ಸಾರಾಂಶ
ಗದಗ: ಗದುಗಿನ ವೀರೇಶ್ವರ ಪುಣ್ಯಾಶ್ರಮ ಎಷ್ಟು ಬೆಳೆಯುತ್ತದೆಯೋ ಸಮಾಜಕ್ಕೆ ಅಷ್ಟು ಒಳ್ಳೆಯದಾಗುತ್ತದೆ ಎಂದು ಶಿರಹಟ್ಟಿಯ ಭಾವ್ಯಕ್ಯತಾ ಮಹಾಸಂಸ್ಥಾನಪೀಠದ ಫಕೀರ ದಿಂಗಾಲೇಶ್ವರ ಶ್ರೀಗಳು ಹೇಳಿದರು.
ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಭಾನುವಾರ ರಾತ್ರಿ ಗಾನಯೋಗಿ ಶಿವಯೋಗಿ ಲಿಂ. ಪಂಚಾಕ್ಷರ ಗವಾಯಿಗಳವರ 80ನೇ ಪುಣ್ಯ ಸ್ಮರಣೋತ್ಸವ ಹಾಗೂ ಪದ್ಮಭೂಷಣ ಲಿಂ. ಡಾ. ಪುಟ್ಟರಾಜ ಕವಿ ಗವಾಯಿಗಳವರ 14ನೇ ಪುಣ್ಯಸ್ಮರಣೋತ್ಸವ, ಉಭಯ ಗುರುಗಳ ಜಾತ್ರಾ ಮಹೋತ್ಸವ ಅಂಗವಾಗಿ ಕೀರ್ತನ ಸಮ್ಮೇಳನ ಹಾಗೂ ಅಂಧರ ಗೋಷ್ಠಿಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಎಲ್ಲಿಯೂ ಸಲ್ಲದವರನ್ನು ಎಲ್ಲೆಡೆಯೂ ಸಲ್ಲುವಂತೆ ಈ ಪುಣ್ಯಾಶ್ರಮದ ಉಭಯ ಗುರುಗಳು ಹಾಗೂ ಶಿವಯೋಗ ಮಂದಿರದ ಗುರುಗಳು ಮಾಡಿದ್ದಾರೆ. ವೀರೇಶ್ವರ ಪುಣ್ಯಾಶ್ರಮವು ಈ ಹಿಂದೆ ಸಾಧನೆಯಲ್ಲಿ ಸಾಕಷ್ಟು ಎತ್ತರಕ್ಕೆ ಬೆಳೆದಿದೆ. ಈಗ ಶಿಸ್ತಿನಲ್ಲಿ ಸಾಕಷ್ಟು ಪ್ರಗತಿ ಕಂಡಿದೆ. ಆಶ್ರಮ ಬೆಳೆದಂತೆ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಉಭಯ ಗುರುಗಳು ಕಂಡಿರುವ ನೂರು ವರ್ಷಗಳ ಕನಸು ಇಂದು ನನಸಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಧ್ಯಯನ ಆಗಬೇಕು. ಜತೆಗೆ ಇಂಗ್ಲಿಷ್ ಮತ್ತು ಹಿಂದಿಗಳಲ್ಲಿ ವಚನಗಳನ್ನು ಇಲ್ಲಿ ಹಾಡುವಂತಾಗಬೇಕು ಎಂದು ನಮ್ಮ ಆಸೆಯಾಗಿದೆ ಎಂದು ಹೇಳಿದರು.
