ಗ್ರಾಮ ಪಂಚಾಯಿತಿ ಅನುಮತಿ ಇಲ್ಲದೇ ತಗಡಿನ ಶೆಡ್ ಒಳಗಡೆ ಜುಮ್ಮಾ ಮಸೀದಿ ನಿರ್ಮಿಸುತ್ತಿರುವುದನ್ನು ಕನ್ನಡಪ್ರಭ ಫೆ. 21ರಂದು "ಸರ್ಕಾರಿ ಜಾಗದಲ್ಲಿ ಮಸೀದಿ ನಿರ್ಮಾಣ: ಆರೋಪ " ಎಂಬ ಶೀರ್ಷಿಕೆಯಡಿ ಸಚಿತ್ರ ವರದಿ ಪ್ರಕಟಿಸಿತ್ತು.

ಶಿರಹಟ್ಟಿ: ತಾಲೂಕಿನ ಬನ್ನಿಕೊಪ್ಪ ಗ್ರಾಮದ ಗಾಂವಠಾಣಾ ನಿವೇಶನದಲ್ಲಿ ಅನಧಿಕೃತವಾಗಿ ನಿರ್ಮಿಸುತ್ತಿದ್ದ ಮಸೀದಿಯನ್ನು ಕನ್ನಡಪ್ರಭ ವರದಿ ಪ್ರಕಟಿಸಿದ ಬೆನ್ನಲ್ಲೆ ಎಚ್ಚೆತ್ತ ಅಧಿಕಾರಿಗಳು ಶನಿವಾರ ತೆರವುಗೊಳಿಸಿದ್ದಾರೆ.ಗ್ರಾಮ ಪಂಚಾಯಿತಿ ಅನುಮತಿ ಇಲ್ಲದೇ ತಗಡಿನ ಶೆಡ್ ಒಳಗಡೆ ಜುಮ್ಮಾ ಮಸೀದಿ ನಿರ್ಮಿಸುತ್ತಿರುವುದನ್ನು ಕನ್ನಡಪ್ರಭ ಫೆ. 21ರಂದು "ಸರ್ಕಾರಿ ಜಾಗದಲ್ಲಿ ಮಸೀದಿ ನಿರ್ಮಾಣ: ಆರೋಪ " ಎಂಬ ಶೀರ್ಷಿಕೆಯಡಿ ಸಚಿತ್ರ ವರದಿ ಪ್ರಕಟಿಸಿತ್ತು. ಯಾವುದೇ ರೀತಿಯ ಪರವಾನಗಿ ಪಡೆಯದೇ ಗ್ರಾಮದ ಮಧ್ಯಭಾಗದಲ್ಲಿ ಅಕ್ರಮವಾಗಿ ಮಸೀದಿ ನಿರ್ಮಿಸಿ ನಮಾಜ ಕಾರ್ಯಕ್ಕೆ ಮುಂದಾಗಿರುವುದು ಗ್ರಾಮಸ್ಥರಿಗೆ ಗೊತ್ತಾಗುತ್ತಿದ್ದಂತೆ ತಹಸೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಅವರು ಕೂಡ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಂದಿಗೆ ಮಾತನಾಡಿದ್ದು, ನೀವೇ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳಿ ಎಂದು ತಿಳಿಸಿ ಹೋಗಿದ್ದರು.ಶನಿವಾರ ಕನ್ನಡಪ್ರಭದಲ್ಲಿ ವರದಿ ಪ್ರಕಟವಾದ ಬಳಿಕ ಅಧಿಕಾರಿಗಳು ಬನ್ನಿಕೊಪ್ಪ ಗ್ರಾಮಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲನೆ ಮಾಡಿದ ಬಳಿಕ ಇಲ್ಲಿ ನಡೆದಿರುವುದು ಎಲ್ಲವೂ ಅಕ್ರಮ ಎಂದು ಗೊತ್ತಾದ ಮೇಲೆ ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್‌ಐ ಈರಪ್ಪ ರಿತ್ತಿ, ಗ್ರಾಪಂ ಪಿಡಿಒ ಸುರೇಶ ಲಮಾಣಿ ಹಾಗೂ ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲಿ ಮಸೀದಿ ತೆರವು ಕಾರ್ಯ ಮಾಡಲಾಯಿತು.ಗ್ರಾಮಸ್ಥರ ಆರೋಪ:ಶನಿವಾರ ಬನ್ನಿಕೊಪ್ಪ ಗ್ರಾಮಸ್ಥರು ಹಾಗೂ ಯುವಕರು ಘಟನೆ ನಡೆದ ಸ್ಥಳದಲ್ಲಿಯೇ ಜಮಾವಣೆಗೊಂಡು, ಈ ಎಲ್ಲ ಬೆಳವಣಿಗೆ ನಡೆಯಲು ಗ್ರಾಮ ಪಂಚಾಯಿತಿಯವರ ಕೈವಾಡ ಇದೆ. ಪಂಚಾಯಿತಿ ದಾಖಲೆ ತಿದ್ದುಪಡಿ ಮಾಡಿ ಗಾಂವಠಾಣಾ ನಿವೇಶನ ಇದ್ದಲ್ಲಿ ವೈಟ್ನರ್ ಹಚ್ಚಿ ಮಸೀದಿ ಎಂದು ನಮೂದಿಸಿ ಉತಾರ ಸೃಷ್ಟಿ ಮಾಡಿಕೊಟ್ಟಿದ್ದಾರೆ. ಮೇಲಾಗಿ ಸಿಮೆಂಟ್, ಕಡಿ, ಮರಳು ಕೂಡ ಪಂಚಾಯಿತಿಯಿಂದಲೇ ಪೂರೈಕೆಯಾಗಿದೆ ಎಂದು ಗ್ರಾಮದ ಮುಖಂಡ ಅರಿಹಂತ ಮಂಟಗಣಿ, ವಿಜಯಕುಮಾರ ಎ.ಸಿ. ಪಿಡಿಒ ಎದುರೇ ಆರೋಪಿಸಿದರು.ಅಲ್ಲದೇ ಮಸೀದಿ ನಿರ್ಮಾಣಕ್ಕೂ ಮೊದಲು ಆ ಸ್ಥಳದಲ್ಲಿ ಜೀವಂತ ಆಕಳು ಹೂಳಲಾಗಿದೆ. ಇದರ ಮೇಲೆಯೇ ಮಸೀದಿ ನಿರ್ಮಾಣ ಕಾರ್ಯ ನಡೆದಿದೆ. ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನಿಸಬೇಕು ಎಂದು ಆಗ್ರಹಿಸಿದರು.