ಸಾರಾಂಶ
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಜನ್ಮ ದಿನ ಆಚರಣೆ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಜನ್ಮ ದಿನ ಪ್ರಯುಕ್ತ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಮಂಡಲ ಬಿಜೆಪಿ ವತಿಯಿಂದ ಆಯೋಜಿಸಲಾದ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ಶಿಬಿರ, ರಕ್ತದಾನ ಮತ್ತು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.ಇದೇ ವೇಳೆ ವಿ.ಸೋಮಣ್ಣ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸೌಮ್ಯನಾಥ ಸ್ವಾಮೀಜಿ ಅವರ ಆರ್ಶೀವಾದ ಪಡೆದರು.
ಈ ವೇಳೆ ಮಾತನಾಡಿದ ಸೋಮಣ್ಣ, ನನ್ನ ಜೀವನದಲ್ಲಿ ಶಿವಕುಮಾರ ಸ್ವಾಮೀಜಿ ಮತ್ತು ಬಾಲಗಂಗಾಧರನಾಥ ಸ್ವಾಮೀಜಿ ಅವರ ಆರ್ಶೀವಾದ, ಒಡನಾಟದಿಂದಾಗಿ ಕಳೆದ 45 ವರ್ಷಗಳಿಂದ ಜನಸೇವೆ ಮಾಡಲು ಸಾಧ್ಯವಾಗಿದೆ. ಸಾಮಾನ್ಯ ಕಾರ್ಯಕರ್ತನನ್ನು ಜನಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಜನತೆಗೆ ಮತ್ತು ಬಿಜೆಪಿಗೆ ಧನ್ಯವಾದಗಳು ಎಂದರು.ಬಿನ್ನಿಪೇಟೆ, ವಿಜಯನಗರ, ಗೋವಿಂದರಾಜನಗರ ಮತ್ತು ತುಮಕೂರು ಕ್ಷೇತ್ರಗಳು ನನ್ನ ಹೃದಯದಲ್ಲಿ ಇದೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಮಾಡಲು ಕಡಿಮೆ ಅವಧಿ ಸಿಕ್ಕಿದ್ದು, ಅಲ್ಲಿನ ಜನರ ಪ್ರೀತಿ ವಿಶ್ವಾಸದಿಂದ ನನಗೆ 1.75 ಲಕ್ಷ ಮತಗಳ ಅಂತರದಿಂದ ಜಯಗಳಿಸಿದೆ ಎಂದು ಹೇಳಿದರು.
ಬೆಂಗಳೂರಿಗೆ ಹತ್ತಿರದಲ್ಲಿರುವ ತುಮಕೂರು ಕ್ಷೇತ್ರವನ್ನು ಹೈಟೆಕ್ ಕ್ಷೇತ್ರವಾಗಿ ಮಾಡಲಾಗುವುದು. ರಾಜ್ಯದಲ್ಲಿ ರೈಲ್ವೆ ಯೋಜನೆಗಳು ಶೀಘ್ರಗತಿಯಲ್ಲಿ ಕಾಮಗಾರಿ ಪೂರ್ಣ ಮತ್ತು ಜಲಶಕ್ತಿ ಯೋಜನೆಗಳಿಗೆ ಹೊಸ ಕಾಯಕಲ್ಪ ನೀಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 10 ವರ್ಷದಲ್ಲಿ ವಿಶ್ವದ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಶಾಸಕ ಸಿ.ಕೆ.ರಾಮಮೂರ್ತಿ, ರಾಜ್ಯ ಬಿಜೆಪಿ ಯುವ ಮುಖಂಡ ಡಾ। ಅರುಣ್ ಸೋಮಣ್ಣ, ಆಡಳಿತ ಪಕ್ಷದ ಮಾಜಿ ನಾಯಕ ರವೀಂದ್ರ, ಮಂಡಲ ಅಧ್ಯಕ್ಷ ವಿಶ್ವನಾಥಗೌಡ, ಪಕ್ಷದ ನಾಯಕರಾದ ಮೋಹನ್ ಕುಮಾರ್, ಬಾಬಿ ವೆಂಕಟೇಶ್, ದಾಸೇಗೌಡ, ಸಿ.ಎಂ.ರಾಜಪ್ಪ, ಕನಕಪುರ ರಾಜಣ್ಣ, ಕ್ರಾಂತಿರಾಜು, ವೇಣುಗೌಡ, ಶ್ರೀಧರ್, ಡೊಡ್ಡವೀರಯ್ಯ ಉಪಸ್ಥಿತರಿದ್ದರು.