ಸಾರಾಂಶ
- ಬಾಳೆಹೊನ್ನೂರು-ಚಿಕ್ಕಮಗಳೂರು ರಸ್ತೆಯ ಭದ್ರಾ ಸೇತುವೆ ಕಾಫಿ ಶಾಪ್ ಬಳಿ ಚೆಕ್ಪೋಸ್ಟ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಚಿಕ್ಕಮಗಳೂರಿನ ದತ್ತಾತ್ರೆಯ ಪೀಠದಲ್ಲಿ ಸಂಘ ಪರಿವಾರ ಮಂಗಳವಾರ ಹಮ್ಮಿಕೊಂಡಿದ್ದ ದತ್ತ ಜಯಂತಿ ಹಾಗೂ ದತ್ತಮಾಲಾ ಅಭಿಯಾನಕ್ಕೆ ಈ ಭಾಗದಿಂದ ತೆರಳುವ ವಾಹನಗಳ ತಪಾಸಣೆಯನ್ನು ಪಟ್ಟಣದಲ್ಲಿ ನಡೆಸಲಾಯಿತು.
ಬಾಳೆಹೊನ್ನೂರು-ಚಿಕ್ಕಮಗಳೂರು ರಸ್ತೆಯ ಭದ್ರಾ ಸೇತುವೆ ಕಾಫಿ ಶಾಪ್ ಬಳಿ ಚೆಕ್ಪೋಸ್ಟ್ ತೆರೆದು ಸೋಮವಾರ ರಾತ್ರಿಯಿಂದಲೇ ದತ್ತಪೀಠ ಭಾಗಕ್ಕೆ ತೆರಳುವ ಎಲ್ಲಾ ವಾಹನ ಗಳನ್ನು ಪೊಲೀಸರು ತಪಾಸಣೆ ಮಾಡಿದರು. ತಪಾಸಣಾ ಕೇಂದ್ರಕ್ಕೆ ಸಿಸಿ ಕ್ಯಾಮೆರಾ ಅಳವಡಿಸಿದ್ದು, ಪೊಲೀಸರು ವಾಹನಗಳಲ್ಲಿ ತೆರಳುವವರ ಮಾಹಿತಿ ಪಡೆದುಕೊಳ್ಳುತ್ತಿದ್ದರು.ಈ ಬಾರಿ ಪಟ್ಟಣದ ಮೂಲಕ 180 ವಾಹನಗಳಲ್ಲಿ 1110 ಜನ ಸಂಘ ಪರಿವಾರದ ಕಾರ್ಯಕರ್ತರು, ಮಾಲಾಧಾರಿಗಳು ದತ್ತಪೀಠಕ್ಕೆ ತೆರಳಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು, ಉಡುಪಿ, ಕಾರ್ಕಳ, ಪುತ್ತೂರು, ಮೂಡಬಿದಿರೆ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಆಗುಂಬೆ ಮತ್ತು ಜಿಲ್ಲೆಯ ಕೊಪ್ಪ, ಶೃಂಗೇರಿ, ಮೂಡಿಗೆರೆ, ನರಸಿಂಹರಾಜಪುರ ತಾಲೂಕುಗಳಿಂದ ದತ್ತಮಾಲಾಧಾರಿಗಳು ಹಾಗೂ ದತ್ತಭಕ್ತರು ತೆರಳಿರುವುದು ದಾಖಲಾಗಿದೆ. ದತ್ತಪೀಠಕ್ಕೆ ತೆರಳಿದ ವಾಹನಗಳು ಮಂಗಳ ವಾರ ಬೆಳಿಗ್ಗೆ 10 ಗಂಟೆ ನಂತರ ವಾಪಾಸ್ ಈ ಭಾಗಕ್ಕೆ ಬರಲಾರಂಭಿಸಿದ್ದು, ಅದನ್ನು ಕೂಡ ದಾಖಲು ಮಾಡಿ ಕೊಳ್ಳ ಲಾಯಿತು.
