ಸಾರಾಂಶ
ಚಿತ್ರದುರ್ಗ: ಪ್ರಸವ ಪೂರ್ವ ಮತ್ತು ಗರ್ಭಪೂರ್ವ ಭ್ರೂಣಲಿಂಗ ಪತ್ತೆ, ನಿಷೇಧ ಕಾಯ್ದೆ (ಪಿಸಿ ಆ್ಯಂಡ್ ಪಿಎನ್ಡಿಟಿ)ಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ತಪಾಸಣಾ ಮತ್ತು ಪರಿಶೀಲನಾ ಸಮಿತಿಯು ಜಿಲ್ಲೆಯ ವಿವಿಧೆಡೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ ಕಂಡುಬಂದ ಕೆಲವು ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಸೂಚನೆ ನೀಡಿತು.
ಜಿಲ್ಲಾ ತಪಾಸಣಾ ಮತ್ತು ಪರಿಶೀಲನಾ ಸಮಿತಿಯ ಅಧ್ಯಕ್ಷ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್ ಹಾಗೂ ಸಮಿತಿಯ ಸದಸ್ಯರಾದ ಡಾ.ಸತ್ಯನಾರಾಯಣ ಅವರು, ನಗರದ ಗುರು ಕೊಟ್ಟೂರೇಶ್ವರ ಸ್ಕ್ಯಾನಿಂಗ್ ಸೆಂಟರ್ ಮತ್ತು ಖುಷಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ ಇದುವರೆಗೂ ಸ್ಕ್ಯಾನಿಂಗ್ ಮಾಡಿರುವ ಪ್ರಕರಣಗಳ ಬಗ್ಗೆ ದಾಖಲಾತಿ ಪರಿಶೀಲಿಸಿದರು.ಸ್ಕ್ಯಾನಿಂಗ್ ಸೆಂಟರ್ಗಳಲ್ಲಿ ಕಾಯ್ದೆಯನುಸಾರ ಭ್ರೂಣಲಿಂಗ ಬಹಿರಂಗ ಪಡಿಸುವುದು ಕಾನೂನಿನ ಮೇರೆಗೆ ನಿಷೇಧಿಸಲಾಗಿದೆ ಎಂಬುದಾಗಿ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಸೂಚನೆಯುಳ್ಳ ಫಲಕವನ್ನು ಸಾರ್ವಜನಿಕರ ಮಾಹಿತಿಗಾಗಿ ಕಾಣುವ ರೀತಿಯಲ್ಲಿ ಪ್ರದರ್ಶಿಸಬೇಕು. ಸ್ಕ್ಯಾನಿಂಗ್ ಮಾಡಲಾಗುವ ಕೊಠಡಿ ಒಳಗೆ ಚಿಕಿತ್ಸಾ ದರ ಪಟ್ಟಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು. ನೋಂದಣಿ ರಿಜಿಸ್ಟರ್ ಮತ್ತು ಶಿಫಾರಸು ಚೀಟಿಗಳನ್ನು ಸಮರ್ಪಕವಾಗಿ ದಾಖಲಿಸಿ ನಿರ್ವಹಿಸಬೇಕು. ಪಿಸಿ ಹಾಗೂ ಪಿಎನ್ಡಿಟಿ ಕಾಯ್ದೆ 1994 ಮತ್ತು ತಿದ್ದುಪಡಿಗಳ ಕಾಯ್ದೆ ಪುಸ್ತಕವನ್ನು ಸೆಂಟರ್ನಲ್ಲಿ ಇಡಬೇಕು ಎಂದು ಸೂಚನೆ ನೀಡಿದರು.
ಬರುವ ದಿನಗಳಲ್ಲಿ ಸಮಿತಿಯು ನಿಯಮಾನುಸಾರ ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಆಕಸ್ಮಿಕ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಪಿಸಿ ಮತ್ತು ಪಿಎನ್ಡಿಟಿ ಕಾಯ್ದೆಯಲ್ಲಿನ ಎಲ್ಲ ಅಂಶಗಳನ್ನು ಚಾಚುತಪ್ಪದೆ ಪಾಲಿಸುವಂತೆ ಅಧಿಕಾರಿಗಳು ಸೂಚನೆ ನೀಡಿದರು.