ಹಿರಿಯ ಶಿಕ್ಷಣ ಪ್ರೇಮಿ, ಆಡಳಿತಗಾರ, ಧರ್ಮಸ್ಥಳ ಮಂಜುನಾಥ ಶಿಕ್ಷಣ ಸಂಸ್ಥೆಯ ನಿವೃತ್ತ ಕಾರ್ಯದರ್ಶಿ ಎನ್. ವಜ್ರಕುಮಾರ ಸ್ವರಣಾರ್ಥ ಸೆ. 2ರಿಂದ ಸೆ. 6ರ ವರೆಗೆ ನಿತ್ಯ ಸಂಜೆ 6.30ಕ್ಕೆ ನಾಟಕಗಳ ಪ್ರದರ್ಶನ ನಡೆಯಲಿದೆ.

ಧಾರವಾಡ:

ಅಭಿನಯ ಭಾರತಿ ಸಂಸ್ಥೆಯು ಸೆಪ್ಟೆಂಬರ್‌ ಮೊದಲ ವಾರದಲ್ಲಿ ಜೆಎಸ್‌ಎಸ್‌ ಸಂಸ್ಥೆಯ ಆವರಣದಲ್ಲಿರುವ ಸನ್ನಿಧಿ ಭವನದಲ್ಲಿ ಐದು ದಿನ ಆರು ನಾಟಕಗಳ ವಜ್ರಸಿರಿ ರಂಗೋತ್ಸವ ಹಮ್ಮಿಕೊಂಡಿದೆ ಎಂದು ಅಭಿನಯ ಭಾರತಿ ಪರ್ಯಾಯ ಸಂಸ್ಥೆ ಅಧ್ಯಕ್ಷ ವಾಸುದೇವ ಪರ್ವತಿ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಹಿರಿಯ ಶಿಕ್ಷಣ ಪ್ರೇಮಿ, ಆಡಳಿತಗಾರ, ಧರ್ಮಸ್ಥಳ ಮಂಜುನಾಥ ಶಿಕ್ಷಣ ಸಂಸ್ಥೆಯ ನಿವೃತ್ತ ಕಾರ್ಯದರ್ಶಿ ಎನ್. ವಜ್ರಕುಮಾರ ಸ್ವರಣಾರ್ಥ ಸೆ. 2ರಿಂದ ಸೆ. 6ರ ವರೆಗೆ ನಿತ್ಯ ಸಂಜೆ 6.30ಕ್ಕೆ ನಾಟಕಗಳ ಪ್ರದರ್ಶನ ನಡೆಯಲಿದೆ. ಸೆ. 2ರಂದು ಸಂಜೆ 6 ಕ್ಕೆ ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಅಜಿತ್ ಪ್ರಸಾದ್ ಉದ್ಘಾಟಿಸಲಿದ್ದು, ರಂಗಾಯಣದ ನಿರ್ದೇಶಕ ಝಾಕೀರ್ ನದಾಫ್, ಸುಮನ ವಜ್ರಕುಮಾರ್ ಹಾಗೂ ಹುಬ್ಬಳ್ಳಿಯ ಗಂಗಾವತಿ ಸಿಲ್ಕ್ ಆ್ಯಂಡ್‌ ಸ್ಯಾರೀಸ್ ಸಂಸ್ಥೆ ಮುಖ್ಯಸ್ಥರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ದಿ. ಯಶವಂತ್ ಸರದೇಶಪಾಂಡೆ ಪರಿಕಲ್ಪನೆಯ, ಡಾ. ಪ್ರವೀಣ್ ಗೋಡಖಿಂಡಿ ರಚನೆ ಹಾಗೂ ನಿರ್ದೇಶನದಲ್ಲಿ ಕೊಳಲು.ಕಾಮಿಡಿ ನಡೆಯಲಿದೆ ಎಂದರು.

