ಹೊಳಲ್ಕೆರೆ ತಾಲೂಕಿನ ಮುತ್ತುಗದೂರು ಎಲ್.ಸಿದ್ದಪ್ಪ ಸ್ಮಾರಕ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಗಣಿತ ವಸ್ತುಪ್ರದರ್ಶನವನ್ನು ಡಯಟ್ ಉಪನ್ಯಾಸಕ ಎಸ್.ಬಸವರಾಜು ವೀಕ್ಷಿಸಿದರು.

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ವಿದ್ಯಾರ್ಥಿಗಳು ವಿಷಯ ಪರಿಕಲ್ಪನೆಯನ್ನು ಸುಲಭವಾಗಿ ಗ್ರಹಿಸಲು ಕಲಿಕಾ ಸಾಮಗ್ರಿಗಳು ಸಹಕಾರಿಯಾಗುತ್ತವೆ ಎಂದು ಚಿತ್ರದುರ್ಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನ್ಯಾಸಕ ಎಸ್.ಬಸವರಾಜು ಹೇಳಿದರು.

ತಾಲೂಕಿನ ಮುತ್ತುಗದೂರು ಎಲ್.ಸಿದ್ದಪ್ಪ ಸ್ಮಾರಕ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಗಣಿತ ವಸ್ತು ಪ್ರದರ್ಶನ ಕಾರ್ಯಕ್ರಮ ವೀಕ್ಷಿಸಿ ಮಾತನಾಡಿದ ಅವರು, ಒಂದು ಚಿತ್ರ ನೂರು ಪದಗಳಿಗೆ ಸಮನಾಗಿದ್ದು ಶಿಕ್ಷಕರು ಬೋಧನೆಯಲ್ಲಿ ಚಿತ್ರಗಳು, ಮಾದರಿಗಳನ್ನು ಬಳಕೆ ಮಾಡುವುದರಿಂದ ವಿದ್ಯಾರ್ಥಿಗಳು ವಿಷಯವನ್ನು ಸುಲಭವಾಗಿ ಅರ್ಥ ಮಾಡಿಕೊಂಡು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಹಕಾರಿಯಾಗುತ್ತದೆ ಎಂದರು.

ಕಸದಿಂದ ರಸ ತಯಾರಿಸುವಂತೆ ವಿದ್ಯಾರ್ಥಿಗಳು ಲೋಕಾಸ್ಟ್ ನೋಕಾಸ್ಟ್ ನಂತೆ ಕಡಿಮೆ ಖರ್ಚಿನಲ್ಲಿ ಶಿಕ್ಷಕಿ ಜ್ಯೋತಿ ಇವರ ಮಾರ್ಗದರ್ಶನದಲ್ಲಿ ಗಣಿತ ವಿಷಯದ ಕೋನಗಳು, ತ್ರಿಭುಜ, ಆಯತ, ವೃತ್ತ, ಸೂತ್ರಗಳು, ಮೂಲ ಪರಿಕಲ್ಪನೆಗಳ ಮಾದರಿ ತಯಾರಿಸಿರುವುದು ಮತ್ತು ರಂಗೋಲಿಯಲ್ಲಿ ರೇಖಾಗಣಿತದ ಮೂಲ ಪರಿಕಲ್ಪನೆಗಳನ್ನು ಚಿತ್ರಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರತೆಗೆಯಲು ಅವರಲ್ಲಿ ಗಣಿತ ವಿಷಯದಲ್ಲಿ ಆಸಕ್ತಿ ಬೆಳೆಸಲು ವಸ್ತುಪ್ರದರ್ಶನ ಕಾರ್ಯಕ್ರಮ ಪೂರಕವಾಗುತ್ತದೆ. ಚಿತ್ತಗಳು, ಮಾದರಿಗಳು, ಚಟುವಟಿಕೆಗಳನ್ನು ಅಳವಡಿಸಿಕೊಂಡಾಗ ಕಲಿಕೆ ಪರಿಣಾಮಕಾರಿಯಾಗುತ್ತದೆ ಎಂದು ತಿಳಿಸಿದರು.

ಮುಖ್ಯ ಶಿಕ್ಷಕ ಜಿ.ಸುರೇಶ್‌ಗೌಡ ಮಾತನಾಡಿ, ಪಠ್ಯ ವಿಷಯದ ಜತೆಗೆ ಪಠ್ಯಪೂರಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳಲು ಶಾಲೆಯಲ್ಲಿ ಅವಕಾಶ ಕಲ್ಪಿಸುತ್ತೇವೆ. ಶಾಲೆಯಲ್ಲಿ ವಸ್ತುಪ್ರದರ್ಶನವನ್ನು ಆಯೋಜಿಸಿ ವಿದ್ಯಾರ್ಥಿಗಳಿಂದಲೇ ಮಾದರಿ ತಯಾರಿಸಲು ಸ್ಪರ್ಧೆಯನ್ನು ಏರ್ಪಡಿಸುತ್ತೇವೆ ಇದರಿಂದ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ವ್ಯಕ್ತಪಡಿಸಲು ಸ್ಪರ್ಧಾ ಮನೋಭಾವನೆಯನ್ನು ಬೆಳೆಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಶಿಕ್ಷಕಿ ವೈ.ಬಿ ಜ್ಯೋತಿ ಮಾತನಾಡಿ, ಭಾರತದಲ್ಲಿ ಪ್ರತಿ ವರ್ಷ ಡಿ.22 ರಂದು ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಗುತ್ತದೆ. ಶ್ರೀನಿವಾಸ ರಾಮಾನುಜನ್ ರವರು ಗಣಿತ ವಿಷಯದಲ್ಲಿ ಹೊಂದಿದ್ದ ಅಪಾರ ಜ್ಞಾನ, ಗಣಿತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮತ್ತು ಸಾಧನೆಗಳನ್ನು ಪರಿಚಯಿಸಲು ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ಗಣಿತವನ್ನು ಕಲಿಯಲು ಪ್ರೇರೇಪಿಸಲು, ಗಣಿತ ಕಲಿಕೆಯಿಂದ ದೊರೆಯುವ ಪ್ರಯೋಜನಗಳ ಅರಿವು ಮೂಡಿಸುವುದು ಗಣಿತ ದಿನಾಚರಣೆಯ ಉದ್ದೇಶವಾಗಿದೆ ಎಂದು ತಿಳಿಸಿದರು. ಶಿಕ್ಷಕರಾದ ಕವಿತಾ ಬಾಳೆಕಾಯಿ, ಕೆ.ಬಿ.ಅಜ್ಜಯ್ಯ, ಎಸ್.ಕೆ.ಮೋಹನ್ ಮತ್ತು ವಿದ್ಯಾರ್ಥಿಗಳು ಇದ್ದರು.