ಸಾರಾಂಶ
ಚಿಂತಾಮಣಿ: ಅಪರಿಚಿತ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದು ಅಪ್ರಾಪ್ತ ಸವಾರ ಮೃತಪಟ್ಟಿರುವ ಘಟನೆ ತಾಲೂಕಿನ ಜ್ಯೋಗ್ಯಾನಹಳ್ಳಿ ಗೇಟ್ ಬಳಿ ನಡೆದಿದ್ದು, ಬಾಗೇಪಲ್ಲಿ ತಾಲೂಕು ಮಿಟ್ಟೆಮರಿ ಸಮೀಪದ ಕಾಣಿಗಮಾಕಲಹಳ್ಳಿಯ ಕಾರ್ತಿಕ್ (೧೭) ಎಂಬ ಅಪ್ರಾಪ್ತ ಮೃತಪಟ್ಟ ದುರ್ದೈವಿ. ಈತನು ಬೈಕ್ ನಲ್ಲಿ ಚಿಂತಾಮಣಿಯಿಂದ ಚೇಳೂರು ಮಾರ್ಗವಾಗಿ ತನ್ನ ಅಜ್ಜಿಯ ಊರಾದ ಕೂತಸಂದ್ರಕ್ಕೆ ಸೋಮವಾರ ರಾತ್ರಿ ಹೋಗುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಅಪಘಾತದಲ್ಲಿ ಬೈಕ್ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಅದರೊಂದಿಗೆ ಆತನೂ ಸಹ ಸುಟ್ಟು ಕರಕಾಲಾಗಿದ್ದು ವಿಷಯ ತಿಳಿದ ಹೊಯ್ಸಳ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲಿಸಲಾಗಿ ಮೃತನ ಬಗ್ಗೆ ಯಾವುದೇ ಸುಳಿವು ಸಿಗದಿದ್ದಾಗ ಆತನ ಮೊಬೈಲ್ ಪೋನ್ ಸ್ವೀಚ್ ಆಫ್ ಆಗಿದ್ದು, ಈ ವಿಚಾರವನ್ನು ಕೆಂಚರ್ಲಹಳ್ಳಿ ಪೊಲೀಸರಿಗೆ ತಿಳಿಸಿದ್ದಾರೆ. ಆದರಂತೆ ಕಾರ್ಯಪ್ರವೃತ್ತರಾದ ಕೆಂಚರ್ಲಹಳ್ಳಿ ಪೊಲೀಸರು ಮೃತನ ಮೊಬೈಲ್ನಿಂದ ಸಿಮ್ಅನ್ನು ಹೊರತೆಗೆದು ಬೇರೊಂದಕ್ಕೆ ಅಳವಡಿಸಿ ಅದರಲ್ಲಿದ್ದ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ಮೃತನ ಗುರುತು, ವಿಳಾಸ ವಿವರಗಳನ್ನು ಸಂಗ್ರಹಿಸಲು ಸಾಧ್ಯವಾಗಿದ್ದು, ಮೃತನ ಸಂಬಂಧಿಕರು ನೀಡಿದ ದೂರಿನಂತೆ ಕೆಂಚರ್ಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.