ಕ್ಷಣಕ್ಷಣಕ್ಕೂ ಚಂಚಲ ಆಗುತ್ತಿರುವ ಮಾನವನ ಮನಸ್ಸಿಗೆ ಶಾಂತಿ, ನೆಮ್ಮದಿಯನ್ನು ತಂದು ಕೊಡುವ ಶಕ್ತಿ ವಚನ ಸಾಹಿತ್ಯಕ್ಕೆ ಇದೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಡಾ.ಗುರುಬಸವ ಮಹಾಸ್ವಾಮೀಜಿ ಹೇಳಿದರು.
ಚನ್ನಗಿರಿ: ಕ್ಷಣಕ್ಷಣಕ್ಕೂ ಚಂಚಲ ಆಗುತ್ತಿರುವ ಮಾನವನ ಮನಸ್ಸಿಗೆ ಶಾಂತಿ, ನೆಮ್ಮದಿಯನ್ನು ತಂದು ಕೊಡುವ ಶಕ್ತಿ ವಚನ ಸಾಹಿತ್ಯಕ್ಕೆ ಇದೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಡಾ.ಗುರುಬಸವ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ಕೊರಟಿಕೆರೆ ಗ್ರಾಮದಲ್ಲಿರುವ ಸಮುದಾಯ ಭವನದಲ್ಲಿ ಜಾಗತಿಕ ಲಿಂಗಾಯಿತ ಮಹಾಸಭಾ ವತಿಯಿಂದ ಏರ್ಪಡಿಸಿದ್ದ ಶ್ರಾವಣ ಬಂತು, ಅನುಭಾವ ತಂತು ಎಂಬ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮನುಷ್ಯನ ಆತ್ಮದರ್ಶನಕ್ಕೆ ಅಂತರಂಗದಲ್ಲಿ ಬದಲಾಗದೇ ಬಹಿರಂಗದಲ್ಲಿ ಒಳ್ಳೆಯ ಮಾತುಗಳನ್ನು ಆಡುವುದು, ಒಳ್ಳೆಯ ಬಟ್ಟೆಗಳನ್ನು ಹಾಕಿದರೆ ಸಾಲದು. ಅಧಿಕಾರದಿಂದ ಗೌರವ ಪಡೆಯುವುದಲ್ಲ, ವ್ಯಕ್ತಿಯ ವ್ಯಕ್ತಿತ್ವದಿಂದ ಗೌರವ ಬರುತ್ತದೆ ಎಂದರು.ಮನುಷ್ಯನು ಆರೋಗ್ಯವಂತರಾಗಿ ಇರಬೇಕಾದರೆ ದೈಹಿಕ, ಮಾನಸಿಕವಾಗಿ ಆರೋಗ್ಯ ಸದೃಢವಾಗಿ ಇಟ್ಟುಕೊಳ್ಳಲು ಮಿತ ಆಹಾರ, ಮಿತನಿದ್ರೆಗಳು ಅವಶ್ಯಕವಾಗಿದೆ. ಊಟವನ್ನು ಪ್ರಸಾದ ಭಾವದಿಂದ ಸ್ವೀಕರಿಸಿದರೆ ಆಹಾರವು ದೇಹಕ್ಕೆ ಒಳ್ಳೆಯ ಕಸುವನ್ನು ತಂದುಕೊಡುತ್ತದೆ ಎಂದರು.
ಕ.ಸಾ.ಪ. ಮಾಜಿ ಅಧ್ಯಕ್ಷ ಎಂ.ಯು.ಚನ್ನಬಸಪ್ಪ ಮಾತನಾಡಿ, ಶರಣ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆ ನಿಟ್ಟಿನಲ್ಲಿ ಶ್ರಾವಣ ಮಾಸದಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿರುವ ಬಗ್ಗೆ ತಿಳಿಸಿದರು.ಅತಿಥಿ ಉಪನ್ಯಾಸವನ್ನು ಉಪನ್ಯಾಸಕಿ ಲಾವಣ್ಯ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಬಸವ ಬಳಗದ ಉಪಾಧ್ಯಕ್ಷ ಚಂದ್ರಪ್ಪ, ನಿವೃತ್ತ ಮುಖ್ಯ ಶಿಕ್ಷಕ ಪರಮೇಶ್ವರಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಉಮೇಶ್, ಟಿ.ವಿ.ಚಂದ್ರಪ್ಪ, ಕೆ.ಜಿ.ಶಿವಮೂರ್ತಿ, ಗ್ರಾಮಸ್ಥರು ಭಾಗವಹಿಸಿದ್ದರು.