ಸದಾಶಿವಗಡ ಕೋಟೆಯ ಮೇಲೆ ಬೇಕಾಬಿಟ್ಟಿ ಕಾಮಗಾರಿ: ರೂಪಾಲಿ ನಾಯ್ಕ ಆಕ್ರೋಶ

| Published : Jun 05 2025, 03:33 AM IST

ಸದಾಶಿವಗಡ ಕೋಟೆಯ ಮೇಲೆ ಬೇಕಾಬಿಟ್ಟಿ ಕಾಮಗಾರಿ: ರೂಪಾಲಿ ನಾಯ್ಕ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಐತಿಹಾಸಿಕ ತಾಣ ತಾಲೂಕಿನ ಸದಾಶಿವಗಡ ಗುಡ್ಡದ ಮೇಲೆ ಬೇಕಾಬಿಟ್ಟಿಯಾಗಿ ಕಾಮಗಾರಿ ನಡೆಸುತ್ತಿರುವುದು ಖಂಡನೀಯ.

ಕಾರವಾರ: ಸೋಂದಾ ಅರಸರು ಕೋಟೆ ನಿರ್ಮಿಸಿದ ಛತ್ರಪತಿ ಶಿವಾಜಿ ಭೇಟಿ ನೀಡಿದ ಐತಿಹಾಸಿಕ ತಾಣ ತಾಲೂಕಿನ ಸದಾಶಿವಗಡ ಗುಡ್ಡದ ಮೇಲೆ ಬೇಕಾಬಿಟ್ಟಿಯಾಗಿ ಕಾಮಗಾರಿ ನಡೆಸುತ್ತಿರುವುದು ಖಂಡನೀಯ. ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಆಗ್ರಹಿಸಿದ್ದಾರೆ.

ಪುರಾತತ್ವ ಇಲಾಖೆ ಇಲ್ಲಿಯ ಐತಿಹಾಸಿಕ ಕುರುಹುಗಳನ್ನು ಕಾಪಾಡಿಕೊಳ್ಳಬೇಕೆಂದು ಸೂಚಿಸಿದೆ. ಹಾಗಿರುವಾಗ 70ಕ್ಕೂ ಹೆಚ್ಚು ಮರಗಳನ್ನು ಕಡಿದು ಬೇಕಾಬಿಟ್ಟಿಯಾಗಿ ಕಾಮಗಾರಿ ನಡೆಸಿ ಪ್ರಾಚೀನ ಸ್ಮಾರಕ ಮಾಡಬೇಕಾದ ಸ್ಥಳವನ್ನು ಹಾಳುಗೆಡಹುವ ಪ್ರಯತ್ನ ನಡೆದಿದೆ.

ಜಂಗಲ್ ಲಾಡ್ಜನವರು ₹60 ಲಕ್ಷದ ಕಾಮಗಾರಿ ನಡೆಸಲು ಮುಂದಾಗಿದ್ದು, ಈಗಾಗಲೇ ಅರೆಬರೆ ಕಾಮಗಾರಿ ಮಾಡಲಾಗಿದೆ. ಇಷ್ಟಕ್ಕೂ ಇದು ಯಾರ ಕುಮ್ಮಕ್ಕಿನಿಂದ ನಡೆಯುತ್ತಿದೆ ಎನ್ನುವುದು ಪ್ರಶ್ನೆಯಾಗಿದೆ.

ಜನಪ್ರತಿನಿಧಿಗಳು ಹಾಗೂ ಉನ್ನತ ಅಧಿಕಾರಿಗಳ ಅರಿವಿಗೆ ಬಾರದೇ ಈ ಕಾಮಗಾರಿ ನಡೆಯುತ್ತಿದೆಯೇ ಈ ಕಾಮಗಾರಿಯ ಹಿಂದೆ ಯಾರಿದ್ದಾರೆ ಎನ್ನುವುದು ತಿಳಿದುಬರಬೇಕಾಗಿದೆ.

ಈಗಾಗಲೇ ಚತುಷ್ಪಥ ಹೆದ್ದಾರಿಗಾಗಿ ಗುಡ್ಡದ ಅರ್ಭ ಭಾಗವನ್ನು ಕತ್ತರಿಸಲಾಗಿದೆ. ಜಂಗಲ್ ಲಾಡ್ಜನವರು ಈ ಹಿಂದೆಯೇ ಇಲ್ಲಿ ಕಟ್ಟಡಗಳನ್ನು ನಿರ್ಮಿಸಿ, ಪುರಾತನ ಕೋಟೆಯ ಅವಶೇಷಗಳಿಗೆ ಹಾನಿ ಮಾಡಿದ್ದಾರೆ. ಅದು ಸಾಲದು ಎಂಬಂತೆ ಈಗ ಮತ್ತೆ ಕೋಟೆ ಇರುವ ತಾಣವನ್ನು ವಿರೂಪಗೊಳಿಸುತ್ತಿದ್ದಾರೆ.

ಐತಿಹಾಸಿಕ ತಾಣಗಳು, ಸ್ಮಾರಕಗಳು ಅಮೂಲ್ಯ ಆಸ್ತಿಯಾಗಿದೆ. ಅದನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ವರ್ಗಾವಣೆ ಮಾಡಬೇಕು. ಕೋಟೆಯನ್ನು ರಕ್ಷಣೆ ಮಾಡಬೇಕಾದವರೆ ಈ ರೀತಿ ಅಕ್ರಮವಾಗಿ ಕಾಮಗಾರಿ ನಡೆಸಲು ಹೊರಟಿರುವುದು ಖಂಡನೀಯ. ಇದಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ರೂಪಾಲಿ ಎಸ್.ನಾಯ್ಕ ಜಿಲ್ಲಾ ಆಡಳಿತ ಹಾಗೂ ಸರ್ಕಾರವನ್ನು ಆಗ್ರಹಿಸಿದ್ದಾರೆ.