ಬಳ್ಳಾರಿ: ಸಿರುಗುಪ್ಪ ತಾಲೂಕಿನ ಸಿರಿಗೇರಿ ಕ್ರಾಸ್ನಲ್ಲಿ ಜೈವಿಕ ಸಂಪನ್ಮೂಲ ಕೇಂದ್ರ ಉದ್ಘಾಟನೆ ಸಮಾರಂಭ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪಕೃಷಿ ನಿರ್ದೇಶಕ ಮಂಜುನಾಥ ರೆಡ್ಡಿ, ಯೂರಿಯಾ ಬಳಕೆ ಹೆಚ್ಚಳ, ಕೇಂದ್ರ ಸರ್ಕಾರದಿಂದ ಯೂರಿಯಾ ಗೊಬ್ಬರ ಪೂರೈಕೆಗೆ ನೀಡುತ್ತಿರುವ ಅಪಾರ ಪ್ರಮಾಣದ ಸಬ್ಸಿಡಿ, ಯುದ್ಧದ ಕಾರಣದಿಂದಾಗಿ ವಿದೇಶದಿಂದ ಯೂರಿಯಾ ಆಮದು ಮಾಡಿಕೊಳ್ಳಲು ಆಗುತ್ತಿರುವ ಸಮಸ್ಯೆ ಕುರಿತು ವಿವರಿಸಿದರು.ಸಾವಯವ ಕೃಷಿಕರನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜೈವಿಕ ಸಂಪನ್ಮೂಲ ಕೇಂದ್ರ ಆರಂಭಿಸಿದೆ. ಈ ಕೇಂದ್ರದಲ್ಲಿ ಸಿಗುವ ಜೈವಿಕ ಗೊಬ್ಬರ ಬಳಕೆ ಮಾಡಿ ಸಾವಯವ ಕೃಷಿಯಲ್ಲಿ ಪ್ರಗತಿ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ರೆಡ್ಡಿ ಸಾವಯವ ಕೃಷಿಯ ಮಹತ್ವ, ರೈತರು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುವುದರಿಂದಾಗುವ ಪ್ರಯೋಜನೆಗಳು ಹಾಗೂ ಕೃಷಿ ಉತ್ಪನ್ನಗಳಲ್ಲಿ ಸಾವಯವ ಬಳಕೆ ಕುರಿತು ಮಾಹಿತಿ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಸಾವಯವ ಕೃಷಿಕ ಈರಪ್ಪಯ್ಯ ಮಾತನಾಡಿ, ಯೂರಿಯಾ ಸೇರಿದಂತೆ ರಾಸಾಯನಿಕ ಗೊಬ್ಬರವನ್ನು ಅತಿ ಹೆಚ್ಚು ಬಳಕೆ ಮಾಡುವುದರಿಂದ ಭೂಮಿಯ ಫಲವತ್ತತೆ ಸಂಪೂರ್ಣ ಹಾಳಾಗುವುದಿಲ್ಲ. ರಾಸಾಯನಿಕ ಬಳಕೆಯ ಉತ್ಪನ್ನಗಳ ಬಳಕೆಯಿಂದ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಕೇಂದ್ರ ಸರ್ಕಾರ ರೈತರು ಯೂರಿಯಾ ಮೇಲಿನ ಅವಲಂಬನೆ ತಪ್ಪಿಸಬೇಕು. ಜೈವಿಕ ಕೃಷಿಯತ್ತ ವಾಲಬೇಕು ಎಂಬ ಉದ್ದೇಶದಿಂದ ಜೈವಿಕ ಸಂಪನ್ಮೂಲ ಕೇಂದ್ರಗಳನ್ನು ತೆರೆಯಲು ಮುಂದಾಗಿದೆ. ಈ ಕೇಂದ್ರದಲ್ಲಿ ಸಾವಯವ ಕೃಷಿಕರಿಗೆ ಬೇಕಾಗುವ ಫಲವತ್ತಾದ ಗೊಬ್ಬರವನ್ನು ಪೂರೈಕೆ ಮಾಡಲಾಗುವುದು. ಇದರ ಪ್ರಯೋಜನೆಯನ್ನು ಎಲ್ಲ ರೈತರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿ ಬಸವರಾಜ ಶಾಸ್ತ್ರಿ ಮಾತನಾಡಿ, ಸಾವಯವ ಕೃಷಿಕ ಈರಪ್ಪಯ್ಯನವರು 26 ವರ್ಷಗಳಿಂದ ವಿಷಮುಕ್ತ ಆಹಾರ ಬೆಳೆಯುತ್ತಿದ್ದಾರೆ. ಇವರು ಬೆಳೆಯುತ್ತಿರುವ ಅಕ್ಕಿಗೆ ವಿದೇಶದಲ್ಲೂ ದೊಡ್ಡ ಬೇಡಿಕೆಯಿದೆ. ಆದರೆ, ಬೇಡಿಕೆಯಷ್ಟು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಸಂಖ್ಯೆಯ ರೈತರು ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡು ಆರ್ಥಿಕ ಪ್ರಗತಿ ಕಂಡುಕೊಳ್ಳಬೇಕು ಎಂದು ತಿಳಿಸಿದರು. ಕೃಷಿ ಪದವೀಧರ ರುದ್ರೇಶ್ ಸಾವಯವ ಬೆಳೆಗಳ ಕುರಿತು ಉಪನ್ಯಾಸ ನೀಡಿದರು.
ಕೃಷಿ ಅಧಿಕಾರಿಗಳಾದ ಕರೂರು ಪರಮೇಶ್ವರ ರೆಡ್ಡಿ, ಹರೀಶ ನಾಯಕ ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜೈವಿಕ ಸಂಪನ್ಮೂಲ ಕೇಂದ್ರದ ಮುಖ್ಯಸ್ಥ ಹಾಗೂ ಯುವ ಕೃಷಿಕ ಬಿ.ಎಂ. ನಂದೀಶ್ ಕಾರ್ಯಕ್ರಮ ನಿರ್ವಹಿಸಿದರು.
25ಬಿಆರ್ವೈ2ಸಿರುಗುಪ್ಪ ತಾಲೂಕಿನ ಸಿರಿಗೇರಿ ಕ್ರಾಸ್ನಲ್ಲಿ ಕೇಂದ್ರ ಜೈವಿಕ ಸಂಪನ್ಮೂಲ ಕೇಂದ್ರವನ್ನು ಕೃಷಿ ಅಧಿಕಾರಿಗಳು ಉದ್ಘಾಟಿಸಿದರು.