ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲೆಯಲ್ಲಿ ಡಿಎಪಿ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ ಉಂಟಾದಲ್ಲಿ ರೈತರು ಆತಂಕ ಪಡುವ ಅಗತ್ಯವಿಲ್ಲ. ಡಿಎಪಿ ಗೊಬ್ಬರಕ್ಕೆ ಬದಲಾಗಿ ನ್ಯಾನೋ ಡಿಎಪಿ ಹಾಗೂ ಕಾಂಪ್ಲೆಕ್ಸ್ ಗೊಬ್ಬರಗಳನ್ನು ಬಳಸುವಂತೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮನವಿ ಮಾಡಿದರು.ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ 2025-26ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ನಂತರ ಮಾತನಾಡಿದರು.ಡಿಎಪಿ ಉತ್ಪಾದನೆ ಕುಸಿತ
ಈ ವರ್ಷ ಡಿಎಪಿ ರಸಗೊಬ್ಬರದ ಉತ್ಪಾದನೆಯು ಕಡಿಮೆ ಆಗಿರುವುದರಿಂದ ಸರಬರಾಜಿನಲ್ಲಿಯೂ ವ್ಯತ್ಯಯ ಆದಲ್ಲಿ ಕೃಷಿಕರು ಆತಂಕ ಪಡುವ ಅಗತ್ಯವಿಲ್ಲ. ಡಿ.ಎ.ಪಿ ರಸಗೊಬ್ಬರಕ್ಕೆ ಬದಲಾಗಿ ನ್ಯಾನೋ ಡಿಎಪಿ ಬಾಟಲ್ ಖರೀದಿಸಿ ಬೆಳೆಗಳಿಗೆ ಸಿಂಪಡಣೆ ಮಾಡುವ ಮೂಲಕ ಬೆಳೆ ಬೆಳೆಯಬಹುದು. ಒಂದು ಚೀಲ ಡಿಎಪಿಗೆ ಸುಮಾರು 1500 ರು.ಗಳವರೆಗೆ ದರ ನಿಗದಿ ಇದೆ. ಈ ರಸಗೊಬ್ಬರಕ್ಕೆ ಪರ್ಯಾಯವಾಗಿ 1 ಲೀಟರ್ ನ್ಯಾನೋ ಡಿ.ಎ.ಪಿ ಬಳಸಬಹುದು. ಒಂದು ಲೀಟರ್ ನ್ಯಾನೋ ಡಿ.ಎ.ಪಿ ಕೇವಲ 600 ರೂ.ಗಳಿಗೆ ಮಾರುಕಟ್ಟೆಯಲ್ಲಿ ದೊರೆಯುತ್ತದೆ ಎಂದರು.ಇದರ ಸದುಪಯೋಗವನ್ನು ರೈತರು ಪಡೆಯಬೇಕು. ಕೆಲವು ಕೃಷಿ ಬೆಳೆಗಳನ್ನು ಬೆಳೆಯಲು ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೋ ಡಿಎಪಿ ಬಳಸಿದಂತೆ ಯೂರಿಯಾ ರಸಗೊಬ್ಬರಕ್ಕೂ ಸಹ ಬದಲಿಯಾಗಿ ನ್ಯಾನೋ ಯೂರಿಯಾ ಗೊಬ್ಬರವನ್ನು ಸಹ ರೈತರು ಬಳಸಬಹುದು. ಮಾರುಕಟ್ಟೆಯಲ್ಲಿ ಡಿಎಪಿ ಮತ್ತು ಯೂರಿಯಾ ರಸಗೊಬ್ಬರ ಲಭ್ಯತೆಯ ಅನುಸಾರ ರಸಗೊಬ್ಬರ ಮಾರಾಟಗಾರರು ಹಾಗೂ ಸೊಸೈಟಿಯವರು ಖರೀದಿಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದರು.
