗಾನ ಕಲಾರಂಗದ ಪದಾಧಿಕಾರಿಗಳಾದ ಎಸ್. ವಿ. ಭಟ್, ಪ್ರೊ. ಕೆ. ಸದಾಶಿವ ರಾವ್, ವಿದ್ಯಾ ಪ್ರಸಾದ್ ಮತ್ತು ಸದಸ್ಯರು, ಎಂ. ಗಂಗಾಧರ ರಾವ್ ರ ಮನೆಯವರಾದ ಸರಸ್ವತಿ ಜಿ.ರಾವ್, ಪಾವನಿ, ಸಿಎ ಹರಿಣಿ ಜಿ. ರಾವ್, ಕಮಲಾಕ್ಷಿ, ಐಶ್ವರ್ಯ ಪಾಲ್ಗೊಂಡಿದ್ದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.