ಸಾರಾಂಶ
ಅವೈಜ್ಞಾನಿಕ ಕಾಮಗಾರಿಯಿಂದಾಗಿ ರಸ್ತೆ ಪಕ್ಕದ ವಿದ್ಯುತ್ ಕಂಬಗಳು ವಾಲಿದ್ದು ಅವಘಡ ಸಂಭವಿಸಿದರೆ ಯಾರು ಹೊಣೆ ಎಂದು ರೈತರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಪಾವಗಡ
ಅವೈಜ್ಞಾನಿಕ ಕಾಮಗಾರಿಯಿಂದಾಗಿ ರಸ್ತೆ ಪಕ್ಕದ ವಿದ್ಯುತ್ ಕಂಬಗಳು ವಾಲಿದ್ದು ಅವಘಡ ಸಂಭವಿಸಿದರೆ ಯಾರು ಹೊಣೆ ಎಂದು ರೈತರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪಾವಗಡ ನಗರದಿಂದ ವೈ.ಎನ್.ಹೊಸಕೋಟೆ ಹಾಗೂ ಆಂಧ್ರದ ಅನಂತಪುರಕ್ಕೆ ತೆರಳುವ ಮುಖ್ಯ ರಸ್ತೆ ಪಕ್ಕ, ತಾಲೂಕಿನ ಕೆಂಚಗಾನಹಳ್ಳಿ ಗೇಟ್ ಬಳಿ ಕೇಬಲ್ ನೆಟ್ ವರ್ಕ್ ಅಳಡಿಸುವ ಸಲುವಾಗಿ ಜೆಸಿಬಿಗಳಿಂದ ನೆಲ ಬಗೆಯುವ ಕಾಮಗಾರಿ ನಡೆಯುತ್ತಿದೆ. ಇದರಿಂದ ನೆಲ ಸಡಿಲವಾಗಿ ಪಕ್ಕದಲ್ಲಿಯೇ ಇದ್ದ ಸಂಪರ್ಕದ ವಿದ್ಯುತ್ ಕಂಬಗಳು ನೆಲಕ್ಕೆ ವಾಲಿದ್ದು ವಿದ್ಯುತ್ ಅವಘಡ ಸಂಭವಿಸಿದರೆ ಗತಿ ಏನು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ನೀರಾವರಿ ಪಂಪ್ ಸೆಟ್ ಹಾಗೂ ಸಾರ್ವಜನಿಕರ ವಿದ್ಯುತ್ ಸಂಪರ್ಕದ ಹಿನ್ನೆಲೆಯಲ್ಲಿ ಪಾವಗಡ ಬೆಸ್ಕಾಂ ಉಪ ಕೇಂದ್ರ ದಿಂದ ತಾಲೂಕಿನ ವೈ.ಎನ್.ಹೊಸಕೋಟೆ ಸಬ್ ಸ್ಟೇಷನ್ಗೆ ಸರಬರಾಜು ಸಂಪರ್ಕದ ವಿದ್ಯುತ್ ತಂತಿ ಹಾದುಹೋಗಿದ್ದು ಇದೇ ಮಾರ್ಗದಲ್ಲಿ ಹೈಟೆಂಕ್ಷನ್ನ ಸೋಲಾರ್ ಪಾರ್ಕ್ಗಳ ವಿದ್ಯುತ್ ಸರಬರಾಜು ಸಂಪರ್ಕದ ಕಂಬಗಳನ್ನು ಅಳವಡಿಸಲಾಗಿದೆ. ಇಂತಹ ಅಪಾಯದ ಕಂಬಗಳ ಸಮೀಪವೇ ಕೇಬಲ್ ನೆಟ್ ವರ್ಕ್ ಸಂಪರ್ಕ ಕಲ್ಪಿಸಲು ಜೆಬಿಸಿಯಿಂದ ನೆಲ ಬಗೆಯುವ ಕಾಮಗಾರಿ ನಡೆಯುತ್ತಿದ್ದು ಆಳವಾದ ನೆಲ ಬಗೆದಿದ್ದ ಕಾರಣ ಅಲ್ಲಲ್ಲಿ ಬೆಸ್ಕಾಂ ಹಾಗೂ ಸೋಲಾರ್ ವಿದ್ಯುತ್ ಸಂಪರ್ಕದ ಬೃಹತ್ ಗಾತ್ರದ ಕಂಬಗಳು ಸಹ ಬಾಗಿವೆ. ಕಂಬಗಳು ನೆಲಕ್ಕುರುಳುವ ಆತಂಕ ವ್ಯಕ್ತವಾಗಿದ್ದು ಇದರಿಂದ ಈ ಭಾಗದ ರೈತರು ಹಾಗೂ ಸಾರ್ವಜನಿಕರು ಗಾಬರಿಯಾಗಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಬೆಸ್ಕಾಂ ಎಇಇ ನನಗೆ ಮಾಹಿತಿ ಇರಲಿಲ್ಲ. ಈ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.ಕೋಟ್....ಅನಧಿಕೃತವಾಗಿ ಕೇಬಲ್ ನೆಟ್ ವರ್ಕ್ ಕಲೆಕ್ಷನ್ ಕಾಮಗಾರಿ ನಡೆಸುತ್ತಿರುವ ಸಂಶಯ ವ್ಯಕ್ತವಾಗಿದೆ. ನೆಲಕ್ಕೆ ಬಾಗಿರುವ ವಿದ್ಯುತ್ ಕಂಬಗಳನ್ನು ಪರಿಶೀಲಿಸಲಾಗಿದೆ. ನಿಯಮ ಉಲ್ಲಂಘಿಸಿ ಕಾಮಗಾರಿ ನಡೆಸುತ್ತಿರುವವರ ವಿರುದ್ಧ ಬೆಸ್ಕಾಂ ಮೇಲಧಿಕಾರಿಗಳಿಗೆ ದೂರು ನೀಡಲಾಗುವುದು.
- ರಮೇಶ್ ಸಹಾಯಕ ಎಂಜಿನಿಯರ್, ಬೆಸ್ಕಾಂ.