ಮಾರುಕಟ್ಟೆಯಲ್ಲಿ ಲಭಿಸಿದಷ್ಟನ್ನು ಖರೀದಿಸಲು ಕಂಪನಿಗಳಲ್ಲಿ ಮುಂಗಡವಾಗಿ ಹಣವನ್ನು ನೀಡಿ ಬೇಡಿಕೆಗೆ ತಕ್ಕಂತೆ ರಸಗೊಬ್ಬರಗಳನ್ನು ಪೂರೈಸಲು ಬೇಡಿಕೆ ಇಡಬೇಕು, ಅದರ ಬದಲಾಗಿ ಜಿಲ್ಲಾಡಳಿತ ಇಟ್ಟಿರುವ ಕಾಪು (ಬಫರ್ ಸ್ಟಾಕ್) ದಾಸ್ತಾನಿನ ಮೇಲೆ ಯಾವುದೇ ಮಾರಾಟಗಾರರು ಅವಲಂಬನೆಯಾಗಬಾರದು. ಕಾಪು (ಬಫರ್ ಸ್ಟಾಕ್) ದಾಸ್ತಾನಿನಲ್ಲಿ ಲಭ್ಯವಿರುವ ರಸಗೊಬ್ಬರವನ್ನು ನಿಯಮಾವಳಿ ರೀತ್ಯಾ ತುರ್ತು ಸಂದರ್ಭಗಳಲ್ಲಿ ರೈತರಿಗೆ ಪೂರೈಸಲು ನೆರವಾಗುವಂತೆ ಕ್ರಮವಹಿಸಲಾಗುವುದು ಎಂದರು.ದರ ಪಟ್ಟಿ ಪ್ರಕಟಿಸಲು ಸೂಚನೆರಸಗೊಬ್ಬರ ಹಾಗೂ ಬಿತ್ತನೆ ಬೀಜ ಮಾರಾಟ ಮಾಡುವ ಮಳಿಗೆಗಳ ಮುಂದೆ ಕಡ್ಡಾಯವಾಗಿ ದರಪಟ್ಟಿಯನ್ನು ಪ್ರಕಟಿಸಬೇಕು, ರೈತರು ಖರೀದಿಸಿದ್ದಕ್ಕೆ ರಸೀದಿಗಳನ್ನು ಕಡ್ಡಾಯವಾಗಿ ವಿತರಿಸುವ ವ್ಯವಸ್ಥೆ ಆಗಬೇಕು. ಈ ನಿಯಮವನ್ನು ಉಲ್ಲಂಘಿಸುವ ಮಳಿಗೆಗಳ ಮೇಲೆ ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಜಿಲ್ಲೆಯಲ್ಲಿ ಕಳಪೆ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಮಾರಾಟ ಮಾಡಲು ಅವಕಾಶ ಮಾಡಿಕೊಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಜಿಪಂ ಸಿಇಒ ಡಾ. ವೈ ನವೀನ್ ಭಟ್, ಜಂಟಿ ಕೃಷಿ ನಿರ್ದೇಶಕಿ ಜಾವೀದಾ ನಸೀಮಾ ಖಾನಂ, ತೋಟಗಾರಿಕೆ ಉಪ ನಿರ್ದೇಶಕಿ ಗಾಯತ್ರಿ, ರೇಷ್ಮೆ ಇಲಾಖೆಯ ಉಪನಿರ್ದೇಶಕ ಮಾರಪ್ಪ ಬೀರಲದಿನ್ನಿ, ಸಹಾಯಕ ಕೃಷಿ ನಿರ್ದೇಶಕ ಮುನಿರಾಜ, ವಿಜ್ಞಾನಿ ಕೆ ವಿ ಕೆ ವಿಶ್ವನಾಥ್, ರಸಗೊಬ್ಬರ ಉತ್ಪಾದಕ ಕಂಪನಿಗಳ ಪ್ರತಿನಿಧಿಗಳು, ರಸಗೊಬ್ಬರ ಹಾಗೂ ಬಿತ್ತನೆ ಬೀಜ ಮಾರಾಟ ಮಾಡುವ ಮಳಿಗೆಗಳ ಮುಖ್ಯಸ್ಥರು, ಮಾರಾಟಗಾರರು, ವ್ಯಾಪಾರಿಗಳು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.