ಉಪ್ಪಿನಂಗಡಿ: ಭಕ್ತಿ ರಥಯಾತ್ರೆಗೆ ಸ್ವಾಗತ

| Published : Apr 04 2025, 12:48 AM IST

ಸಾರಾಂಶ

ನಿಷ್ಕಲ್ಮಶ ಭಾವದೊಂದಿಗೆ ಭಗವಂತನೊಂದಿಗೆ ನಂಬಿಕೆ ಇರಿಸಿದಾಗ ದೇವನೊಲುಮೆ ಅನುಭವಿಸಲು ಸಾಧ್ಯ. ಇದನ್ನು ಸಾದರಪಡಿಸುವ ಭಕ್ತಿ ರಥ ಯಾತ್ರೆಯು ಸಮಾಜಕ್ಕೆ ಸತ್ಪ್ರೇರಣೆ ನೀಡಲಿದೆ ಎಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ ರಾಧಾಕೃಷ್ಣ ನಾಯ್ಕ್‌ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಭಗವಂತನೊಂದಿಗೆ ಭಕ್ತರ ಸಂಬಂಧ ವೃದ್ಧಿಸುವ ನಿಟ್ಟಿನಲ್ಲಿ ನಿಷ್ಕಲ್ಮಶ ಭಾವದೊಂದಿಗೆ ಭಗವಂತನೊಂದಿಗೆ ನಂಬಿಕೆ ಇರಿಸಿದಾಗ ದೇವನೊಲುಮೆ ಅನುಭವಿಸಲು ಸಾಧ್ಯ. ಇದನ್ನು ಸಾದರಪಡಿಸುವ ಭಕ್ತಿ ರಥ ಯಾತ್ರೆಯು ಸಮಾಜಕ್ಕೆ ಸತ್ಪ್ರೇರಣೆ ನೀಡಲಿದೆ ಎಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ ರಾಧಾಕೃಷ್ಣ ನಾಯ್ಕ್‌ ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ರಾತ್ರಿ ಉಪ್ಪಿನಂಗಡಿಗೆ ಆಗಮಿಸಿದ ಭಕ್ತಿ ರಥ ಯಾತ್ರೆಯ ರಥವನ್ನು ಶ್ರೀ ದೇವಾಲಯದ ವಠಾರದಲ್ಲಿ ಸ್ವಾಗತಿಸಿ ಅವರು ಮಾತನಾಡಿದರು.

ಯಾತ್ರೆಯ ಸಂಚಾಲನಾ ಸಮಿತಿಯ ಸದಸ್ಯ ವಿ ಶಶಾಂಕ್ ಭಟ್ ಮಾತನಾಡಿ, ಸಂದೇಹ ತೊರೆದು ಸಂಪ್ರೀತಿಯಿಂದ ಭಗವಂತನ ನೆನೆದರೆ ಭಗವಂತನ ಒಲುಮೆ ಗಳಿಸಲು ಸಾಧ್ಯ. ಜಾತಿ ಮತ ಪಂಥಗಳ ಗಡಿ ಮೀರಿ, ಸಮಯ ಸಂದರ್ಭ ಪರಿಗಣಿಸದೆ ಶ್ರದ್ದೆ ಮತ್ತು ಭಕ್ತಿಯಿಂದ ಶ್ರೀ ರಾಮತಾರಕ ಮಂತ್ರವನ್ನು ಜಪಿಸಿದರೆ ಸತ್ಪಲವು ನಿಶ್ಚಿತವಾಗಿಯೂ ದೊರೆಯುತ್ತದೆ. ಹಿಂದೂ ಸಮಾಜವನ್ನು ಜಾತಿಯ ನೆಲೆಯಲ್ಲಿ ಒಡೆಯಲು ಹಲವಾರು ಶಕ್ತಿಗಳು ಶ್ರಮಿಸುತ್ತಿರುವಾಗ, ನಾವೆಲ್ಲರೂ ಶ್ರೀ ರಾಮತಾರಕ ಮಂತ್ರವನ್ನು ಜಪಿಸಿ ಸಂಘಟಿತರಾಗಿ ರಾಷ್ಟ್ರದ ಪರಮ ವೈಭವಕ್ಕೆ ಸಾಕ್ಷಿಗಳಾಗೋಣ ಎಂದರು.

ರಥಯಾತ್ರೆಯನ್ನು ಭಜನಾ ಕಾರ್ಯಕ್ರಮದ ಮೂಲಕ ಸ್ವಾಗತಿಸಲಾಯಿತು. ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಡಾ. ರಮ್ಯ ರಾಜಾರಾಮ್, ದೇವಿದಾಸ್ ರೈ, ವೆಂಕಪ್ಪ ಪೂಜಾರಿ, ಹರೀಶ್ ಉಪಾಧ್ಯಾಯ , ಪ್ರಮುಖರಾದ ನವೀನ್ ನೆರಿಯ, ಮೂಲಚಂದ್ರ ಕಾಂಚನ, ಸುದರ್ಶನ್, ರಾಜಶೇಖರ್ ರೈ, ವೆಂಕಟೇಶ್ ರಾವ್, ಹೇರಂಭ ಶಾಸ್ತ್ರಿ, ಗಂಗಾಧರ ಟೈಲರ್, ಕಂಗ್ವೆ ವಿಶ್ವನಾಥ ಶೆಟ್ಟಿ, ಶ್ರೀನಿಧಿ ಉಪಾಧ್ಯಾಯ, ಶ್ರೀವತ್ಸ ಉಪಾಧ್ಯಾಯ, ಶ್ರೀಪತಿ ತಂತ್ರಿ, ಜಯಂತ ಪೊರೋಳಿ, ವರ್ಣೇಶ್ ಗಾಣಿಗ, ಗುಣಕರ ಅಗ್ನಾಡಿ, ಚಂದ್ರಶೇಖರ್ ಮಡಿವಾಳ, ಕೃಷ್ಣ ಪ್ರಸಾದ್ ಮೊದಲಾದವರು ಭಾಗವಹಿಸಿದ್ದರು.