ವನಹಳ್ಳಿ ಸರ್ಕಾರಿ ಶಾಲೆಯ ಅವ್ಯವಸ್ಥೆ: ಶಾಸಕ ಪಠಾಣ ಗರಂ

| Published : Jun 06 2025, 01:47 AM IST / Updated: Jun 06 2025, 01:48 AM IST

ಸಾರಾಂಶ

ಶಾಲಾಭಿವೃದ್ಧಿ ಸಮಿತಿ ಹೆಚ್ಚಿನ ಕಾಳಜಿ ವಹಿಸದೇ ಇರುವುದು ಸಹ ಈ ಶಾಲೆ ಸ್ಥಿತಿ ಹಿಂದುಳಿಯಲು ಕಾರಣವಾಗಿದೆ ಕೆಲವು ಗ್ರಾಮಸ್ಥರು ದೂರಿದ್ದಾರೆ.

ಶಿಗ್ಗಾಂವಿ: ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಕೇಳಿದರೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ಉತ್ತರವಿಲ್ಲ ಎಂದು ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಬೇಸರ ವ್ಯಕ್ತಪಡಿಸಿದರು.ತಾಲೂಕಿನ ವನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ಪ್ರಶ್ನೆಗೆ ಶಿಕ್ಷಕರೇ ಉತ್ತರ ಹೇಳಲು ತಡವರಿಸಿಕೊಂಡರೆ ಮಕ್ಕಳ ಪರಿಸ್ಥಿತಿ ಏನಾಗಬೇಕು ಎಂದು ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಾಲೆ ಸರಿಯಾದ ವೇಳೆಗೆ ಆರಂಭವಾಗುತ್ತಿಲ್ಲ. ಸರ್ಕಾರದ ಯೋಜನೆಗಳು ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಬೇಕಾಬಿಟ್ಟಿ ಅಡುಗೆ ಮಾಡುತ್ತಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿಲ್ಲ. ಮೈದಾನದ ಕೊರತೆ ಕಾಡುತ್ತಿದೆ. ಹೀಗಾಗಿ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ತೊಂದರೆಯಾಗುತ್ತಿದೆ ಎಂಬುದು ಗ್ರಾಮಸ್ಥರ ಅಳಲಾಗಿತ್ತು. ಈ ಹಿನ್ನೆಲೆ ಶಾಸಕರು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.

ಬಿಸಿಯೂಟ ತಿಂದು ನೋಡಿದರೆ ಅದರಲ್ಲಿ ಯಾವುದೇ ಪೌಷ್ಟಿಕತೆಯಿಲ್ಲ. ಅದರಿಂದ ಮಕ್ಕಳು ಬಲಿಷ್ಠರಾಗಲು ಹೇಗೆ ಸಾಧ್ಯ? ಕುಡಿಯುವ ನೀರಿನ ಟ್ಯಾಂಕ್‌ಗಳು, ನಲ್ಲಿಗಳು ಸಮರ್ಪಕವಾಗಿಲ್ಲ. ತಕ್ಷಣ ಅವುಗಳನ್ನು ಸರಿಪಡಿಸಬೇಕು ಎಂದು ಪಿಡಿಒ ಶೀಲಾ ಅವರಿಗೆ ಶಾಸಕರು ಸೂಚಿಸಿದರು.

ಶಾಲೆಯಲ್ಲಿ ಇಬ್ಬರು ಶಿಕ್ಷಕರು ಪೂರ್ಣಾವಧಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗುತ್ತಿದೆ. ಆದರೂ ಇಲ್ಲಿನ ಶಾಲೆ ಸುಧಾರಣೆ ಆಗುತ್ತಿಲ್ಲ. ಶಾಲಾಭಿವೃದ್ಧಿ ಸಮಿತಿ ಹೆಚ್ಚಿನ ಕಾಳಜಿ ವಹಿಸದೇ ಇರುವುದು ಸಹ ಈ ಶಾಲೆ ಸ್ಥಿತಿ ಹಿಂದುಳಿಯಲು ಕಾರಣವಾಗಿದೆ ಕೆಲವು ಗ್ರಾಮಸ್ಥರು ದೂರಿದ್ದಾರೆ. ಸವಣೂರು ತಾಲೂಕು ಕ್ರಾಂಗ್ರೆಸ್ ಅಧ್ಯಕ್ಷ ಎಂ.ಎಂ. ಮುಲ್ಲಾ, ಮುಖಂಡರಾದ ಗೌಸಖಾನ್ ಮುನಸಿ, ಅಣ್ಣಪ್ಪ ಲಮಾಣಿ, ಕರಿಂಸಾಬ್ ಮೊಗಳಳ್ಳಿ, ಮುನ್ನಾ, ಗುಡಪ್ಪ ಜಲದಿ, ಶಂಭುಲಿಂಗಪ್ಪ ಕತ್ತಿ, ರವಿ ಗುದಗಿ, ಯಲ್ಲಪ್ಪ ಸಾತಪ್ಪನವರ, ಗಂಗಪ್ಪ ದೊಡ್ಡಮನಿ, ಶಿವಯ್ಯ ಗುರುಯ್ಯನವರಮಠ, ಮುತ್ತು ಅಣ್ಣಿಗೇರಿ, ಬಸಪ್ಪ ಕಾರಡಗಿ ಇದ್ದರು.ನಾಲ್ವರು ದರೋಡೆಕೋರರ ಬಂಧನ

