ಅವೈಜ್ಞಾನಿಕ ರಸ್ತೆ ಕಾಮಗಾರಿ ಜನರಿಗೆ ಕಿರಿಕಿರಿ

| Published : May 28 2024, 01:16 AM IST

ಸಾರಾಂಶ

ಒಂದು ವರ್ಷದಿಂದ ನಿರ್ಮಾಣ ಹಂತದಲ್ಲಿರುವ ರಸ್ತೆ ಕಾಮಗಾರಿ ಆಮೆಗತಿಯಲ್ಲಿಯೇ ಸಾಗುತ್ತಿದೆ. ಇದರಿಂದ ಸವಾರರು, ಸಾರ್ವಜನಿಕರ ನಿತ್ಯ ವ್ಯವಹಾರಗಳಿಗೆ ಅಲೆದಾಡಲು ಅಡೆತಡೆ ಉಂಟಾಗುತ್ತಿದೆ.

ಸಿ.ಎಂ. ಜೋಶಿ

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಒಂದು ವರ್ಷದಿಂದ ನಿರ್ಮಾಣ ಹಂತದಲ್ಲಿರುವ ರಸ್ತೆ ಕಾಮಗಾರಿ ಆಮೆಗತಿಯಲ್ಲಿಯೇ ಸಾಗುತ್ತಿದೆ. ಇದರಿಂದ ಸವಾರರು, ಸಾರ್ವಜನಿಕರ ನಿತ್ಯ ವ್ಯವಹಾರಗಳಿಗೆ ಅಲೆದಾಡಲು ಅಡೆತಡೆ ಉಂಟಾಗುತ್ತಿದೆ. ಪಾದಚಾರಿಗಳಿಗೆ, ವಾಹನ ಚಾಲಕರಿಗೆ ಸರಿಯಾದ ಮಾರ್ಗಸೂಚಿ ಫಲಕ ಹಾಕದೇ ಕಾಮಗಾರಿ ಮಾಡುತ್ತಿರುವುದು ಜನರಿಗೆ ಕಿರಿಕಿರಿಯಾಗಿದೆ.

ಪಟ್ಟಣದ ಮಧ್ಯ ಹಾಯ್ದು ಹೋಗುವ ಸಂಕೇಶ್ವರ-ಸಂಗಮ ರಸ್ತೆ ಒಂದು ವರ್ಷದಿಂದ ಜನರಿಗೆ ತಲೆನೋವಾಗಿ ಪರಿಣಮಿಸಿದೆ. ಯಾವುದೇ ನಿರ್ದಿಷ್ಟ ಕಾರ್ಯಯೋಜನೆ ಇಲ್ಲ. ಕಾಮಗಾರಿ ವಿಳಂಬವಾಗುತ್ತಲೇ ಇದೆ. ಇನ್ನೇನು ಕಾಮಗಾರಿ ಆರಂಭವಾಯ್ತು ಎಂದು ಸಮಾಧಾನಪಟ್ಟುಕೊಳ್ಳುವಷ್ಟರಲ್ಲೇ ವಾರದಲ್ಲಿ ಮತ್ತೆ 15 ದಿನ ಕಾಮಗಾರಿ ಸ್ಥಗಿತವಾಗುತ್ತದೆ. ಇದರಿಂದ ಪಟ್ಟಣದ ಪ್ರಮುಖ ವ್ಯಾಪಾರಿ ಕೇಂದ್ರವಾಗಿರುವ ಭಂಡಾರಿ ಸರ್ಕಲ್ ಸುತ್ತಮುತ್ತ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ಕುಸಿತ ಕಂಡಿದೆ. ಸಹಜವಾಗಿ ವ್ಯಾಪಾರಸ್ಥರು ಕೂಡ ಕಾಮಗಾರಿ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ರಸ್ತೆ ನಿರ್ಮಿಸುವ ನೆಪದಲ್ಲಿ ಅಂಗಡಿಗಳ ಮುಂದಿನ ಭಾಗ ತಗ್ಗು ಪ್ರದೇಶವಾಗಿದೆ. ಮಳೆ ಆಗಿದ್ದರಿಂದ ನೀರು ನಿಂತಿದೆ. ಗ್ರಾಹಕರು ಈ ಅಂಗಡಿಗಳಿಗೆ ವ್ಯಾಪಾರಕ್ಕೆ ಬರಲು ಪರದಾಡುವಂತಾಗಿದೆ. ಆದಷ್ಟು ಬೇಗ ರಸ್ತೆ ಕಾಮಗಾರಿ ಮುಗಿಸಿದರೆ ವ್ಯಾಪಾರ ಹಾಗೂ ಸಂಚಾರಕ್ಕೆ ಅನುಕೂಲವಾಗುತ್ತದೆ. ಆದರೆ, ಗುತ್ತಿಗೆದಾರರು ಒಂದು ವರ್ಷದಿಂದ ವಿಳಂಬ ಮಾಡುತ್ತಲೇ ಇದ್ದಾರೆ.

