ಸಾರಾಂಶ
ರಾಯಚೂರು : ಬೃಹತ್ ಕೈಗಾರಿಕೆ ಇಲಾಖೆ ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿ ಅವರು ಮೃತ ಯಾದಗಿರಿ ಪಿಎಸ್ಐ ಪರಶುರಾಮ ಪತ್ನಿ ಶ್ವೇತಾ ಅವರಿಗೆ ದೂರವಾಣಿ ಮುಖಾಂತರ ಕರೆ ಮಾಡಿ ಸಾಂತ್ವಾನ ಹೇಳಿ ಧೈರ್ಯವಾಗಿರುವಂತೆ ತಿಳಿಸಿದರು.
ಸ್ಥಳೀಯ ಐಡಿಎಸ್ಎಂಟಿ ಬಡಾವಣೆ ತವರು ಮನೆಯಲ್ಲಿರುವ ಶ್ವೇತಾ ಹಾಗೂ ಅವರ ಕುಟುಂಬಸ್ಥರನ್ನು ಪರಾಮರ್ಶಿಸಲು ಜೆಡಿಎಸ್ ನಿಯೋಗ ಸೋಮವಾರ ಭೇಟಿ ನೀಡಿದ ಸಮಯದಲ್ಲಿ ಮುಖಂಡರು ಕೇಂದ್ರ ಸಚಿವ ಎಚ್ಡಿಕೆಗೆ ದೂರವಾಣಿ ಕರೆ ಮಾಡಿ ಶ್ವೇತಾ ಅವರ ಜೊತೆಗೆ ಮಾತನಾಡಿದರು. ನಾವು ನಿಮ್ಮ ಕುಟುಂಬದ ಜೊತೆಯಿದ್ದು, ಧೈರ್ಯ ಕಳೆದುಕೊಳ್ಳಬೇಡಿ, ಪ್ರಕರಣದಲ್ಲಿ ಯಾರೇ ಇದ್ದರು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಲಾಗುವುದು. ತಮ್ಮ ಕುಟುಂಬಕ್ಕೆ ಸೂಕ್ತ ಸಹಾಯಧನ, ಸರ್ಕಾರಿ ನೌಕರಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಎಲ್ಲ ರೀತಿ ವ್ಯವಸ್ಥೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಗರ್ಭಿಣಿಯಾಗಿರುವ ತಾವು ಆರೋಗ್ಯದ ಮೇಲೆ ಹೆಚ್ಚಿನ ನಿಗಾವಹಿಸಿ, ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳುವುದಾಗಿ ಎಚ್ಡಿಕೆ ಅವರು ಭರವಸೆ ನೀಡಿದರು.
ಈ ವೇಳೆ ಪಕ್ಷದ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ, ಕಾರ್ಯಾಧ್ಯಕ್ಷ ಎನ್.ಶಿವಶಂಕರ ವಕೀಲ್, ಮುಖಂಡರಾದ ಮಹಾಂತೇಶ ಪಾಟೀಲ್, ನರಸಿಂಹ ನಾಯಕ, ಬುಡ್ಡನಗೌಡ ಪಾಟೀಲ್, ರಾಮಕೃಷ್ಣ, ನಾಗರಾಜ, ಹಂಪಯ್ಯ ನಾಯಕ, ಪಿ.ರಾಜು, ನರಸಪ್ಪ,ಶ್ವೇತಾ ಅವರ ತಂದೆ ವೆಂಕಟಸ್ವಾಮಿ, ಕುಟುಂಬಸ್ಥರು, ಕಾರ್ಯಕರ್ತರು ಇದ್ದರು.