ಸಾರಾಂಶ
ಕನ್ನಡಪ್ರಭ ವಾರ್ತೆ ದಾಬಸ್ಪೇಟೆ
ಯುಗಾದಿ ಹಬ್ಬಕ್ಕೆ ಪಟ್ಟಣದಲ್ಲಿ ಭರ್ಜರಿಯಾಗಿ ವ್ಯಾಪಾರ ನಡೆಯುತ್ತಿದೆ. ಹಬ್ಬದ ಹೆಸರಿನಲ್ಲಿ ಗಗನಕ್ಕೇರಿದ ವಸ್ತುಗಳನ್ನು ಖರೀದಿ ಮಾಡಿದ ಗ್ರಾಹಕರು ಪ್ರತಿ ವರ್ಷದಂತೆ ಈ ಬಾರಿಯೂ ಯುಗಾದಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧವಾಗಿದ್ದಾರೆ.ಪಟ್ಟಣದ ಮಾರಮ್ಮ ದೇವಿ ರಸ್ತೆ, ಸಂತೆಬೀದಿ ಮುಖ್ಯರಸ್ತೆಗಳಲ್ಲಿ ಹಬ್ಬದ ಸಾಮಗ್ರಿಗಳ ಮಾರಾಟ ಜೋರಾಗಿಯೇ ಇದೆ.
ವಿವಿಧೆಡೆಗಳಿಂದ ಆಗಮಿಸಿದ್ದ ಗ್ರಾಹಕರು ಹಬ್ಬಕ್ಕೆ ತರಕಾರಿ, ಹೂ, ಹಣ್ಣುಗಳು, ಮಾವಿನ ಸೊಪ್ಪು, ಬೇವಿನ ಸೊಪ್ಪು ಜೊತೆಗೆ ಹಬ್ಬದ ಸಾಮಗ್ರಿಗಳ ಖರೀದಿಯಲ್ಲಿ ನಿರತರಾಗಿದ್ದ ದೃಶ್ಯ ಎಲ್ಲೆಡೆ ಕಂಡು ಬಂತು.ಗಗನಕ್ಕೇರಿದ ವಸ್ತುಗಳ ಬೆಲೆ:
ಕಳೆದ ವಾರಕ್ಕೆ ಹೋಲಿಸಿದ್ದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಹೂ, ಹಣ್ಣು, ತರಕಾರಿಗಳ ಬೆಲೆ ಗಗನಕ್ಕೇರಿದ್ದವು. ಸಮಾಜದ ಎಲ್ಲಾ ವರ್ಗಗಳ ಜನರು ಬಹಳ ಸಡಗರದಿಂದ ಯುಗಾದಿ ಆಚರಿಸಲಿದ್ದು, ವಸ್ತುಗಳ ಬೆಲೆಯನ್ನು ಲೆಕ್ಕಿಸಿದೇ ಹಬ್ಬದ ಸಾಮಾಗ್ರಿಗಳನ್ನು ಕೊಂಡೊಯ್ದರು.ಪಟ್ಟಣದಲ್ಲಿರುವ ಟೆಕ್ಸ್ ಟೈಲ್ಸ್ ಅಂಗಡಿಗಳಲ್ಲಿ ಯುಗಾದಿ ಹಬ್ಬಕ್ಕೆ ಬಟ್ಟೆ ಖರೀದಿಸಲು ಜನ ಮುಂದಾಗಿದ್ದು, ಅಂಗಡಿಗಳಲ್ಲಿ ಕಾಲಿಡಲು ಸಾಧ್ಯವಾಗದಷ್ಟು ಜನ ಖರೀದಿಗೆ ಮುಂದಾಗಿದ್ದಾರೆ.
ಮಾಂಸದಬ್ಬಕ್ಕೆ ತಯಾರಿ:ಯುಗಾದಿ ಹಬ್ಬವನ್ನು ಎರಡು ದಿನಗಳ ಕಾಲ ಆಚರಣೆ ಮಾಡುತ್ತಾರೆ. ಮೊದಲ ದಿನ ಸಿಹಿ ಖಾದ್ಯಗಳನ್ನು ಸವಿಯುತ್ತಾರೆ. ಎರಡನೇ ದಿನ ಹೊಸ ತೊಡಕು ಅಂಗವಾಗಿ ಮಾಂಸದ ತರಹೇವಾರಿ ಭೋಜನಗಳೊಂದಿಗೆ ಹಬ್ಬವನ್ನು ಮುಗಿಸುತ್ತಾರೆ. ತಾಲೂಕಿನಲ್ಲಿ ಯುಗಾದಿಯ ಸಿಹಿಗಿಂತ ಹೊಸ ತೊಡಕು ವಿಜೃಂಭಣೆಯಿಂದ ಸಾಗುತ್ತದೆ. ಈ ಬಾರಿ ಮಾಂಸದ ಬೆಲೆ ಗಗನಕ್ಕೇರಿದೆ. ಒಂದು ಕೆಜಿ ಕೋಳಿ ಮಾಂಸ 250 ರು.ವರೆಗಿದೆ. ಇನ್ನು ಕುರಿ ಮಾಂಸದ ಬೆಲೆ 750-850 ರು.ವರೆಗೂ ಮಾರಾಟವಾಗುತ್ತಿದೆ. ಬೆಲೆ ಏರಿಕೆಯು ಮಾಂಸಪ್ರಿಯರ ಕಣ್ಣು ಕೆಂಪಾಗಿಸಿದೆ.
-----ಯುಗಾದಿ ಭಾರತೀಯರಿಗೆ ಪ್ರಮುಖ ಹಬ್ಬವಾಗಿದ್ದು, ಪ್ರತಿ ಹಬ್ಬಕ್ಕೂ ಬೆಲೆ ಏರಿಕೆ ಎನ್ನುವುದು ಸಾಮಾನ್ಯ. ಈ ಬಾರಿ ಎಲ್ಲ ಬೆಲೆಗಳು ಏರಿಕೆಯಾಗಿವೆ. ಆದರೂ ಹಬ್ಬ ಮಾಡಲೇಬೇಕು ಹಾಗಾಗಿ ತೆಗೆದುಕೊಳ್ಳುವುದರಲ್ಲೇ ಚೌಕಾಸಿ ಮಾಡಬೇಕು. ಇಲ್ಲವಾದಲ್ಲಿ ಇಷ್ಟು ದುಡ್ಡು ಕೊಟ್ಟು ಎಲ್ಲವನ್ನೂ ಖರೀದಿಸಲು ಸಾಧ್ಯವಿಲ್ಲ.
ನಳಿನಾ, ಗೃಹಿಣಿ