ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸುವಂತೆ ಒತ್ತಾಯ

| Published : Jan 14 2025, 01:04 AM IST

ಸಾರಾಂಶ

ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ಶಿಕ್ಷಣವನ್ನು ಆರಂಭಿಸುವಂತೆ ಒತ್ತಾಯಿಸಿ ಹಾನಗಲ್ಲನಲ್ಲಿ ನಡೆದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಮಾವೇಶದಲ್ಲಿ ಒತ್ತಾಯಿಸಲಾಯಿತು.

ಹಾನಗಲ್ಲ: ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ಶಿಕ್ಷಣವನ್ನು ಆರಂಭಿಸುವಂತೆ ಒತ್ತಾಯಿಸಿ ಹಾನಗಲ್ಲನಲ್ಲಿ ನಡೆದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಮಾವೇಶದಲ್ಲಿ ಒತ್ತಾಯಿಸಲಾಯಿತು. ಪಟ್ಟಣದ ಗುರುಭವನದಲ್ಲಿ ನಡೆದ ತಾಲೂಕು ಮಟ್ಟದ ಅಂಗನವಾಡಿ ಕಾಯಕರ್ತೆಯರು ಮತ್ತು ಸಹಾಯಕಿಯರ ಸಮಾವೇಶದಲ್ಲಿ ಈ ಒತ್ತಾಯ ಮಂಡಿಸಿದ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಅದಕ್ಕೆ ತಕ್ಕಂತೆ ಸೌಲಭ್ಯಗಳನ್ನು ಸಹ ಒದಗಿಸಬೇಕು. ಅಂಗವಾಡಿ ಕಾರ್ಯಕರ್ತೆಯರೇ ಇಲ್ಲಿ ಶಿಕ್ಷಕರಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ಮಂಡಿಸಿದರು.ಸಮಾವೇಶವನ್ನು ಉದ್ಘಾಟಿಸಿದ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಂದಾ ಮಾತನಾಡಿ, ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರ ಸ್ಥಿತಿ ಚಿಂತಾಜಕನವಾಗಿದೆ. ಅವರಿಗೆ ಕನಿಷ್ಠ 10 ಸಾವಿರ ರು. ಮಾಸಿಕ ಸಂಭಾವನೆ ನೀಡಬೇಕು ಎಂದು ಆಗ್ರಹಿಸಿ, ಅಂಗವಾಡಿ ಯೋಜನೆ ಆರಂಭಗೊಂಡು ಇಂದಿಗೆ 50 ವರ್ಷ ಸಂದಿವೆ. ಆದರೆ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆ ಗುರುತಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿರ್ಲಕ್ಷ್ಯ ತೋರಿವೆ ಎಂದು ಆಪಾದಿಸಿದರು.ಗುಜರಾತ ಹೈಕೋರ್ಟ್ ತೀರ್ಪು ಎತ್ತಿ ಹಿಡಿದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು 3 ಮತ್ತು 4 ನೇ ದರ್ಜೆ ನೌಕರರನ್ನಾಗಿ ಕಾಯಂಗೊಳಿಸಬೇಕು. ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿದಂತೆ ವೇತನ ಹೆಚ್ಚಳವಾಗಿಲ್ಲ. ಎಲ್ಲ ಬೇಡಿಕೆ ಈಡೇರಿಕೆಗೆ ಮಾರ್ಚ್ 10ರಂದು ಬೆಂಗಳೂರ ವಿಧಾನಸೌಧ ಚಲೋ ಚಳವಳಿ ಆಯೋಜಿಸುತ್ತೇವೆ ಎಂದರು.ತಾಲೂಕು ಅಧ್ಯಕ್ಷೆ ರಾಜೇಶ್ವರಿ ಹಿರೇಮಠ ಮಾತನಾಡಿ, ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಒಗ್ಗಟ್ಟು ಪ್ರದರ್ಶಿಸುವ ಮೂಲಕ ನಮ್ಮ ಬೇಡಿಕೆಗಳ ಹಕ್ಕೋತ್ತಾಯ ಮಾಡಬೇಕು ಎಂದರು.ಕಾರ್ಯದರ್ಶಿ ಸಿದ್ಧಮ್ಮ ಚೌಟಿ, ಕೋಶಾಧ್ಯಕ್ಷೆ ಸುನಿತಾ ದೊಡ್ಡಮನಿ, ಬ್ಯಾಡಗಿ ತಾಲೂಕು ಅಧ್ಯಕ್ಷೆ ಗೌರಮ್ಮ ನಾಯ್ಕರ, ಕಾರ್ಯದರ್ಶಿ ಹೇಮಾ ಎಲಿ, ಕೋಶಾಧ್ಯಕ್ಷೆ ಗೋಜಾ ನಾಯಕ್ ಇದ್ದರು.