ಉಪ್ಪಿನಂಗಡಿ: ಕಡಬ ತಾಲೂಕಿನ ಶಿರಾಡಿ, ಉದನೆ, ನೆಲ್ಯಾಡಿ, ಕೊಯಿಲ ಭಾಗದಲ್ಲಿ ಕಳೆದ 10 ದಿನಗಳಿಂದ ನೆಟ್‌ವರ್ಕ್ ಸಮಸ್ಯೆ ಅತಿಯಾಗಿ ಕಾಡುತ್ತಿದೆ. ಶಿರಾಡಿ ಗ್ರಾಮ ಪಂಚಾಯಿತಿ ಸಿಬ್ಬಂದಿ ನೆಟ್ವರ್ಕ್ ಲಭ್ಯತೆಗಾಗಿ ಕಚೇರಿಯಿಂದ ಹೊರಗೆ ಬೀದಿಗೆ ಬಂದು ಕೆಲಸ ನಿರ್ವಹಿಸಬೇಕಾದ ಅನಿವಾರ‍್ಯ ಪರಿಸ್ಥಿತಿ ಉಂಟಾಗಿದೆ. ಇಂಟರ್‌ನೆಟ್ ಅಸ್ತವ್ಯಸ್ತಗೊಂಡು ಆನ್‌ಲೈನ್ ಸೇವೆಗಳು ಸ್ತಬ್ಧಗೊಂಡು ಜನರು ನಿತ್ಯ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಹಣದ ತುರ್ತು ಅವಶ್ಯಕತೆ ಇರುವ ಮಂದಿ ಬ್ಯಾಂಕಿಗೆ ಹೋದರೆ ಅಲ್ಲಿ ಇಂಟರ್ನೆಟ್ ಇಲ್ಲವೆಂಬ ಕಾರಣಕ್ಕೆ ಆರ್ಥಿಕ ವ್ಯವಹಾರ ನಡೆಸಲಾಗದೆ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಉದನೆಯಲ್ಲಿ ಕಾರ್ಯಾಚರಿಸುತ್ತಿರುವ ಶಿರಾಡಿ ಗ್ರಾಮ ಪಂಚಾಯಿತಿಯಲ್ಲಿ ಸಿಬ್ಬಂದಿ ಕಚೇರಿಯಿಂದ ಹೊರ ಬಂದು, ರಸ್ತೆಯಲ್ಲಿ ಅಥವಾ ಎತ್ತರದ ಜಾಗಕ್ಕೆ ಮೊಬೈಲ್ ಯಾ ಲ್ಯಾಪ್‌ಟ್ಯಾಪ್ ಎತ್ತಿಕೊಂಡು ಹೋಗಿ ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ನು ಅಂಗಡಿಗಳಲ್ಲಿ ಗ್ರಾಹಕರು ಯುಪಿಐ. ಮೂಲಕ ಹಣ ನೀಡುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂಬ ದೂರು ವ್ಯಕ್ತವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ಸಂಪರ್ಕವೇ ಜನರ ಬದುಕಿನ ಅವಿಭಾಜ್ಯ ಅಂಗವಾಗಿರುವ ಈ ಕಾಲದಲ್ಲಿ ನೆಟ್ವರ್ಕ್ ಸಮಸ್ಯೆ ಜನಜೀವನದ ಮೇಲೆಯೇ ನೇರ ಪರಿಣಾಮ ಬೀರುತ್ತಿದೆ. ವಿದ್ಯಾರ್ಥಿಗಳ ಆನ್‌ಲೈನ್ ಶಿಕ್ಷಣ, ಬ್ಯಾಂಕಿಂಗ್ ವ್ಯವಹಾರ, ತುರ್ತು ವೈದ್ಯಕೀಯ ಸಂಪರ್ಕ ಹಾಗೂ ಸಣ್ಣ ವ್ಯಾಪಾರಿಗಳ ಹಣಕಾಸು ವ್ಯವಹಾರಗಳೆಲ್ಲವೂ ಮೊಬೈಲ್ ನೆಟ್ವರ್ಕ್ ಮೇಲೆಯೇ ಅವಲಂಬಿತವಾಗಿವೆ. ಆದರೆ ನಿರಂತರ ಸಮಸ್ಯೆಯಿಂದ ಭ್ರಮನಿರಸನ ಪಡುವಂತಾಗಿದೆ ಎಂದು ಸಾರ್ವಜನಿಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಕರೆನ್ಸಿ ಅವಧಿ ಮುಗಿಯುವುದರ ಒಳಗಾಗಿ ಕರೆ ಮಾಡಿ ರಿಜಾರ್ಚ್ ಮಾಡಿಸಲು ದುಂಬಾಲು