ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಸುದ್ದಿಗಳೇ ಮನರಂಜನೆ ಆಗುತ್ತಿರುವ ಸಂದರ್ಭದಲ್ಲಿ ನ್ಯೂಸ್ ನೋಡುವವರ ಸಂಖ್ಯೆಯೇ ಗಣನಿಯವಾಗಿ ಇಳಿಕೆಯಾಗುತ್ತಿದೆ. ಯುವಜನತೆ ವಿದ್ಯಾರ್ಥಿ ದೆಸೆಯಲ್ಲೇ ತಮ್ಮ ಸಾಮಾಜಿಕ ಮಾಧ್ಯಮವನ್ನು ಅಭಿವ್ಯಕ್ತಿ ಮಾಧ್ಯಮವಾಗಿ ಮಾಡಿಕೊಳ್ಳುವುದನ್ನು ರೂಢಿಮಾಡಿಕೊಳ್ಳಬೇಕು ಎಂದು ಪತ್ರಕರ್ತ ಡಾ. ಎಚ್.ವಿ. ವಾಸು ಅಭಿಪ್ರಾಯಪಟ್ಟರು. ನಗರದ ಎಸ್ ಎಸ್ಎಸ್ಐಟಿ ಕ್ಯಾಂಪಸ್ ಆವರಣದಲ್ಲಿ ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ಈದಿನ ಡಾಟ್ ಕಾಮ್ ಹಾಗೂ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು (ಪತ್ರಿಕೋದ್ಯಮ ವಿಭಾಗ) ಇವರ ಸಹಯೋಗದಲ್ಲಿ ಎರಡನೇ ದಿನವಾದ ಶುಕ್ರವಾರ ನಡೆದ ಡಿಜಿಟಲ್ ಮಾಧ್ಯಮ ಸವಾಲು ಮತ್ತು ಸಾಧ್ಯತೆಗಳು ಕುರಿತು ಕಾರ್ಯಾಗಾರದಲ್ಲಿ ಹೊಸ ಮಾಧ್ಯಮ-ಅದರಲ್ಲಿ ಹೊಸದೇನಿದೆ ವಿಷಯ ಮಂಡಿಸಿದರು. ಸಾಮಾಜಿಕ ಸಂಪರ್ಕವನ್ನು ಗಟ್ಟಿಗೊಳಿಸಲು ಸಾಮಾಜಿಕ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಸಾಮಾಜಿಕ ಜಾಲತಾಣದಿಂದ ಸಾಮಾಜಿಕ ಸಂಪರ್ಕ ಬೆಳೆಯುವುದಿಲ್ಲ ಎಂದರು.ಡಿಜಿಟಲ್ ಮಾಧ್ಯಮದಲ್ಲಿ ಕಂಟೆಟ್ ಕ್ರಿಯೆಟ್ ಮಾಡಲು ಮುಕ್ತ ಅವಕಾಶವಿರುವುದರಿಂದ ಸಾಮಾನ್ಯ ಜನರಲ್ಲಿಯೂ ಸೃಜನಶೀಲತೆ ಹೆಚ್ಚಾಗಿದೆ. ಡಿಜಿಟಲ್ ಮಾಧ್ಯಮದ ಸಾರ್ವತ್ರಿಕ ಶೇರ್ ಬಟನ್ನಿಂದ ಗ್ರಾಹಕರೇ ವಿತರಕರಾಗಿದ್ದಾರೆ. ಲೋಕಲ್ ಮತ್ತು ಹೈಪರ್ ಲೋಕಲ್ ಕಂಟೆಟ್ ಕ್ರಿಯೆಟ್ ಮಾಡಲು ಡಿಜಿಜಿಟಲ್ ಮಾಧ್ಯಮದಲ್ಲಿ ಹೆಚ್ಚು ಅವಕಾಶಗಳಿವೆ. ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಸಾಮಾನ್ಯ ಜನರ ಜೊತೆ ಸಂಪರ್ಕ ಗಟ್ಟಿಗೊಳಿಸಿಕೊಳ್ಳಬೇಕು. ಸ್ಕ್ರೀನ್ ಜೊತೆ ಕನೇಕ್ಟ್ ಆಗಿರುವುದರಿಂದ ಜನರ ನಡುವಿನ ಒಡನಾಟವನ್ನೇ ಕಡಿದುಕೊಂಡು, ಸ್ಕ್ರೀನ್ ಗೆ ಕನೇಕ್ಟ್ ಆಗಿದ್ದಾರೆ. ಇದು ಸಮಾಜದ ಆರೋಗ್ಯದ ದೃಷ್ಠಿಯಿಂದ ಒಳ್ಳೆಯ ಬೆಳವಣಿಗೆಯಲ್ಲ ಎಂದು ಡಾ. ಎಚ್.ವಿ. ವಾಸು ಹೇಳಿದರು.