ಈ ರಸ್ತೆ ಕಾಮಗಾರಿ ಆರಂಭವಾದಾಗಿನಿಂದ ಅನೇಕ ಬಾರಿ ಸಾರ್ವಜನಿಕರು, ವ್ಯಾಪಾರಸ್ಥರು, ಶಾಲಾ ಮಕ್ಕಳು, ಅಕ್ಕಪಕ್ಕದ ನಿವಾಸಿಗಳು ಪ್ರತಿಭಟನೆ ಮಾಡಿ ಬಿಸಿ ಮುಟ್ಟಿಸಿದ್ದಾರೆ. ಆದರೂ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಈ ಪ್ರತಿಭಟನೆಗಳಿಗೆ ಕ್ಯಾರೇ ಎನ್ನದೇ ತಮಗೆ ಇಷ್ಟಬಂದಂತೆ ನಡೆದುಕೊಳ್ಳುತ್ತಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪ.

ಎರಡು-ಮೂರು ತಿಂಗಳ ಹಿಂದೆಯೇ ಬಾಗಲಕೋಟೆ ರಸ್ತೆ ಹಾಗೂ ಕಮತಗಿ ರಸ್ತೆ ಕಾಮಗಾರಿ ಆರಂಭವಾಗುತ್ತದೆ ಎಂದು ಹೇಳಿದಾಗ ಅಂಗಡಿಕಾರರು ಅಂಗಡಿ ಮುಂದಿನ ಶೆಡ್, ಅಂಗಡಿಯ ಮೆಟ್ಟಿಲುಗಳನ್ನು ತೆಗೆಸಿದರು. ಆದರೆ ವರ್ಷವಾದರೂ ಕಾಮಗಾರಿ ಮುಗಿಯುತ್ತಿಲ್ಲ. ಹೀಗಾಗಿ ಬಾಗಲಕೋಟೆ ರಸ್ತೆಯ ವ್ಯಾಪಾರಸ್ಥರು ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಕಮತಗಿ ರಸ್ತೆ ಕಾಮಗಾರಿ ಆರಂಭಿಸಿ ಬಾಗಲಕೋಟೆ ಮಾರ್ಗದ ರಸ್ತೆ ಸ್ಥಗಿತ ಮಾಡಿದ್ದು, ವ್ಯಾಪಾರಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.

ನಾಲ್ಕಾರು ದಿನಗಳಿಂದ ಬಾಗಲಕೋಟೆ ಮಾರ್ಗದ ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಗಿರುವುದರಿಂದ ಎರಡೂ ಪ್ರಮುಖ ರಸ್ತೆಗಳು ಬಂದ್ ಆಗಿದ್ದರಿಂದ ವಾಹನ ಸಂಚಾರಕ್ಕೆ ಮತ್ತು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ. ಕಮತಗಿ ಮಾರ್ಗದ ಒಂದು ಭಾಗದ ರಸ್ತೆ ಕಾಮಗಾರಿ ಸಂಪೂರ್ಣ ಮುಗಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟು, ನಂತರ ಮತ್ತೊಂದು ಭಾಗದ ರಸ್ತೆ ಕಾಮಗಾರಿ ಆರಂಭಿಸಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಎರಡೂ ರಸ್ತೆಗಳ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಸಂಚಾರ ಸಮಸ್ಯೆ ತೀವ್ರವಾಗಿದೆ.