ಹಾಲಕೇರಿ ಅನ್ನದಾನೇಶ್ವರ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ಶ್ರೀಗಳು ಅಧ್ಯಕ್ಷತೆ ವಹಿಸಿ ಮಾತನಾಡಿ, ಉಭಯ ಶ್ರೀಗಳ ಶಿವಯೋಗ ಶಕ್ತಿ ಮತ್ತು ಹಾನಗಲ್ ಕುಮಾರೇಶ್ವರ ಶ್ರೀಗಳ ಭಕ್ತಿನಿಷ್ಠೆಯ ಫಲವಾಗಿ ಪುಣ್ಯಾಶ್ರಮ ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ. ಉಭಯ ಶ್ರೀಗಳು ಅಂತರಂಗದ ಕಣ್ಣಿನಿಂದ ಇಡಿ ಜಗತ್ತನ್ನು ಕಂಡವರು. ನೂರಾರು ವರ್ಷಗಳ ಒಂದು ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಊಟ, ವಸತಿಯೊಂದಿಗೆ ವಿದ್ಯಾರ್ಜನೆ ನೀಡುವುದು ಸುಲಭದ ಸಾಧನೆ ಅಲ್ಲ. ಒಂದು ವಿಶ್ವವಿದ್ಯಾಲಯ ಮಾಡದ ಕಾರ್ಯವನ್ನು ವೀರೇಶ್ವರ ಪುಣ್ಯಾಶ್ರಮ ಮಾಡಿದೆ. ಓದಿದವರು ಎಲ್ಲರೂ ಪ್ರತಿಭಾವಂತರಾಗಬೇಕು ಎಂದೇನು ಇಲ್ಲ, ಪಂಚಾಕ್ಷರಿ ಶ್ರೀಗಳು ದೃಷ್ಟಿ ಇಟ್ಟು ಓದಿಸಿದ ಪಂ. ಪುಟ್ಟರಾಜ ಗವಾಯಿಗಳವರು ಇಂದು ಮಹಾಪುರುಷರಾಗಿದ್ದಾರೆ. ಎಲ್ಲಿಯ ವರೆಗೆ ಹಾನಗಲ್ ಕುಮಾರೇಶ್ವರ ಶ್ರೀಗಳನ್ನು ನೆನೆಯುತ್ತೇವೆಯೋ ಅಲ್ಲಿಯವರೆಗೆ ಪುಣ್ಯಾಶ್ರಮ ಇರುತ್ತದೆ ಎಂದು ಹೇಳಿದರು.ಗದುಗಿನ ಶಿವಾನಂದ ಮಠದ ಅಭಿನವ ಶಿವಾನಂದ ಶ್ರೀಗಳು ನೇತೃತ್ವ ವಹಿಸಿದ್ದರು. ಅಡ್ನೂರ ದಾಸೋಹ ಶ್ರೀಮಠದ ಅಭಿನವ ಪಂಚಾಕ್ಷರ ಶ್ರೀಗಳು, ಹರ್ಲಾಪುರ ಕೊಟ್ಟೂರೇಶ್ವರ ಶ್ರೀಮಠದ ಕೊಟ್ಟೂರೇಶ್ವರ ಶ್ರೀಗಳು, ಹೋತನಹಳ್ಳಿ ಸಿಂದಗಿ ಶಾಖಾ ಮಠದ ಶಂಭುಲಿಂಗ ಶಿವಾಚಾರ್ಯ ಶ್ರೀಗಳು, ಅಂತೂರ ಬೆಂತೂರಿನ ಕುಮಾರದೇವರು, ನಿಡಗುಂದಿ ಸಂಶಿ ಹಿರೇಮಠದ ಮೃತ್ಯುಂಜಯ ಶಿವಾಚಾರ್ಯ ಶ್ರೀಗಳು, ಕೋಡೆಕನೂರಿನ ಮಲ್ಲಿಕಾರ್ಜುನ ಶ್ರೀಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎಲ್ಲ ಶ್ರೀಗಳಿಂದ ಲಿಂ. ಪಂ. ಪಂಚಾಕ್ಷರಿ ಗವಾಯಿಗಳ ನೂರೆಂಟು ನಾಮಾವಳಿಗಳು ಗ್ರಂಥ ಬಿಡುಗಡೆ ಹಾಗೂ ಗುರು ವಚನಾಮೃತ ಹಾಗೂ ಆರೋಹ ಸಿರಿ ಧ್ವನಿ ಸುರುಳಿ ಬಿಡುಗಡೆಗೊಂಡವು. ಬಾದಾಮಿಯ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಆರ್.ವಿ. ಸಂಗಮೇಶ ಗವಾಯಿ, ಬಿ.ಬಿ. ಅಸೂಟಿ, ಶಿವಲೀಲಾ ಅಕ್ಕಿ, ಡಾ. ವಿ.ವಿ. ಅಕ್ಕಿ, ಅನಿತಾ ಅಸೂಟಿ, ಆನಂದಯ್ಯಸ್ವಾಮಿ ವಿರಕ್ತಮಠ, ಪಂಕಜ ಬಾಪಣಾ, ಶಿವರುದ್ರಪ್ಪ ಇಟಗಿ, ಎಸ್. ಎಂ. ಗೌಡರ, ಸಾದಿಕ್ ನರಗುಂದ, ಅಯ್ಯಪ್ಪ ನಾಯ್ಕರ ಉಪಸ್ಥಿತರಿದ್ದರು. ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಅಭಾರ ಮನ್ನಣೆ ಮಾಡಿದರು.ಶಿವಮೊಗ್ಗದ ವೀರೇಶ್ವರ ಪುಣ್ಯಾಶ್ರಮದ ಶಾಖಾ ಆಶ್ರಮದ ಅಂಧ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಜರುಗಿತು. ಬೂದೀಶ್ವರದ ಸಿದ್ದೇಶ್ವರ ಶಾಸ್ತ್ರಿಗಳು ಸ್ವಾಗತಿಸಿದರು. ರೋಣದ ಶೇಖರಯ್ಯ ಶಾಸ್ತ್ರಿಗಳು ಕಾರ್ಯಕ್ರಮ ನಿರೂಪಿಸಿದರು. ಗುರುರಕ್ಷೆ: ಕಾರ್ಯಕ್ರಮಕ್ಕೂ ಮೊದಲು ಬೆಳಗ್ಗೆ ನಡೆದ ಗುರುರಕ್ಷೆ ಕಾರ್ಯಕ್ರಮದಲ್ಲಿ ಕಪೋತಗಿರಿ ನಂದಿವೇರಿ ಶ್ರೀಮಠದ ಶಿವಕುಮಾರ ಶ್ರೀಗಳು ಸಾನ್ನಿಧ್ಯವಹಿಸಿದ್ದರು. ಅಡ್ನೂರ ದಾಸೋಹ ಶ್ರೀಮಠದ ಅಭಿನವ ಪಂಚಾಕ್ಷರ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು. ಕಲ್ಲಯ್ಯಜ್ಜನವರು ಸಮ್ಮುಖ ವಹಿಸಿದ್ದರು. ಶ್ರೀನಿವಾಸ ಪಾಸ್ಟೆ, ಸಂಕಪ್ಪ ಹುಲ್ಲೂರ, ಗಿರೀಶ ಹಿರೇಮಠ, ಪ್ರಕಾಶ ಮೋಟರ್ಸ್ ಹಾಗೂ ಗುತ್ತಿಗೆನೂರ, ಎಮ್ಮಿಗನೂರ, ಬೆಳವಣಿಕಿ ಗ್ರಾಮದ ಭಕ್ತರಿಗೆ ಶ್ರೀಗುರಕ್ಷೆ ನೀಡಲಾಯಿತು. ಆನಂತರ ರಾತ್ರಿ ಕುಮಾರೇಶ್ವರ ಕೃಪಾಪೋಷಿತ ಪಂ. ಪಂಚಾಕ್ಷರಿ ಗವಾಯಿಗಳವರ ನಾಟ್ಯ ಸಂಘದಿಂದ ಗಡಿಗೆ ಜ್ವಾಕಿ ತಂಗಿ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.