ನಿಜಾಮರ ಆಡಳಿತದಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರಗತಿಯಲ್ಲಿ ಹಿನ್ನಡೆ: ಕೊಪ್ಪಳ ವಿವಿ ಕುಲಪತಿ ಡಾ.ರವಿ

| Published : Feb 10 2024, 01:50 AM IST

ನಿಜಾಮರ ಆಡಳಿತದಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರಗತಿಯಲ್ಲಿ ಹಿನ್ನಡೆ: ಕೊಪ್ಪಳ ವಿವಿ ಕುಲಪತಿ ಡಾ.ರವಿ
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮ ತೆರಿಗೆ ಮತ್ತು ಆಡಳಿತ ನಡೆಸಲು ರಸ್ತೆ, ಕೆಲವು ಬಾವಿ, ಸರ್ಕಾರಿ ಕಚೇರಿಗಳನ್ನು ಹೊರತುಪಡಿಸಿ ನಿಜಾಮ ಆಡಳಿತ ಜನರಿಗೆ ಮೂಲಸೌಕರ್ಯಗಳಾದ ಆರೋಗ್ಯ, ಶಿಕ್ಷಣ, ಉದ್ಯೋಗ ನೀಡುವಲ್ಲಿ ಮತ್ತು ಕೃಷಿಕರಿಗೆ ನೆರವಾಗಲು ಡ್ಯಾಂ, ಕೆರೆ ಕಟ್ಟೆ ನಿರ್ಮಿಸುವಲ್ಲಿ ವಿಫಲರಾಗಿದ್ದರು.

ಗಂಗಾವತಿ: ನಿಜಾಮ ಆಡಳಿತದಲ್ಲಿ ಹೈದ್ರಾಬಾದ್ ಕರ್ನಾಟಕದ ಜಿಲ್ಲೆಗಳು ಸರ್ವಾಂಗೀಣ ಪ್ರಗತಿಯಲ್ಲಿ ಹಿಂದೆ ಬಿದ್ದಿದ್ದವು ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಕೆ. ರವಿ ಹೇಳಿದರು.

ಅವರು ನಗರದ ಕೊಲ್ಲಿನಾಗೇಶ್ವರರಾವ್ ಸರ್ಕಾರಿ ಮಹಾವಿದ್ಯಾಲಯದಲ್ಲಿ ರಾಜ್ಯ ಪತ್ರಾಗಾರ ಇಲಾಖೆ ಕಲಬುರ್ಗಿ ವಿಭಾಗದಿಂದ ಹಮ್ಮಿಕೊಂಡಿದ್ದ ಹೈದ್ರಾಬಾದ ನಿಜಾಮ ಅರಸರ ಆಡಳಿತ ಪದ್ಧತಿ ಹಾಗೂ ಆಕರಗಳು ವಿಷಯದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ತಮ್ಮ ತೆರಿಗೆ ಮತ್ತು ಆಡಳಿತ ನಡೆಸಲು ರಸ್ತೆ, ಕೆಲವು ಬಾವಿ, ಸರ್ಕಾರಿ ಕಚೇರಿಗಳನ್ನು ಹೊರತುಪಡಿಸಿ ನಿಜಾಮ ಆಡಳಿತ ಜನರಿಗೆ ಮೂಲಸೌಕರ್ಯಗಳಾದ ಆರೋಗ್ಯ, ಶಿಕ್ಷಣ, ಉದ್ಯೋಗ ನೀಡುವಲ್ಲಿ ಮತ್ತು ಕೃಷಿಕರಿಗೆ ನೆರವಾಗಲು ಡ್ಯಾಂ, ಕೆರೆ ಕಟ್ಟೆ ನಿರ್ಮಿಸುವಲ್ಲಿ ವಿಫಲರಾಗಿದ್ದರಯ. ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ ಜನಸಾಮಾನ್ಯರ ಅರಸರಾಗಿ ಶಾಲಾ ಕಾಲೇಜು, ವಿದ್ಯುತ್, ರಸ್ತೆ, ಕೆಆರ್‌ಎಸ್ ಡ್ಯಾಂ, ಮಾರಿ ಕಣಿವೆ ಡ್ಯಾಂ ಹೀಗೆ ನೀರಾವರಿಗೆ ಆದ್ಯತೆ ನೀಡುವ ಜತೆಗೆ ಎಸ್ಸಿ, ಎಸ್ಟಿ, ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಿ ಸರ್ಕಾರಿ ಉದ್ಯೋಗ ಪಡೆಯಲು ನೆರವಾಗಿದ್ದರು. ಇಂತಹ ಯೋಜನೆಗಳನ್ನು ನಿಜಾಮರ ಆಡಳಿತ ಅನುಷ್ಠಾನ ಮಾಡಲಿಲ್ಲ. ಇದರಿಂದ ದೇಶದ ಸ್ವಾತಂತ್ರ್ಯ ನಂತರ ಹೈದ್ರಾಬಾದ ಕರ್ನಾಟಕ ಭಾಗದ ಅಭ್ಯುದಯಕ್ಕಾಗಿ ಡಾ.ನಂಜುಂಡಪ್ಪ ವರದಿ ಅನುಷ್ಠಾನ ಹಾಗೂ ಯುಪಿಎ 2 ಸರ್ಕಾರದ ಅವಧಿಯಲ್ಲಿ ಹೈದ್ರಾಬಾದ್ ಕರ್ನಾಟಕ ಭಾಗದ ಜನರು ಮತ್ತು ಸಂಘ ಸಂಸ್ಥೆಗಳ ಹೋರಾಟ ಹಾಗೂ ಜನಪ್ರತಿನಿಧಿಗಳ ಯತ್ನದ ಫಲವಾಗಿ ಸಂವಿಧಾನದ 371(ಜೆ)ಗೆ ತಿದ್ದುಪಡಿ ಮಾಡಿ ವಿಶೇಷ ಸ್ಥಾನಮಾನ ಕಲ್ಪಿಸಿದ ನಂತರ ಇದೀಗ ಅಭಿವೃದ್ಧಿಯ ಯುಗ ಆರಂಭವಾಗಿದೆ ಎಂದರು.

ದೇಶದ ಸ್ವಾತಂತ್ರ್ಯ ಹೋರಾಟ ಹಾಗೂ ಜನರ ಬದುಕಿನ ಕುರಿತು ಇತಿಹಾಸ ಹಾಗೂ ಮಹತ್ವದ ಘಟನೆಗಳನ್ನು ದಾಖಲಿಸುವ ಮೂಲಕ ಮುಂದಿನ ಭವಿಷ್ಯದ ಅಭಿವೃದ್ಧಿಗೆ ಸಹಕರಿಸಬೇಕು. ರಾಜ್ಯ ಪತ್ರಾಗಾರ ಇಲಾಖೆ ಅತ್ಯುತ್ತಮ ಕಾರ್ಯ ಮಾಡುತ್ತಿದ್ದು, ನಿಜಾಮ ಆಡಳಿತದಲ್ಲಿ ಅಭಿವೃದ್ಧಿ ಹಾಗೂ ಹೋರಾಟ ಎರಡು ಲಕ್ಷಕ್ಕೂ ಹೆಚ್ಚು ದಾಖಲೆಗಳನ್ನು ಸಂಗ್ರಹಿಸಿರುವುದು ಅತ್ಯುತ್ತಮ ಕಾರ್ಯವಾಗಿದೆ ಎಂದರು.ಪ್ರಾಸ್ತಾವಿಕವಾಗಿ ರಾಜ್ಯ ಪತ್ರಾಗಾರ ಇಲಾಖೆಯ ಕಲಬುರ್ಗಿ ವಿಭಾಗದ ಹಿರಿಯ ಸಹಾಯಕ ನಿರ್ದೇಶಕ ಡಾ.ವೀರಶೆಟ್ಟಿ ಮಾತನಾಡಿದರು.ಪ್ರಾಚಾರ್ಯ ಡಾ.ಜಾಜಿ ದೇವೆಂದ್ರಪ್ಪ, ಪ್ರೊ.ವಗ್ಗೆ, ಡಾ.ಜಗದೇವಿ ಕಲಶೆಟ್ಟಿ, ಪ್ರೊ.ಎಸ್.ಕರಿಗೂಳಿ ಸೇರಿ ಅನೇಕರಿದ್ದರು.ಗೋಷ್ಠಿಯಲ್ಲಿ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು, ಡಾ. ಕೆ.ಬಿ. ಬ್ಯಾಳಿ ಹಾಗೂ ಡಾ.ಮಂಜುನಾಥ, ಡಾ.ಶರಣಬಸಪ್ಪ ಕೋಲ್ಕಾರ ಪಾಲ್ಗೊಂಡು ಉಪನ್ಯಾಸ ನೀಡಿದರು.