ಸಾರಾಂಶ
ಬಾಲ್ಡ್ವಿನ್ ಬಾಲಕಿಯರ ಶಾಲೆಯಲ್ಲಿ 10ನೇ ತರಗತಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮೊಬೈಲ್ ಫೋನ್ ಉಪಯುಕ್ತ ಸಾಧನವಾಗಿದೆ. ಆದರೆ ಒಳಿತು-ಕೆಡಕು ಆಯ್ಕೆ ಮಾಡಿಕೊಳ್ಳುವುದು ನಮ್ಮ ಜವಾಬ್ದಾರಿ. ಆದ್ದರಿಂದ ವಿದ್ಯಾರ್ಥಿಗಳು ಜವಾಬ್ದಾರಿಯುತವಾಗಿ ಮೊಬೈಲ್ ಬಳಸುವುದನ್ನು ತಿಳಿದಿರಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.ಬಾಲ್ಡ್ವಿನ್ ಬಾಲಕಿಯರ ಶಾಲೆಯಲ್ಲಿ 10ನೇ ತರಗತಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದು ಶಾಲಾ ಶಿಕ್ಷಣವು ಹೈಟೆಕ್ ಆಗಿ ಮಾರ್ಪಟ್ಟಿದೆ. ಅನೇಕರು ಮೊಬೈಲ್ಗೆ ವ್ಯಸನಿಗಳಾಗಿದ್ದಾರೆ. ಮೊಬೈಲ್ ಸಂಪೂರ್ಣವಾಗಿ ತ್ಯಜಿಸಿ ಎಂದು ಹೇಳುವುದಿಲ್ಲ. ಮೊಬೈಲ್ ದುಷ್ಪರಿಣಾಮಗಳ ಬಗ್ಗೆ ನಾವು ಪ್ರತಿದಿನ ಓದುತ್ತೇವೆ. ಆದ್ದರಿಂದ ಅಗತ್ಯ ಕೆಲಸಕ್ಕೆ ಮಾತ್ರ ಬಳಸಿ ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಪೋಷಕರ ಕನಸುಗಳನ್ನು ಈಡೇರಿಸುವುದು ಕರ್ತವ್ಯ. ನೀವು ಯಾವ ವೃತ್ತಿಯನ್ನು ಆರಿಸಿಕೊಂಡರೂ ಮೊದಲು ಉತ್ತಮ ಮನುಷ್ಯನಾಗಲು ಶ್ರಮಿಸಿ. ಸಮಾಜಕ್ಕೆ ಧನಾತ್ಮಕವಾಗಿ ಕೊಡುಗೆ ನೀಡಿ. ನಾನು ಐಟಿಐ ಮಾಡಬೇಕೆಂದು ತಂದೆ ಬಯಸಿದ್ದರು. ಆದರೆ ನನಗೆ ಬರವಣಿಗೆಯ ಉತ್ಸಾಹವಿದ್ದರಿಂದ ಪತ್ರಿಕೋದ್ಯಮವನ್ನು ಆರಿಸಿಕೊಂಡೆ. ಎಪಿಜೆ ಅಬ್ದುಲ್ ಕಲಾಂ ಅವರಂತೆ ನಾನು ಮನೆ-ಮನೆಗೆ ಪತ್ರಿಕೆ ಹಂಚಿದ್ದೇನೆ ಎಂದು ಸ್ಮರಿಸಿದರು.ಪ್ರಾಂಶುಪಾಲೆ ಆಶಾ ಮಾರ್ಗರೇಟ್, ವ್ಯವಸ್ಥಾಪಕಿ ಫೆಬೆ ಶೀಲಾ ರಾಣಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಸತಿ ಸಚಿವರ ಮಾಧ್ಯಮ ಸಲಹೆಗಾರ ಲಕ್ಷ್ಮೀನಾರಾಯಣ, ಸಂಸ್ಥೆಯ ಅಧ್ಯಕ್ಷ ಕಮಲ್ ಕರ್ಕರೆ, ಬಾಲ್ಡ್ವಿನ್ ಸಂಸ್ಥೆಗಳ ಕಾರ್ಯದರ್ಶಿ ಡಾ। ಜೋಶುವಾ ಸ್ಯಾಮ್ಯುಯೆಲ್, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಅನಿತಾ ಐಸಾಕ್, ಉಪ ಪ್ರಾಂಶುಪಾಲೆ ಸುಜಾತಾ ಕ್ಯಾಥರೀನ್, ಮಹಿಳಾ ಉದ್ಯಮಿ ದಿವ್ಯಾ ರಂಗೇನಹಳ್ಳಿ ಇದ್ದರು.