ಸಾರಾಂಶ
ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಅವರನ್ನು ಬೆಂಗಳೂರಿನ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ವತಿಯಿಂದ ಮಂಗಳೂರಿನಲ್ಲಿ ಸೋಮವಾರ ಅಭಿನಂದಿಸಲಾಯಿತು. ಅವರು ಇತ್ತೀಚೆಗೆ ದ.ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಅವರನ್ನು ಬೆಂಗಳೂರಿನ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ವತಿಯಿಂದ ನಗರದ ಪತ್ರಿಕಾಭವನದಲ್ಲಿ ಸೋಮವಾರ ಅಭಿನಂದಿಸಲಾಯಿತು.ಒಕ್ಕೂಟದ ಅಧ್ಯಕ್ಷ ಪ್ರಕಾಶ್ ಎಂ. ಮಾತನಾಡಿ, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ರವೀಂದ್ರ ಶೆಟ್ಟಿ ಅವರು ರಾಜ್ಯದ ಎಲ್ಲ ಜಿಲ್ಲೆ, ತಾಲೂಕು, ಗ್ರಾಮಗಳಿಗೆ ಭೇಟಿ ನೀಡಿ ಅಲೆಮಾರಿ ಜನಾಂಗದವರ ಕಷ್ಟಗಳನ್ನು ಆಲಿಸಿ ಸರ್ಕಾರದ ಮಟ್ಟದಲ್ಲಿ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಈಗ ಅಧಿಕಾರದಲ್ಲಿ ಇಲ್ಲದಿದ್ದರೂ 46 ಜಾತಿ ಜನಾಂಗದವರನ್ನು ಒಟ್ಟುಸೇರಿಸಿ, ಒಕ್ಕೂಟ ರಚಿಸಿದ್ದಾರೆ. ಸಮಾಜಕ್ಕೆ ಅವರ ಸೇವೆ ಇನ್ನಷ್ಟುಸಿಗುವಂತಾಗಲಿ ಎಂದು ಹೇಳಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ರವೀಂದ್ರ ಶೆಟ್ಟಿ, ನಿಗಮದ ಅಧ್ಯಕ್ಷನಾಗಿ ಸಮುದಾಯದ ಕಷ್ಟವನ್ನು ಅತ್ಯಂತ ಹತ್ತಿರದಿಂದ ಕಂಡಿರುವುದು ಮಾತ್ರವಲ್ಲದೆ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ. ಹಾಗಾಗಿ ಸಮುದಾಯದವರು ನನ್ನ ಮೇಲೆ ಭರವಸೆ ಇಟ್ಟಿದ್ದಾರೆ. ಮುಂದಿನ ದಿನಗಳಲ್ಲೂ ನನ್ನಿಂದಾಗುವ ಸಹಾಯ ಮಾಡುತ್ತೇನೆ ಎಂದರು.ಬಿಜೆಪಿ ದ.ಕ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಒಕ್ಕೂಟದ ಉಪಾಧ್ಯಕ್ಷ ಶ್ರೀನಿವಾಸ ಕಟ್ಟಿಮನಿ ಕೊಪ್ಪಳ, ದ.ಕ. ಜಿಲ್ಲಾಧ್ಯಕ್ಷ ಕೇಶವನಾಥ್, ಜೋಗಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕಿರಣ್ ಜೋಗಿ, ಪ್ರಮುಖರಾದ ಭೀಮರಾವ್ ವಾಷ್ಠರ್ ಬಾಗಲಕೋಟೆ, ಶಿವರಾಮ ಬಳೆಗಾರ ಉತ್ತರ ಕನ್ನಡ, ಸಂಜೀವಯ್ಯ, ಯದುರಾಜ್ ಮೈಸೂರು, ಅನಂತಕೃಷ್ಣ ಎ.ಯಾದವ್ ಮಂಗಳೂರು, ಮಂಜುನಾಥ ಟಿ. ಮೈಸೂರು ಇದ್ದರು.ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರತಾಪ್ ಕುಮಾರ್ ಒ. ಸ್ವಾಗತಿಸಿ, ನಿರೂಪಿಸಿದರು.