ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರವಾಗಿರುವ ಈ ದೇವಾಲಯದಲ್ಲಿ ಪ್ರತಿ ತಿಂಗಳು ಸಂಪ್ರದಾಯಬದ್ಧವಾಗಿ ಲೋಕಕಲ್ಯಾಣಾರ್ಥ ಪೂಜೆಗಳು ನಡೆಯುತ್ತವೆ. ಆದರೆ ಯುಗಾದಿ ಮತ್ತು ಅಮಾವಾಸ್ಯೆ ಒಂದೇ ಸಂದರ್ಭದಲ್ಲಿ ಬಂದ ಹಿನ್ನೆಲೆಯಲ್ಲಿ ಈ ಬಾರಿ ವಿಶೇಷವಾಗಿ ಭವ್ಯ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಅಮ್ಮನವರಿಗೆ ಬಣ್ಣಬಣ್ಣದ ಹೂವಿನ ಅಲಂಕಾರ ಮಾಡಲಾಗಿದ್ದು ಭಕ್ತರ ಕಣ್ಮನ ಸೆಳೆಯಿತು.

ಕನ್ನಡಪ್ರಭ ವಾರ್ತೆ ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣಗೌರಮ್ಮದೇವಿ ದೇವಾಲಯದಲ್ಲಿ ಯುಗಾದಿ ಹಾಗೂ ಅಮಾವಾಸ್ಯೆ ಅಂಗವಾಗಿ ವಿಶೇಷ ಪೂಜೆ ಗುರುವಾರ ರಾತ್ರಿ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿತು.ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರವಾಗಿರುವ ಈ ದೇವಾಲಯದಲ್ಲಿ ಪ್ರತಿ ತಿಂಗಳು ಸಂಪ್ರದಾಯಬದ್ಧವಾಗಿ ಲೋಕಕಲ್ಯಾಣಾರ್ಥ ಪೂಜೆಗಳು ನಡೆಯುತ್ತವೆ. ಆದರೆ ಯುಗಾದಿ ಮತ್ತು ಅಮಾವಾಸ್ಯೆ ಒಂದೇ ಸಂದರ್ಭದಲ್ಲಿ ಬಂದ ಹಿನ್ನೆಲೆಯಲ್ಲಿ ಈ ಬಾರಿ ವಿಶೇಷವಾಗಿ ಭವ್ಯ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಅಮ್ಮನವರಿಗೆ ಬಣ್ಣಬಣ್ಣದ ಹೂವಿನ ಅಲಂಕಾರ ಮಾಡಲಾಗಿದ್ದು ಭಕ್ತರ ಕಣ್ಮನ ಸೆಳೆಯಿತು.

ಮುಂಜಾನೆ ಪುರೋಹಿತರು ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು. ದೇವಾಲಯವನ್ನು ತೋರಣ, ಬಾಳೆಕಂಬಗಳು ಹಾಗೂ ಹಸಿರು ಅಲಂಕಾರಗಳಿಂದ ಸಿಂಗರಿಸಲಾಗಿದ್ದು, ವಿದ್ಯುತ್ ದೀಪಾಲಂಕಾರದಿಂದ ನಯನಮನೋಹರ ವಾತಾವರಣ ನಿರ್ಮಾಣವಾಗಿತ್ತು.ರಾತ್ರಿ 8 ಗಂಟೆಗೆ ಕೋಡಿಮಠ ಗದ್ದುಗೆಗೆ ಸಂಬಂಧಿಸಿದ ಮಹಾತಪಸ್ವಿ ಶಿವಲಿಂಗಜಯ್ಯನವರ ಮೂರ್ತಿ ಹಾಗೂ ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿ ಮತ್ತು ಅಮ್ಮನವರಿಗೆ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು. ಈ ವೇಳೆ ಭಕ್ತರು ಭಕ್ತಿಭಾವದಿಂದ ಪೂಜೆಯಲ್ಲಿ ಭಾಗವಹಿಸಿದರು.ಪೂಜೆಯ ನಂತರ ಕಡಲಮಗೆ ಗ್ರಾಮಸ್ಥರಿಂದ ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಮಾಡಾಳು ಸೇರಿದಂತೆ ಸೀತಾಪುರ, ಕೊಪ್ಪಲು, ಯೆರೆಹಳ್ಳಿ, ಡಿ. ಎಂ. ಕುರ್ಕೆ, ಶಶಿವಾಳ, ರಾಂಪುರ, ಸೊಪ್ಪಿನಹಳ್ಳಿ, ದಿಬ್ಬೂರು, ವೈಜಿಹಳ್ಳಿ, ಪಿ.ಹೊಸಳ್ಳಿ, ಕಿತ್ತನಕೆರೆ, ಬೊಮ್ಮಸಮುದ್ರ, ಶಂಕರನಹಳ್ಳಿ, ಮದ್ದರಹಳ್ಳಿ ಹಾಗೂ ಕಡಲಮಗೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದು ಪುನೀತರಾದರು.