ಉಪ್ಪಾರರು ಶೈಕ್ಷಣಿಕ, ರಾಜಕೀಯವಾಗಿ ಮುಂದೆ ಬನ್ನಿ: ಗೌಡಳ್ಳಿ ಮಹೇಶ್

| Published : Jun 24 2024, 01:33 AM IST

ಸಾರಾಂಶ

ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಶ್ರೀ ಭಗೀರಥ ಮಹರ್ಷಿ ರವರ ಜಯಂತಿಯನ್ನು ಉಪ್ಪಾರ ಸಮುದಾಯದವರು ಅದ್ಧೂರಿಯಾಗಿ ಆಚರಿಸಲಾಯಿತು.

ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಯಳಂದೂರು

ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಶ್ರೀ ಭಗೀರಥ ಮಹರ್ಷಿ ರವರ ಜಯಂತಿಯನ್ನು ಉಪ್ಪಾರ ಸಮುದಾಯದವರು ಅದ್ಧೂರಿಯಾಗಿ ಆಚರಿಸಲಾಯಿತು.

ಗದ್ದಗೆಯ ಮನೆಯಲ್ಲಿ ವೇದಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶ್ರೀಭಗೀರಥ ಮಹರ್ಷಿರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಬ‍ಳಿಕ ನಡೆದ ಸಮಾರಂಭದಲ್ಲಿ ವಕೀಲ ಗೌಡಹಳ್ಳಿ ಮಹೇಶ್ ಮಾತನಾಡಿ, ಶ್ರೀಭಗೀರಥ ಮಹರ್ಷಿರವರು ಗಂಗೆಯನ್ನು ಭೂಮಿಗೆ ತರಬೇಕಾದರೆ ನಿರಂತರ ಪ್ರಯತ್ನ ಮಾಡಿದರು. ಭಗೀರಥ ಅಂದರೆ ಪ್ರಯತ್ನ ಎಂದು ನಾವು ಅರ್ಥಮಾಡಿಕೊಳ್ಳಬೇಕು. ಉಪ್ಪಾರ ಸಮುದಾಯದ ಹಿನ್ನೆಲೆ ಅಧ್ಯಯನ ಮಾಡಿದಾಗ ಕ್ಷತ್ರಿಯರಾಗಿದ್ದರು. ಆದರೆ ಇಂದು ಈ ಸಮುದಾಯ ಎಲ್ಲಾ ರಂಗದಲ್ಲಿಯೂ ಕೊನೆಯಲ್ಲಿದೆ. ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮುಂದೆ ಬರಲು ಈ ಸಮುದಾಯ ಭಗೀರಥ ಪ್ರಯತ್ನ ಮಾಡಲೇ ಬೇಕಾಗಿದೆ.

ಜೊತೆಗೆ ಮೂಢನಂಬಿಕೆಗಳಿಂದ ದೂರವಿರಬೇಕು. ಈ ಸಮುದಾಯ ಬೇರೆ ಬೇರೆ ಮೂಢನಂಬಿಕೆಗಳ ಕಾರ್ಯಗಳಿಗೆ ದುಂದುವೆಚ್ಚ ಮಾಡುವುದನ್ನು ನಿಲ್ಲಿಸಿ ಅದೇ ಹಣವನ್ನು ಸಮುದಾಯದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಬೇಕು.

ಉಪ್ಪಾರ ಸಮುದಾಯ ರಾಷ್ಟ್ರದಲ್ಲಿ 12 ಕೋಟಿ ಜನಸಂಖ್ಯೆ ಇದೆ ಎಂದು ತಿಳಿಸಿದರು.

ನಂತರ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಗ್ರಾಮದ ಯಜಮಾನರು ಮತ್ತು ಭಗೀರಥ ಯುವಕ ಸಂಘದ ನೇತೃತ್ವದಲ್ಲಿ ಪ್ರತಿಭಾ ಪುರಸ್ಕರ ಮಾಡಲಾಯಿತು.

ನಂತರ ಬೆಳ್ಳಿರಥದಲ್ಲಿ ಭಗೀರಥ ಮಹರ್ಷಿ ರವರ ಪೋಟೋ ಇರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಡಾ. ಅಮರ್, ವಕೀಲರಾದ ಮಾದೇಶ್, ಯಜಮಾನರಾದ ಡಿ ನಾಗರಾಜು, ಪುಟ್ಟಸ್ವಾಮಿ,ಶ್ರೀಕಂಠಶೆಟ್ರು, ರಂಗಸ್ವಾಮಿ, ನಿಂಗರಾಜು, ನಾರಾಯಣ್ ಸ್ವಾಮಿ, ಗವಿಸಿದ್ದಶೆಟ್ಟಿ ಗ್ರಾಪಂ ಮಾಜಿ ಅಧ್ಯಕ್ಷ ಬಾಲುಪ್ರಸಾದ್, ಮುಖಂಡರಾದ ಪ್ರಕಾಶ್ , ದಾಸ, ಸಿದ್ದರಾಜು, ಆನಂದ್ ಹಾಗೂ ಯುವಕರು ಹಾಜರಿದ್ದರು.