ಸಾಮಾಜಿಕ ಜಾಲತಾಣಗಳ ಮಾಲೀಕರು ಆಳುವ ಸರ್ಕಾರಗಳ ಭಾಗವಾದರೆ ಅಥವಾ ಅವರ ಪರವಾಗಿದ್ದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಈದಿನ ಡಾಟ್ ಕಾಮ್ ರಿಸರ್ಚ್ ಟೀಮ್ ಮುಖ್ಯಸ್ಥ ಭರತ್ ಹೆಬ್ಬಾಳ್ ಅವರು ‘ಸಾಮಾಜಿಕ ಬದಲಾವಣೆಯಲ್ಲಿ ಸಮೀಕ್ಷೆ ಅಧ್ಯಯನದ ಪಾತ್ರ’ ವಿಷಯ ಕುರಿತು ಮಾತನಾಡಿ, ಒಬ್ಬರ ಅಭಿಪ್ರಾಯ ಇಡೀ ಸಮಾಜದ ಅಭಿಪ್ರಾಯ ಎಂದು ಕೃತಕ ಜನಾಭಿಪ್ರಾಯ ರೂಪಿಸುವ ಮೂಲಕ ಜನರ ನಿಜ ಅಭಿಪ್ರಾಯವನ್ನು ಗೌಣವಾಗಿಸಲಾಗುತ್ತಿದೆ. ಜನರ ನೈಜ ಅಭಿಪ್ರಾಯ ತಿಳಿಯ ಬೇಕಾದರೇ ಸಮೀಕ್ಷೆ ಅಧ್ಯಯನಗಳು ಅಗತ್ಯವಾಗಿದೆ. ಸಮೀಕ್ಷೆ ಅಧ್ಯಾಯನದಿಂದ ಮಾತ್ರ ಸಾಮಾಜಿಕ ಪರಿರ್ವತೆನೆ ಸಾಧ್ಯವಿದೆ. ಸಮಾಜಕ್ಕೆ ಕನ್ನಡಿ ಹಿಡಿಯಲು ಇರುವ ಏಕೈಕ ಮಾರ್ಗವು ಹೌದು ಎಂದರು.ಕನ್ನಡ ಫ್ಯಾಕ್ಟ್ ಚೆಕ್ ಸಂಪಾದಕ ಮುತ್ತುರಾಜು ಅವರು ಫ್ಯಾಕ್ಟ್ ಚೆಕ್ ಯಾವುದು ನಿಜ? ಕುರಿತು ಮಾತನಾಡಿ, ಹೆಟ್ ನ್ಯೂಸ್ ಮತ್ತು ಫೇಕ್ ನ್ಯೂಸ್ಗಳ ಬಗ್ಗೆ ಎಚ್ಚರವಹಿಸಬೇಕು. ಅನುಮಾನ ಬಂದ ಸುದ್ದಿಗಳನ್ನು ಪರಿಶೀಲಿಸದೆ ಹಂಚ ಬಾರದು. ಡಿಜಿಟಲ್ ಆರೆಸ್ಟ್ ಎನ್ನುವುದೆಲ್ಲ ಸುಳ್ಳು, ಇಂತಹ ಕರೆಗಳಿಗೆ ಪ್ರತಿಕ್ರಿಯಿಸಬಾರದು. ಎಐ ಕಾಲದಲ್ಲಿ ಏನು ಬೇಕಾದರು ಏಡಿಟ್ ಮಾಡಬಹುದು. ಹಾಗಾಗಿ ಸುಳ್ಳು ಸುದ್ದಿ ಬಗ್ಗೆ ತಿಳಿದುಕೊಳ್ಳಲು ಫ್ಯಾಕ್ಟ್ ಚೆಕ್ ಮಾಡುವ ಪತ್ರಿಕೆ, ವೆಬ್ಸೈಟ್ ನೆರವು ಪಡೆದುಕೊಳ್ಳಿ. ಮೊಸಕ್ಕೊಳಗಾದ ತಕ್ಷಣ ಪೊಲೀಸ್ಗೆ ದೂರು ನೀಡಿ. ಹಾಗೇ ಆ ಬಗ್ಗೆ ಅರಿವು ಮೂಡಿಸಿ. ಫೆಕ್ ನ್ಯೂಸ್ ತಡೆಯಲು ಮೊದಲು ಸಾಮಾನ್ಯ ಜ್ಞಾನ ಉಪಯೋಗಿಸಿ, ಪ್ರಶ್ನಿಸುವ ಮನೋಭಾವ ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.ಈ ಮೂರು ವಿಚಾರ ಗೋಷ್ಠಿಗಳ ಅಧ್ಯಕ್ಷತೆಯನ್ನು ಶ್ರೀ ಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ಪ್ರಾಂಶುಪಾಲರಾದ ಡಾ ಮಮತ ಜಿ ವಹಿಸಿದ್ದರು. ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಬಿ.ಟಿ.ಮುದ್ದೇಶ್ , ಸಹಾಯಕ ಪ್ರಾಧ್ಯಾಪಕರಾದ ಡಾ.ಜ್ಯೋತಿ, ಎಂ.ಪಿ. ಶ್ವೇತಾ, ಎನ್.ಜಿ.ನವೀನ್, ರವಿಕುಮಾರ್ ಸಿ.ಎಚ್., ಸಿದ್ದಾರ್ಥ ಪದವಿ ಕಾಲೇಜಿನ ಅಧ್ಯಾಪಕರಾದ ಡಾ.ರಂಗಸ್ವಾಮಿ, ಮಣಿ ಎಚ್.ಜಿ., ಶಿಲ್ಪಶ್ರೀ, ಪತ್ರಕರ್ತರಾದ ಅನಿಲ್ ಕುಮಾರ್ ಚಿಕ್ಕದಾಳವಟ್ಟ, ಸಂತೋಷ್ ಎಚ್.ಎಂ, ಚಂದನ್, ರೇಡಿಯೋ ಸಿದ್ದಾರ್ಥದ ಗೌತಮ್, ವಿಶಾಲ್, ಇನ್ನಿತರರು ಹಾಜರಿದ್ದರು.