ಚೆಕ್ಪೋಸ್ಟ್ ನಲ್ಲಿ ಪಿಎಸ್ಐ ವಿ.ಟಿ.ದಿಲೀಪ್ಕುಮಾರ್, ನೇತೃತ್ವದಲ್ಲಿ ತಪಾಸಣೆ ನಡೆಸಲಾಯಿತು. ಉಳಿದಂತೆ ಪಟ್ಟಣದ ವಿವಿಧೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಚೆಕ್ ಪೋಸ್ಟ್ನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ವಾಹನಗಳ ಚಲನವಲನ ಪ್ರಕ್ರಿಯೆ ದಾಖಲಿಸಿಕೊಳ್ಳಲಾಯಿತು.ಪೂಜೆ ಸಲ್ಲಿಸಿ ದತ್ತ ಪೀಠಕ್ಕೆ: ಪಟ್ಟಣ ಸುತ್ತಮುತ್ತಲಿನ ಪ್ರದೇಶಗಳಾದ ರಂಭಾಪುರಿ ಪೀಠ, ಮೇಲ್ಪಾಲ್, ಹೂವಿನಹಕ್ಲು, ಅರಳೀ ಕೊಪ್ಪ, ಬನ್ನೂರು, ಮಾಗುಂಡಿ, ಗಡಿಗೇಶ್ವರ, ಆಡುವಳ್ಳಿ, ಸೀಕೆ, ಸೀಗೋಡು ಮುಂತಾದೆಡೆಯ ಸಂಘ ಪರಿವಾರದ ಕಾರ್ಯಕರ್ತರು ಪಟ್ಟಣದ ಮಾರ್ಕಾಂಡೇಶ್ವರ ದೇಗುಲ, ರಂಭಾಪುರಿ ಪೀಠದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮಾಲಾಧಾರಿಗಳು ಪಡಿ ಸಂಗ್ರಹಿಸಿ ದತ್ತಪೀಠಕ್ಕೆ ತೆರಳಿದರು.
ದತ್ತ ಮಾಲಾಧಾರಿಗಳು ಹಾಗೂ ಸಂಘಟನೆ ಕಾರ್ಯಕರ್ತರು ವಾಹನಗಳಲ್ಲಿ ಕೇಸರಿ ಧ್ವಜ ಕಟ್ಟಿಕೊಂಡು ದತ್ತಾತ್ರೇಯ ಪರ ಹಾಗೂ ಜೈಶ್ರೀರಾಮ್, ಬಜರಂಗಿ ಬಜರಂಗಿ ಘೋಷಣೆ ಕೂಗುತ್ತ ದತ್ತಪೀಠಕ್ಕೆ ತೆರಳಿದರು. ದತ್ತಭಕ್ತರ ಘೋಷಣೆ, ಭಕ್ತಿ ಸಂಗೀತಗಳು ಮುಗಿಲು ಮುಟ್ಟಿದವು.ಪಟ್ಟಣದಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆ ಬಳಿಕ ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲಾ ಅಂಗಡಿ ಮುಂಗಟ್ಟು ಗಳನ್ನು ಮುಂಜಾಗ್ರತಾ ಕ್ರಮವಾಗಿ ಬಂದ್ ಮಾಡಿದ್ದರು. ಅಂಗಡಿಗಳ ಬಂದ್ ಬಳಿಕ ವಾಹನ, ಜನ ಸಂಚಾರವಿಲ್ಲದೆ ಪಟ್ಟಣ ಬಿಕೋ ಎನ್ನುತ್ತಿತ್ತು.೨೬ಬಿಹೆಚ್ಆರ್ ೧,೨:
ಬಾಳೆಹೊನ್ನೂರಿನ ಚಿಕ್ಕಮಗಳೂರು ರಸ್ತೆಯ ಭದ್ರಾ ಸ್ಟಾಪ್ ಬಳಿ ದತ್ತಪೀಠಕ್ಕೆ ತೆರಳುವ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸಿದರು.