ಪುತ್ತೂರು: ಕ್ಯಾಂಪ್ಕೋ ಸಂಸ್ಥೆಯು ವಾರಣಾಶಿ ಸುಬ್ರಾಯ ಭಟ್ ಅವರ ಮಗುವಾಗಿದ್ದು, ಅಡಕೆ ಬೆಳೆಗಾರರಿಗಾಗಿ ಅವರು ಹುಟ್ಟು ಹಾಕಿದ್ದ ಕ್ಯಾಂಪ್ಕೋ ಪ್ರಸ್ತುತ ದೈತ್ಯ ಸಂಸ್ಥೆಯಾಗಿ ಬೆಳೆದು ನಿಂತಿದೆ. ಕ್ಯಾಂಪ್ಕೋ ದೇಶದ ಅತ್ಯುತ್ಕೃಷ್ಟ ಸಂಸ್ಥೆಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಕ್ಯಾಂಪ್ಕೋದಲ್ಲಿ ತಪಸ್ವಿಯಂತೆ ಸೇವೆಗೈದಿರುವ ಅವರು ಕೋಟ್ಯಾಂತರ ಅಡಕೆ ಬೆಳೆಗಾರರ ಬಾಳಿಗೆ ಬೆಳಕಾದವರು ಎಂದು ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಹೇಳಿದ್ದಾರೆ.
ಸೋಮವಾರ ಪುತ್ತೂರಿನ ಕೆಮ್ಮಿಂಜೆ ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆಯಲ್ಲಿ ನಡೆದ ಕ್ಯಾಂಪ್ಕೋ ಸಂಸ್ಥೆಯ ಸಂಸ್ಥಾಪಕ, ಸಹಕಾರಿ ರತ್ನ ವಾರಣಾಶಿ ಸುಬ್ರಾಯ ಭಟ್ ಅವರ ಜನ್ಮ ಶತಾಬ್ಧಿ ಸಂಭ್ರಮ-2026 ‘ಕ್ಯಾಂಪ್ಕೋ ಬ್ರಹ್ಮ ಶತನಮನಗಳು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಮಾತನಾಡಿ, ಅಡಕೆ ಬೆಳೆಗಾರರ ಸಂರಕ್ಷಣೆಗಾಗಿ ವಾರಣಾಸಿ ಸುಬ್ರಾಯ ಭಟ್ ಅವರು ಕ್ಯಾಂಪ್ಕೋ ಸಂಸ್ಥೆ ಹುಟ್ಟು ಹಾಕಿ ಬೆಳೆಗಾರರಿಗೆ ಭದ್ರ ಬುನಾದಿ ಹಾಕಿದವರು. ಅವರಿಗೆ ಪದ್ಮಶ್ರೀ ಪ್ರಶಸ್ತಿ ಬರಬೇಕಿತ್ತು. ಇದಕ್ಕಾಗಿ ಹಲವು ಪ್ರಯತ್ನಗಳು ನಡೆಸಲಾಗಿತ್ತು. ಈಗಲೂ ಪ್ರಯತ್ನ ನಡೆಯುತ್ತಿದ್ದು ಮುಂದಿನ ದಿನವಾದರೂ ಬರುವ ನಿರೀಕ್ಷೆಯಿದೆ ಎಂದರು. ರೈತರ ಆತ್ಮಹತ್ಯೆ ತಡೆಯಲು ಕ್ಯಾಂಪ್ಕೋದಂತೆ ಸಂಸ್ಥೆಗಳನ್ನು ಹುಟ್ಟು ಹಾಕುವಂತೆ ಸಂಸತ್, ವಿಧಾನ ಸಭೆಯಲ್ಲಿಯೂ ಚರ್ಚೆಗಳಾಗುತ್ತಿದೆ. ಅಡಕೆಯಿಂದ ಕ್ಯಾನ್ಸರ್ ರೋಗ ಶಮನ ಮಾಡಲು ಸಹಕಾರಿಯಾಗಿದೆ ಎಂದು ನಿಮಾನ್ಸ್ ಸಂಸ್ಥೆ ಅಧ್ಯಯನ ನಡೆಸಿ ವರದಿ ಮಾಡಿದೆ. ಅಲ್ಲದೆ ಅಡಕೆ ಆರೋಗ್ಯಕರ ಎಂದು ಕರ್ನಾಟಕದ ಸಚಿವರು ತಿಳಿಸಿದ್ದಾರೆ ಅವರು ಹೇಳಿದರು.ಕೃಷಿ ಸಂಶೋಧಕರಾಗಿರುವ ವಾರಾಣಾಶಿ ಸುಬ್ರಾಯ ಭಟ್ ಪುತ್ರ ವಾರಾಣಾಶಿ ಕೃಷ್ಣಮೂರ್ತಿ ಅವರು ವಾರಾಣಾಶಿ ಸುಬ್ರಾಯ ಭಟ್ ಅವರ ಜನ್ಮ ಶತಾಬ್ಧಿಯ ಲಾಂಛನ ಬಿಡುಗಡೆಗೊಳಿಸಿದರು. ಕ್ಯಾಂಪ್ಕೋದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಮಧುಸೂದನ ರಾವ್, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೃಷಿಕ ಶಂಕರ್ ಸಾರಡ್ಕ ಮಾತನಾಡಿದರು.ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯ ಮೂರು ಹೊಸ ಉತ್ಪನ್ನಗಳಾದ ಡಾರ್ಕ್ ಚಾಕಲೇಟ್ ಪ್ರೀಮಿಯಂ 55 ಶೇ. ಕೊಕ್ಕೋ, ಡಾರ್ಕ್ ಚಾಕಲೇಟ್ ಪ್ರುಟ್ ಆ್ಯಂಡ್ ನಟ್ ಮತ್ತು ಕೊಕ್ಕೋ ಪೌಡರ್ ಎಂಬ ಮೂರು ಹೊಸ ಉತ್ಪನ್ನಗಳು ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು. ಪ್ರಭಾಕರ ಹೊಳ್ಳ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು. ವಾರಾಣಾಶಿ ಸುಬ್ರಾಯ ಭಟ್ ಅವರ ಜೀವನ ಸಾಧನೆಯ ಕುರಿತ ಸಿಬ್ಬಂದಿ ಕಿಶೋರ್ ಅವರಿಂದ ನಿರ್ಮಾಣಗೊಂಡಿರುವ ಕಿರುಚಿತ್ರ ಪ್ರದರ್ಶನಗೊಂಡಿತು.
ವ್ಯವಸ್ಥಾಪನಾ ನಿರ್ದೇಶಕ ಡಾ. ಬಿ.ವಿ ಸತ್ಯನಾರಾಯಣ ಸ್ವಾಗತಿಸಿದರು. ಉಪಾಧ್ಯಕ್ಷ ಪದ್ಮರಾಜ ಪಟ್ಟಾಜೆ ವಂದಿಸಿದರು. ಸಂಸ್ಥೆಯ ಸಿಬ್ಬಂದಿ ಜಯ ಭಂಡಾರಿ ನಿರೂಪಿಸಿದರು.