ಇಲ್ಲಿನ ವ್ಯಾಪಾರಸ್ಥರು, ಸಾವರ್ಜನಿಕರು, ಟಂಟಂ, ಗೂಡ್ಸ್‌ ವಾಹನ ಚಾಲಕರು, ವಿವಿಧ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು ಅವೈಜ್ಞಾನಿಕವಾದ ಈ ರಸ್ತೆ ಕಾಮಗಾರಿಗೆ ಬೇಸತ್ತು ಪ್ರತಿಭಟನೆ ಮಾಡುವ ಚಿಂತನೆ ನಡೆಸಿದ್ದಾರೆ. ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರಿಗೆ ಈಗಲೇ ಎಚ್ಚೆತ್ತುಕೊಂಡು ಅನಾನುಕೂಲವಾಗುವ ರೀತಿಯಲ್ಲಿ ಮಾಮಗಾರಿ ಆದಷ್ಟು ಬೇಗ ಮಾಡಿ ಮುಗಿಸಬೇಕಿದೆಂದು ಸಾರ್ವಜನಿಕರ ಆಗ್ರಹವಾಗಿದೆ.

ಪಟ್ಟಣದಲ್ಲಿ ರಸ್ತೆ ಕಾಮಗಾರಿ ಮಾಡುವ ನೆಪದಲ್ಲಿ ಸಾರ್ವನಿಕರಿಗೆ ಮತ್ತು ವ್ಯಾಪಾರಕ್ಕೆ ಕಂಟಕ ತಂದಿರುವುದೆಷ್ಟು ಸರಿ ಎಂದು ಜನತೆ ಪ್ರಶ್ನಿಸುತ್ತಿದ್ದಾರೆ. ಶಾಸಕರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿಕಾಮಗಾರಿ ವೀಕ್ಷಣೆ ಮಾಡಿ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಅಗತ್ಯ ನಿರ್ದೇಶನ ನೀಡಬೇಕು. ಆದಷ್ಟು ಬೇಗ ರಸ್ತೆ ಕೆಲಸ ಮುಗಿಸಿ ವ್ಯಾಪಾರ ಹಾಗೂ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಸಾಮಾಜಿಕ ಹೋರಾಟಗಾರ ಅಶೋಕ ಹೆಗಡೆ, ಪುರಸಭೆ ಸದಸ್ಯ ಪ್ರಶಾಂತ ಜವಳಿ, ರಾಚಪ್ಪ ಸಾರಂಗಿ, ಮಂಜುನಾಥ ರಾಜನಾಳ, ಪ್ರಕಾಶ ವಾಳದುಂಕಿ, ಬಸವರಾಜ ತೊಗರಿ, ಮೋಹನ ಮಲಜಿ, ಕರವೇ ಅಧ್ಯಕ್ಷ ರವಿ ಅಂಗಡಿ ಸೇರಿದಂತೆ ಅನೇಕರು ಒತ್ತಾಯಿಸಿದ್ದಾರೆ.ರಸ್ತೆ ಕಾಮಗಾರಿಯನ್ನು ತೀವ್ರಗತಿಯಲ್ಲಿ ಮಾಡುತ್ತಿದ್ದೇವೆ. ಕಮತಗಿ ಮಾರ್ಗದ ಒಂದು ಭಾಗದ ರಸ್ತೆ ನಿರ್ಮಾಣ ಕಾಮಗಾರಿ ಮುಗಿದಿದೆ. ಅದನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಬಾಗಲಕೋಟೆ ಮಾರ್ಗದ ರಸ್ತೆ ಕಾಮಗಾರಿ ಆರಂಭವಾಗಿದ್ದು, ಸಾರ್ವಜನಿಕರು ಸಹಕಾರ ನೀಡಬೇಕು.

- ಎಂ.ಕೆ.ಮಕಾನದಾರ, ಕಿರಿಯ ಅಭಿಯಂತರ, ಲೋಕೋಪಯೋಗಿ ಇಲಾಖೆ