ಸಾರಾಂಶ
ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ದಿನಾಚರಣೆ ಹಾಗೂ ಕಾಲೇಜು ವಾರ್ಷಿಕೋತ್ಸವ ಮತ್ತು ೧ ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡಿರುವ ವಿಸ್ತೃತ ತರಗತಿ ಕಟ್ಟಡದ ಉದ್ಘಾಟನೆಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಪದವಿ ಗಳಿಕೆಯ ಬಳಿಕವೂ ಉನ್ನತ ಶಿಕ್ಷಣಕ್ಕೆ ಬಹಳಷ್ಟು ಒಳ್ಳೆಯ ಅವಕಾಶಗಳಿದ್ದು, ಇದರ ಉಪಯೋಗ ಪಡೆಯುವುದರ ಜೊತೆಗೆ ಶ್ರಮ, ಪ್ರಾಮಾಣಿಕತೆ ಮತ್ತು ಒಳ್ಳೆಯ ಚಿಂತನೆಯ ಮೂಲಕ ಬದುಕಿನ ಹಾದಿ ಹಿಡಿದರೆ ಜೀವನದಲ್ಲಿ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.ಅವರು ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ದಿನಾಚರಣೆ ಹಾಗೂ ಕಾಲೇಜು ವಾರ್ಷಿಕೋತ್ಸವ ಮತ್ತು ೧ ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡಿರುವ ವಿಸ್ತೃತ ತರಗತಿ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗಾಗಿಯೇ ಯುವನಿಧಿ ಯೋಜನೆಯನ್ನು ಜಾರಿಗೊಳಿಸಿದ್ದು, ಇದರ ಉಪಯೋಗ ಪಡಿಸಿಕೊಳ್ಳುವುದರ ಜೊತೆಗೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಐಎಎಸ್, ಕೆಎಎಸ್ ಮಾಡಬಹುದು ಎಂದ ಅವರು ವಿದ್ಯಾರ್ಥಿಗಳು ತಮ್ಮ ಇಚ್ಛಾಸಕ್ತಿಗೆ ಅನುಗುಣವಾಗಿ ಮುಂದೆ ಬರಬೇಕು ಎಂದರು.ನಿವೃತ್ತ ಪ್ರಾಧ್ಯಾಪಕ, ಬರಹಗಾರ ಪ್ರೊ. ನರೇಂದ್ರ ರೈ ದೇರ್ಲ ಮಾತನಾಡಿ, ಸರ್ಕಾರಿ ಕಾಲೇಜಿನಲ್ಲಿ ಬಡವರ, ಕೂಲಿ ಕಾರ್ಮಿಕರ, ರೈತರ ಮಕ್ಕಳು ಅಧಿಕವಿದ್ದು, ಕಲಿಕೆಗಾಗಿ ಕಷ್ಟಗಳನ್ನು ಅನುಭವಿಸಿಕೊಂಡವರಾಗಿದ್ದಾರೆ. ಅವರು ಮಾನವೀಯತೆ, ದೇಶ ಪ್ರೇಮ, ಮನುಷ್ಯ ಪ್ರೇಮವನ್ನು ಇನ್ನೂ ಜೀವಂತವಿರಿಸಿಕೊಂಡು ಇಲ್ಲಿನ ನೆಲ, ಜಲ, ಜನಪದದ, ಸಮುದಾಯದ ಪ್ರತಿನಿಧಿಯಾಗಬೇಕು ಎಂದರು.ಬೆಟ್ಟಂಪಾಡಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ, ಕಾಲೇಜಿನ ಪ್ರಾಂಶುಪಾಲ ರವಿರಾಜ್ ಎಸ್., ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಹಾಶ ಶೆಟ್ಟಿ, ಸದಸ್ಯ ಎ. ಕೃಷ್ಣ ರಾವ್ ಅರ್ತಿಲ ಮಾತನಾಡಿದರು.ಸಮಿತಿ ಸದಸ್ಯರಾದ ಇಸ್ಮಾಯಿಲ್ ಇಕ್ಬಾಲ್, ವಿನ್ಸೆಂಟ್ ಫರ್ನಾಂಡಿಸ್, ಮಹಾಬಲೇಶ್ವರ ಭಟ್, ಸವಿತಾ ಹರೀಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕ ಡಾ. ಹರಿಪ್ರಸಾದ್ ಸ್ವಾಗತಿಸಿದರು. ಡಾ. ಸಂತೋಷ್ ವಂದಿಸಿದರು. ಪ್ರಮೋದ್ ನಿರೂಪಿಸಿದರು.ಸನ್ಮಾನ, ಅಭಿನಂದನೆ:
ಕಾಲೇಜಿಗೆ ಸುಮಾರು ೪೦ ಸಾವಿರ ರುಪಾಯಿ ವೆಚ್ಚದ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿದ ವಿನ್ಸೆಂಟ್ ಫರ್ನಾಂಡಿಸ್ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.