ಅಪಘಾತದ ತೀವ್ರತೆಗೆ ಸವಾರನ ಒಂದು ಕೈ ತುಂಡಾಗಿ, ಕೈಯಲ್ಲಿದ್ದ ವಾಚ್ ಹಾಗೂ ದೇಹದ ಭಾಗಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.

ಚಿಂತಾಮಣಿ: ಚಿಂತಾಮಣಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ವೈಜಕೂರಿನ ಸಮೀಪದ ಜೋಡಿ ರಸ್ತೆಯ ಅಪಘಾತ ಸಂಭವಿಸಿದ್ದು, ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಬೈಕ್ ಸವಾರನನ್ನು ಆಂಧ್ರಪ್ರದೇಶದ ಮದನಪಲ್ಲಿ ನಿವಾಸಿ ಕಂಚೆರಳ ಮಧು (26) ಎಂದು ತಿಳಿದು ಬಂದಿದೆ.

ತಾಲೂಕಿನ ವೈಜೂಕೂರು ಸಮೀಪ ಚಿಂತಾಮಣಿ -ಬೆಂಗಳೂರು ಹೆದ್ದಾರಿಯಲ್ಲಿ ಅತಿ ವೇಗವಾಗಿ ಬಂದ ಅಪರಿಚಿತ ವಾಹನ ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ನಡೆದಿದೆ. ಡಿಕ್ಕಿಯ ಭೀಕರತೆಗೆ ಬೈಕ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅದರ ಮುಂಭಾಗದ ಚಕ್ರವೇ ಸ್ಥಳದಿಂದ ಕಣ್ಮರೆಯಾಗಿದೆ. ಅಪಘಾತದ ತೀವ್ರತೆಗೆ ಸವಾರನ ಒಂದು ಕೈ ತುಂಡಾಗಿ, ಕೈಯಲ್ಲಿದ್ದ ವಾಚ್ ಹಾಗೂ ದೇಹದ ಭಾಗಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು,

ಹೆದ್ದಾರಿಯ ಮಧ್ಯದಲ್ಲೇ ಅಪಘಾತದ ಅವಶೇಷಗಳು ಹಾಗೂ ಮೃತದೇಹ ಬಿದ್ದಿದ್ದರಿಂದ ಚಿಂತಾಮಣಿ-ಬೆಂಗಳೂರು ರಸ್ತೆಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು. ಇದರಿಂದ ಪ್ರಯಾಣಿಕರು ಹಾಗೂ ಸಾರ್ವಜನಿಕರು ತೀವ್ರ ಕಿರಿಕಿರಿ ಅನುಭವಿಸುವಂತಾಯಿತು.

ಘಟನೆ ವಿಷಯ ತಿಳಿದ ಹೆದ್ದಾರಿ ಗಸ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಅಪಘಾತ ಎಸಗಿ ಪರಾರಿಯಾಗಿರುವ ಅಪರಿಚಿತ ವಾಹನ ಹಾಗೂ ಚಾಲಕನ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.ಚಿತ್ರಶೀರ್ಷಿಕೆ: ಮೃತ ಬೈಕ್ ಸವಾರ ಕಂಚೆರಳ ಮಧು ಚಿತ್ರ.