ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಅನಿಲ್, ನಾನು ಒಮ್ಮೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ನಿಮಗೆ ಸ್ಮಶಾನಕ್ಕೆ ಭೂಮಿ ನೀಡಲು ಅವಕಾಶ ವಿದ್ದರೆ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ದೇವನಹಳ್ಳಿ

ತಾಲೂಕಿನ ಅರದೇಶನಹಳ್ಳಿ ಗ್ರಾಮದಲ್ಲಿ ವೀರಶೈವ ಲಿಂಗಾಯತ ಸಮುದಾಯದ ನಾಗರಾಜ್ ಅಂತ್ಯಕ್ರಿಯೆಗೆ ಅಡ್ಡಿಪಡಿಸಿದ ಕಂದಾಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಹಾಗೂ ಅರದೇಶನಹಳ್ಳಿ ಗ್ರಾಮದ ಸರ್ವೇ ನಂ. ೫೮ರಲ್ಲಿನ ೨೨ ಗುಂಟೆ ಸರ್ಕಾರಿ ಜಾಗವನ್ನು ವೀರಶೈವ ಲಿಂಗಾಯತ ಸಮುದಾಯದ ಸ್ಮಶಾನಕ್ಕೆ ತ್ವರಿತವಾಗಿ ಮಂಜೂರು ಮಾಡಿಕೊಡುವಂತೆ ಒತ್ತಾಯಿಸಿ, ಅಖಿಲ ಭಾರತ ವೀರಶೈವ ಸಮಾಜದ ಜಿಲ್ಲಾ ಹಾಗೂ ತಾಲೂಕು ಘಟಕಗಳ ಮುಖಂಡರು ತಹಸೀಲ್ದಾರ್ ಅನಿಲ್ ಎಂ.ರಿಗೆ ಲಿಖಿತ ಮನವಿ ಸಲ್ಲಿಸಿದರು.

ನಂತರ ಸಂಘದ ತಾಲೂಕು ಅಧ್ಯಕ್ಷ ಎಂ.ಎಸ್. ರಮೇಶ್ ಮಾತನಾಡಿ, ಅರದೇಶನಹಳ್ಳಿ ಗ್ರಾಮದಲ್ಲಿ ವೀರಶೈವ ಲಿಂಗಾಯತ ಸಮುದಾಯದವರು ನೂರಾರು ವರ್ಷಗಳಿಂದ ಮೂಲನಿವಾಸಿಗಳಾಗಿದ್ದು, ಅನೇಕ ಕುಟುಂಬಗಳು ಇಲ್ಲಿ ವಾಸವಾಗಿವೆ. ಸಮುದಾಯದವರು ಮೃತಪಟ್ಟರೆ ಗ್ರಾಮದ ಸರ್ವೇ ನಂ. ೫೮ರ ಸರ್ಕಾರಿ ಜಾಗವಿದ್ದು, ಅದೇ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡುತ್ತಾ ಬಂದಿದ್ದಾರೆ. ಜಾಲಿಗೆ ಗ್ರಾಪಂ ಸರ್ವ ಸದಸ್ಯರ ಸಭೆಯಲ್ಲಿ ಈ ಜಾಗವನ್ನು ಸಮುದಾಯಕ್ಕೆ ಮೀಸಲಿಡುವಂತೆ ಅನುಮೋದನೆ ನೀಡಿದ್ದಾರೆ ಹಾಗೂ ಹಿಂದಿನ ತಹಸೀಲ್ದಾರ್ ಭೂಮಾಪಕರಿಗೆ ೨೦೨೫ರಲ್ಲೇ ಆದೇಶಿಸಿದ್ದರೂ ಸಹ ಇದುವರೆಗೆ ಭೂಮಾಪಕರು ಸರ್ವೇ ಮಾಡಿಲ್ಲ. ಆ ಜಾಗವನ್ನು ತ್ವರಿತವಾಗಿ ಸ್ಮಶಾನಕ್ಕೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ಎರಡು ದಿನಗಳ ಹಿಂದೆ ಅರದೇಶನಹಳ್ಳಿ ಗ್ರಾಮದ ನಾಗರಾಜ್ ಮೃತಪಟ್ಟಿದ್ದು, ಅವರ ಅಂತ್ಯ ಸಂಸ್ಕಾರ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿರುವಾಗ ಏಕಾಏಕಿ ಕಂದಾಯ ಅಧಿಕಾರಿಗಳು ಅಂತ್ಯಕ್ರಿಯೆ ಮಾಡಬಾರದು ಎಂದು ತಡೆದು ತೊಂದರೆ ನೀಡಿದ್ದರು. ಮಾನವ ಹಕ್ಕುಗಳ ಉಲ್ಲಂಘನೆ ಮಾಡಿರುವ ಕಂದಾಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಸ್ಮಶಾನ ಜಾಗವನ್ನು ತ್ವರಿತವಾಗಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಮೀಸಲಿಡಬೇಕೆಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಅನಿಲ್, ನಾನು ಒಮ್ಮೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ನಿಮಗೆ ಸ್ಮಶಾನಕ್ಕೆ ಭೂಮಿ ನೀಡಲು ಅವಕಾಶ ವಿದ್ದರೆ ಮಾಡಿಕೊಡುವುದಾಗಿ ಭರವಸೆ ನೀಡಿದರು.

ವೀರಶೈವ ಲಿಂಗಾಯತ ಸಮಾಜದ ತಾಲೂಕು ಅಧ್ಯಕ್ಷ ಎಂ.ಎಸ್. ರಮೇಶ್, ತಾಲೂಕು ಖಜಾಂಚಿ ಎಸ್. ನಾಗೇಶ್, ಜಿಲ್ಲಾ ಕಾರ್ಯದರ್ಶಿ ಶಾಂತಮೂರ್ತಿ, ಮಾಜಿ ಜಿಲ್ಲಾ ಅಧ್ಯಕ್ಷ ವಿರುಪಾಕ್ಷ ಶಾಸ್ತ್ರಿ, ತಾಲೂಕು ಕಾರ್ಯದರ್ಶಿ ಮಲ್ಲಿಕಾರ್ಜುನ, ಪದಾಧಿಕಾರಿಗಳಾದ ಅರದೇಶನಹಳ್ಳಿ ಎ.ಪಿ.ನಾಗೇಶ್, ಎಸ್, ಮಹೇಶ್, ಆನಂದ, ಚನ್ನಪ್ಪ, ಮುನಿರಾಜು, ರವಿಕುಮಾರ್, ನಾಗರಾಜ್, ಬಸವರಾಜು, ಮನೋಜಕುಮಾರ್, ರುದ್ರಮುನಿಯಪ್ಪ, ಬಸವರಾಜ್, ಚಿಕ್ಕಸಿದ್ದಪ್ಪ, ಲಾಯರ್ ಕೆಂಪರಾಜ್ ಮುಂತಾದವರಿದ್ದರು.