ರಾಣಿಬೆನ್ನೂರು: ರಾಷ್ಟ್ರೀಯ ಹೆದ್ದಾರಿ ಸೇತುವೆ ಕೆಳಗೆ ಸಂಚರಿಸುವ ವಾಹನ ಸವಾರರಿಗೆ ತಡೆದು ಅವರ ಬಳಿ ಇರುವ ಹಣ ಮತ್ತು ಒಡವೆಗಳನ್ನು ದರೋಡೆ ಮಾಡಲು ಹೊಂಚು ಹಾಕಿ ಕುಳಿತಿದ್ದ ಆರೋಪಿಗಳನ್ನು ಬುಧವಾರ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮುಬಾರಕ್ ಉರ್ಫ್‌ ಮೊಟಿಯಾ ತಂದೆ ಹುಸೇನ್ ಬ್ಯಾಡಗಿ(22), ಜಾಫರ್ ಸಾಧಿಕ್ ತಂದೆ ಜಬಿವುಲ್ಲಾ ಮಿಸ್ಕಿನ್(23) ಗೌಸಖಾನ್ ಉರ್ಫ್‌ ಬಲ್ಲು ತಂದೆ ಜಮಾಲಖಾನ್ ಪಾಟೀಲ(24)(ರಾಣಿಬೆನ್ನೂರು ಶಹರ) ಹಾಗೂ ದಾವಣಗೆರೆಯ ಸೈಯದ್ ಶೇರು ಉರ್ಫ್‌ ಡಾನ್ ಶೇರು ತಂದೆ ಸೈಯದ ಅಹ್ಮದ(29) ಬಂಧಿತ ಆರೋಪಿಗಳು.ಪ್ರಮುಖ ಆರೋಪಿ ಮುಬಾರಕ್ ಬ್ಯಾಡಗಿ ತನ್ನ ಸಹಚರರ ಜತೆಗೂಡಿ ಶಹರದಲ್ಲಿ ಎರಡು ಮನೆಗಳ ಕಳ್ಳತನ ಮಾಡಿರುವುದನ್ನು ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾರೆ. ಬಂಧಿತರಿಂದ 37 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ ಈತ ಹಲಗೇರಿ ಮತ್ತು ಉಕ್ಕುಂದ ಸರ್ವಂದ ಗ್ರಾಮದಲ್ಲಿಗಳಲ್ಲಿಯೂ ಮನೆ ಕಳ್ಳತನ ಮಾಡಿರುವುದನ್ನು ತಿಳಿಸಿದ್ದಾರೆ. ಮುಬಾರಕ್ ಬ್ಯಾಡಗಿ ಮೇಲೆ 17 ಕಳ್ಳತನದ ಪ್ರಕರಣಗಳಿವೆ.ರಾಣಿಬೆನ್ನೂರು ಉಪ ವಿಭಾಗದ ಡಿವೈಎಸ್‌ಪಿ ಜಿ. ಲೋಕೇಶ, ಶಹರ ಸಿಪಿಐ ಡಾ. ಶಂಕರ, ಶಹರ ಪಿಎಸ್‌ಐಗಳಾದ ಗಡ್ಡೆಪ್ಪ ಗುಂಜುಟಗಿ, ಎಚ್.ಎನ್. ದೊಡ್ಡಮನಿ ಸಿಬ್ಬಂದಿಗಳಾದ ಸಿ.ಡಿ. ಸಣ್ಣಮನಿ, ಪಿ.ಕೆ. ಸನದಿ, ಪಿ.ಕೆ. ಲಮಾಣಿ, ಎಚ್.ಟಿ. ನಾಗವತ್, ನಿಂಗರಾಜ್ ಕರಿಗಾರ, ಎಚ್.ಎಲ್. ದನುವಿನಮನಿ, ವೈ.ಬಿ. ಓಲೇಕಾರ, ವಾಹನ ಚಾಲಕ ಕರಿಯಪ್ಪ ಮೆಣಸಿನಾಳ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.