ಸೆ. 3ರಂದು ಸಂಜೆ 6ಕ್ಕೆ ಮಹಾವೀರ ಉಪಾಧ್ಯಾಯ, ಶಿವಾನಂದ ನಾಯಕ ಹಾಗೂ ಪ್ರದೀಪ್ ಜೈನ್ ನಾಟಕಕ್ಕೆ ಚಾಲನೆ ನೀಡಲಿದ್ದು, ಬೆಳಗಾವಿಯ ರಂಗಸಂಪದ ತಂಡದವರು ಡಾ. ಅರವಿಂದ ಕುಲಕರ್ಣಿ ನಿರ್ದೇಶನದಲ್ಲಿ ಶ್ರೀರಂಗರ ಗೆಳೆಯ ನೀನು ಹಳೆಯ ನಾನು ನಾಟಕವನ್ನು ಪ್ರದರ್ಶಿಸಲಿದ್ದಾರೆ ಎಂದ ಅವರು, ಸೆ. 4ರಂದು ಸಂಜೆ 6ಕ್ಕೆ ಅರುಣಕುಮಾರ ಪಾಟೀಲ್, ಐಎಸ್‌ಸಿಟಿ ಮುಖ್ಯಸ್ಥ ಅನಿಲ್ ಗಾಸ್ತೆ ಶಿವಮೊಗ್ಗದ ಹೊಂಗಿರಣ ತಂಡದಿಂದ ಡಾ. ಶ್ರೀಪಾದ್ ಭಟ್ ನಿರ್ದೇಶನದಲ್ಲಿ "ದಿ. ಪೆನ್ " ನಾಟಕಕ್ಕೆ ಚಾಲನೆ ನೀಡುತ್ತಾರೆ. ಈ ವಿಭಿನ್ನ ಪ್ರಯೋಗದಲ್ಲಿ ಇಬ್ಬರೇ ನಟರು ಒಟ್ಟು 12 ಪಾತ್ರಗಳನ್ನು ವಿವಿಧ ಆಯಾಮದೊಂದಿಗೆ ರಂಗದ ಮೇಲೆ ತೆರೆದಿಡುತ್ತಾರೆ ಎಂದು ತಿಳಿಸಿದರು.

ಸೆ. 5ರಂದು ಸಂಜೆ 6ಕ್ಕೆ ಅರಿಹಂತ್ ಪ್ರಸಾದ, ರವಿ ಕುಳೇನೂರ ಹಾಗೂ ಶಂಕರ ಕೋಳಿವಾಡ ಅವರು ಗಿರೀಶ ಕಾರ್ನಾಡರ ಪ್ರಸಿದ್ಧ ನಾಟಕ ಹಯವದನಕ್ಕೆ ಚಾಲನೆ ನೀಡುತ್ತಾರೆ. ಕೊನೆಯ ದಿನ ಸೆ. 6ರಂದು ಬೆಳಗ್ಗೆ10.30ಕ್ಕೆ ಬಿ.ವಿ. ಕಾರಂತರ ಜೀವನವನ್ನಾಧರಿಸಿದ " ಬಾಬಾ ಕಾರಂತ್ " ರೂಪಕವನ್ನು ಶ್ರೀಪತಿ ಮಂಜನಬೈಲು ವಿನ್ಯಾಸ ಹಾಗೂ ಟಿ.ಎಸ್‌. ನಾಗಾಭರಣ ನಿರ್ದೇಶನದಲ್ಲಿ ಬೆನಕ ತಂಡದವರು ಪ್ರಯೋಗಿಸಲಿದ್ದಾರೆ. ಅದೇ ದಿನ ಸಂಜೆ 6ಕ್ಕೆ ರಂಗೋತ್ಸವದ ಕೊನೆಯ ಪ್ರಯೋಗ ಡಾ. ಚಂದ್ರಶೇಖರ ಕಂಬಾರರ ಜೋಕುಮಾರಸ್ವಾಮಿ ನಾಟಕವನ್ನು ಬೆನಕ ತಂಡವು ಪ್ರಯೋಗಿಸಲಿದೆ. ಸಮಾರೋಪಕ್ಕೆ ಮುಖ್ಯ ಅತಿಥಿಗಳಾಗಿ ಡಾ. ಸಿಎಚ್. ವಿ.ಎಸ್.ವಿ ಪ್ರಸಾದ್ ಹಾಗೂ ವಿಜಯಕುಮಾರ ಡಿ.ಎಸ್. ಭಾಗವಹಿಸಲಿದ್ದಾರೆ ಎಂದರು.

ಅಭಿನಯ ಭಾರತಿ ಅಧ್ಯಕ್ಷ ಅರವಿಂದ ಕುಲಕರ್ಣಿ ಮಾತನಾಡಿ, ಸಂಸ್ಥೆಗೆ ಚಂದಾದಾರಿಗೆ ಈ ಎಲ್ಲ ನಾಟಕಗಳು ಉಚಿತ ಪ್ರವೇಶವಿದ್ದು, ಉಳಿದವರಿಗೆ ಪ್ರತಿ ನಾಟಕಕ್ಕೂ ₹ 500, ₹ 300 ಪ್ರತ್ಯೇಕ ಟಿಕೆಟ್ ಪಡೆದು ವೀಕ್ಷಿಸಬಹುದು. ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ₹ 100 ಪ್ರವೇಶ ಧನ ಪ್ರತಿ ನಾಟಕಕ್ಕೆ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ 8073479394, 9480737338 ಸಂಪರ್ಕಿಸಲು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಆಯೋಜಕರಾದ ಸುನೀಲ ಬಾಗೇವಾಡಿ, ಸಮೀರ್ ಜೋಶಿ, ಎಂ. ನಾರಾಯಣ, ಸುಧೀರ ಬಿ.ಎಸ್‌., ಮಾರ್ತಾಂಡಪ್ಪ ಕತ್ತಿ ಇದ್ದರು.