ಬೀಳುವ ಕಂಪನಿಯ ಸಿಬ್ಬಂದಿ, ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಕನಿಷ್ಠ ಕಾಳಜಿ ತೋರುವುದಿಲ್ಲ. ಯಾರಾದರೂ ವಿತರಕರನ್ನು ಸಂಪರ್ಕಿಸಿ ಕಂಪೆನಿಯವರ ನಂಬರ್ ಸಂಗ್ರಹಿಸಿ ಸಮಸ್ಯೆ ಹೇಳಲು ಕರೆ ಮಾಡಿದರೆ, ಸಮಸ್ಯೆ ಆಲಿಸಲು ಒಪ್ಪದ ಅಧಿಕಾರಿಗಳು “ನಿಮಗೆ ನಮ್ಮ ನಂಬರ್ ಕೊಟ್ಟವರು ಯಾರು? ಅವರನ್ನೇ ಕೇಳಿ’’ ಎಂದು ದಭಾಯಿಸಿ ಕರೆ ಕಡಿತ ಮಾಡುತ್ತಾರೆ. ಹೀಗಾಗಿ ಸಂಸ್ಥೆಯ ಸೇವೆ ಶೂನ್ಯ ಎಂದು ಗ್ರಾಹಕರೋರ್ವರು ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.ತಾಂತ್ರಿಕ ಉನ್ನತೀಕರಣದ ಕೊರತೆಯಿಂದ ಹೀಗಾಗುತ್ತಿದೆ ಎಂದು ನಾಗರಿಕರು ಆರೋಪಿಸುತ್ತಿದ್ದು, ಸಮಸ್ಯೆಗೆ ನಿಖರ ಕಾರಣ ಸ್ಥಳೀಯಾಡಳಿತಗಳಿಗೂ ತಿಳಿದುಬಂದಿಲ್ಲ.-----------ಕೋಟ್ಸ್‌---------ಉದನೆ ಪೇಟೆಯಲ್ಲಿ ತುರ್ತು ಸಂದರ್ಭದಲ್ಲೂ ಕರೆ ಮಾಡಲು ಸಿಗ್ನಲ್ ಇಲ್ಲದ ಪರಿಸ್ಥಿತಿ ಬಂದಿದೆ. ಕೆಲವೊಮ್ಮೆ ಮನೆ ಹೊರಗೆ, ರಸ್ತೆಗೆ ಬಂದು ನಿಂತರೂ ನೆಟ್ವರ್ಕ್ ಸಿಗುವುದಿಲ್ಲ. ವೈಫೈ ಹಾಕಿದ್ದರೂ ಅದರ ಪ್ರಯೋಜನವೂ ದೊರಕುತ್ತಿಲ್ಲ, ವ್ಯಾಪಾರ, ವ್ಯವಹಾರ ನಡೆಯದಂತಾಗಿದೆ. ಕಂಪನಿಯವರು ಗ್ರಾಮೀಣ ಜನರ ಸಮಸ್ಯೆಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿದ್ದಾರೆ.ಮ್ಯಾಥ್ಯು ಟಿ.ಜೆ., ವರ್ತಕರು, ಉದನೆ.

ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆ ಆನ್‌ಲೈನ್ ಮುಖಾಂತರ ನಡೆಯುವಂತದ್ದು, ಪ್ರತಿಯೊಂದಕ್ಕೂ ಒಟಿಪಿ ಮುಖ್ಯ. ಆದರೆ ಇದನ್ನು ನೋಡಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರು ದಿನ ನಿತ್ಯ ಕಚೇರಿಗೆ ಅಲೆದಾಡುವಂತಾಗಿದೆ. ಅನಿವಾರ‍್ಯ ಪರಿಸ್ಥಿತಿಯಲ್ಲಿ ಕಚೇರಿಯ ಹೊರಗೆ ಅಥವಾ ರಸ್ತೆ ಬದಿಗೆ ಮೊಬೈಲ್ ಹಿಡಿದುಕೊಂಡು ಹೋಗಿ ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಈಗಾಗಲೇ ಏರ್‌ಟೈಲ್ ಬೆಂಗಳೂರು ಕಚೇರಿಗೆ ದೂರು ಸಲ್ಲಿಸಿದ್ದೇನೆ. । ಯಶವಂತ ಬೆಲ್ಚಡ್ಡ, ಪಿಡಿಒ., ಗ್ರಾಮ ಪಂಚಾಯಿತಿ, ಶಿರಾಡಿ