ಸಾರಾಂಶ
ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ‘ಪದ್ಮಶ್ರೀ ಡಾ. ಟಿ.ಎಂ.ಎ. ಪೈ ಅಣಕು ನ್ಯಾಯಾಲಯ ಸಭಾಂಗಣವನ್ನು ಉದ್ಘಾಟಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಕಾನೂನು ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಅಣಕು ನ್ಯಾಯಾಲಯದಲ್ಲಿ ಭಾಗವಹಿಸಿದರೆ, ಮುಂದೆ ಅವರ ಕಾನೂನು ಸಂಶೋಧನೆ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ವಿದ್ಯಾರ್ಥಿಗಳ ನಡುವೆ ವಿಚಾರಗಳ ವಿನಿಮಯವಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ ಎ.ಎಸ್.ಬೋಪಣ್ಣ ಹೇಳಿದರು.ಅವರು ನಗರದ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ‘ಪದ್ಮಶ್ರೀ ಡಾ. ಟಿ.ಎಂ.ಎ. ಪೈ ಅಣಕು ನ್ಯಾಯಾಲಯ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಅಣಕು ನ್ಯಾಯಾಲಯದಲ್ಲಿ ಭಾಗವಹಿಸುವಿಕೆಯಿಂದ ಮೌಖಿಕವಾದ ಮಂಡನೆ ಕೌಶಲ್ಯ ಮತ್ತು ಸಮಯ ಪಾಲನೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.ಡಾ. ಟಿ.ಎಂ.ಎ. ಪೈ ಫೌಂಡೇಶನ್ ಟ್ರಸ್ಟಿಗಳಾದ ಸಚಿನ್ ಪೈ ಮಾತನಾಡಿ, ಹೊಸದಾಗಿ ನಿರ್ಮಿಸಲಾಗಿರುವ ಅಣಕು ನ್ಯಾಯಾಲಯ ಸಭಾಂಗಣವನ್ನು ವಿದ್ಯಾರ್ಥಿಗಳು ಬಳಸುವುದರಿಂದ ನಿಜವಾದ ನ್ಯಾಯಾಲಯದ ಅನುಭವವನ್ನು ನೀಡಲಿದ್ದು ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದರು.ಫೌಂಡೇಶನ್ ಮುಖ್ಯಸ್ಥ ಅಶೋಕ್ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ನಿರ್ದೇಶಕಿ ಪ್ರೊ.(ಡಾ.) ನಿರ್ಮಲಾ ಕುಮಾರಿ ಕೆ. ಉಪಸ್ಥಿತರಿದ್ದರು. ಇತ್ತೀಚೆಗೆ ಪಿ.ಎಚ್ಡಿ ಪದವಿ ಪಡೆದ ಕಾಲೇಜಿನ ಪ್ರಾಂಶುಪಾಲ ಪ್ರೊ. (ಡಾ.) ರಘುನಾಥ್ ಕೆ.ಎಸ್. ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಉಪನ್ಯಾಸಕರಾದ ಡಾ. ಶ್ರೀನಿವಾಸ್ ಪ್ರಸಾದ್ ಮತ್ತು ಪ್ರೊ. ಚೈತ್ರ ಕುಮಾರಿ ಕೆ. ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಸುರೇಖಾ ಕೆ. ವಂದಿಸಿದರು. ವಿದ್ಯಾರ್ಥಿನಿ ಸಾಯಿ ರಮ್ಯ ನಿರೂಪಿಸಿದರು.