ಸಾರಾಂಶ
ಉದ್ಯಾವರ ಹಿಂದು ಹಿರಿಯ ಪ್ರಾಥಮಿಕ ಶಾಲಾ ರಕ್ಷಕ - ಶಿಕ್ಷಕ ಸಂಘದ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಡಾ. ಕೆ. ಶಿವರಾಮ ಕಾರಂತ ಟ್ರಸ್ಟ್ ನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ಪೋಷಕರನ್ನು ಉದ್ದೇಶಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಇಂದು ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆ ನಮ್ಮ ಜೀವನದ ಉತ್ತುಂಗ ಗುರಿ ಎಂಬಂತೆ ಬದುಕಿದರೆ ಸಾಲದು. ಪಠ್ಯದೊಂದಿಗೆ ಪಠ್ಯಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಮಕ್ಕಳು ನಾಟಕ, ಯಕ್ಷಗಾನ, ನೃತ್ಯ, ಬರಹ ಹೀಗೆ ವಿಭಿನ್ನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಹೆತ್ತವರು ಪ್ರೋತ್ಸಾಹಿಸಬೇಕು. ಇದು ಅವರ ಮುಂದಿನ ಭವಿಷ್ಯಕ್ಕೆ ಪೂರಕವಾಗುತ್ತದೆ ಎಂದು ಡಾ. ಕೆ. ಶಿವರಾಮ ಕಾರಂತ ಟ್ರಸ್ಟ್ ನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ಹೇಳಿದ್ದಾರೆ.
ಉದ್ಯಾವರ ಹಿಂದು ಹಿರಿಯ ಪ್ರಾಥಮಿಕ ಶಾಲಾ ರಕ್ಷಕ - ಶಿಕ್ಷಕ ಸಂಘದ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಹೆತ್ತವರನ್ನು ಉದ್ದೇಶಿಸಿ ಅವರು ಮಾತನಾಡಿದರು.ಸಭೆಯ ಅಧ್ಯಕ್ಷತೆಯನ್ನು ರಕ್ಷಕ - ಶಿಕ್ಷಕ ಸಂಘದ ಉಪಾಧ್ಯಕ್ಷ ರವಿಕಿರಣ್ ಪಾಠಕ್ ವಹಿಸಿದ್ದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಗಣಪತಿ ಕಾರಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ - ರಕ್ಷಕ ಸಂಘದ ಕಾರ್ಯದರ್ಶಿ, ಮುಖ್ಯೋಪಾಧ್ಯಾಯಿನಿ ಅನುರಾಧ ಪಿ.ಶೆಟ್ಟಿ ವರದಿ ವಾಚಿಸಿದರು.
ಶಾಲಾ ಸಂಚಾಲಕ ಯು. ಸುರೇಶ ಶೆಣೈ, ಶಾಲಾಡಳಿತ ಸಮಿತಿ ಸದಸ್ಯ ಉದ್ಯಾವರ ನಾಗೇಶ್ ಕುಮಾರ್, ಕೃಷ್ಣ ಕುಮಾರ್ ರಾವ್, ಗಣೇಶ್ ಕುಮಾರ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ್ ಕರ್ಕೇರ ಉಪಸ್ಥಿತರಿದ್ದರು, ಸಹ ಶಿಕ್ಷಕಿ ಅಕ್ಷತಾ ಸ್ವಾಗತಿಸಿದರು ಸಹ ಶಿಕ್ಷಕಿ ವನಿತಾ ಪಿ. ವಂದಿಸಿದರು. ಸಹ ಶಿಕ್ಷಕ ಯು.ವಿಕ್ರಮ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.