ಇಮ್ಮಡಿ ಮಹಾದೇವಸ್ವಾಮಿಗೆ ಜಾಮೀನು ವಿರೋಧಿಸಿ ಡಿಸಿ ಮೊರೆ ಹೋದ ಸಂತ್ರಸ್ಥರು

| Published : Nov 17 2025, 12:45 AM IST

ಇಮ್ಮಡಿ ಮಹಾದೇವಸ್ವಾಮಿಗೆ ಜಾಮೀನು ವಿರೋಧಿಸಿ ಡಿಸಿ ಮೊರೆ ಹೋದ ಸಂತ್ರಸ್ಥರು
Share this Article
  • FB
  • TW
  • Linkdin
  • Email

ಸಾರಾಂಶ

ಮಂಜೂರಾದ ಜಾಮೀನನ್ನು ರದ್ದುಗೊಳಿಸಲು ಸರ್ಕಾರಕ್ಕೆ ಮತ್ತು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿ ಜಾಮೀನು ರದ್ಧತಿ ಮಾಡುವಂತೆ ಸಂತ್ರಸ್ತರು ಡಿಸಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ಸುಳ್ವಾಡಿ ವಿಷ ಪ್ರಸಾದ ದುರಂತದ ಪ್ರಮುಖ ಆರೋಪಿ ಇಮ್ಮಡಿ ಮಹಾದೇವಸ್ವಾಮಿಗೆ ಜಾಮೀನು ಮಂಜೂರಾಗಿರುವುದರ ವಿರುದ್ಧ ಸಂತ್ರಸ್ಥರು ರೊಚ್ಚಿಗೆದ್ದಿದ್ದು ಜಾಮೀನು ರದ್ಧತಿಗಾಗಿ ಚಾಮರಾಜನಗರ ಜಿಲ್ಲಾಧಿಕಾರಿಗಳ ಮೊರೆ ಇಟ್ಟಿದ್ದಾರೆ.

ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರನ್ನು ಭೇಟಿಯಾದ ವಿಷ ಪ್ರಸಾದ ದುರಂತದ ಸಂತ್ರಸ್ಥರು, ಹನೂರು ತಾಲೂಕಿನ ಶ್ರೀ ಕ್ಷೇತ್ರ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ದೇವಾಲಯದಲ್ಲಿ ಏಳು ವರ್ಷಗಳ ಹಿಂದೆ ವಿಷಪ್ರಸಾದ ತಿಂದಂತ ವಿವಿಧ ಗ್ರಾಮದ 17 ಮಂದಿ ಸಾವನ್ನಪ್ಪಿದ್ದಾರೆ. 150ಕ್ಕೂ ಹೆಚ್ಚು ಮಂದಿ ಸಂಪೂರ್ಣವಾಗಿ ಗುಣಮುಖರಾಗದೆ ಬಾಧಿತರಾಗಿ ಬಳಲುತ್ತಿದ್ದಾರೆ‌. ಇದಕ್ಕೆ ಕಾರಣಕರ್ತನಾದ ಇಮ್ಮಡಿ ಮಹದೇವಸ್ವಾಮಿಗೆ ಜಾಮೀನು ನೀಡಿರುವುದು ಸಂತ್ರಸ್ತರಿಗೆ ಭಯದ ವಾತಾವರಣ ಉಂಟಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮಂಜೂರಾದ ಜಾಮೀನನ್ನು ರದ್ದುಗೊಳಿಸಲು ಸರ್ಕಾರಕ್ಕೆ ಮತ್ತು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿ ಜಾಮೀನು ರದ್ಧತಿ ಮಾಡುವಂತೆ ಸಂತ್ರಸ್ತರು ಡಿಸಿಗೆ ಮನವಿ ಸಲ್ಲಿಸಿದರು.ಸವಲತ್ತು ನೀಡಲು ಕ್ರಮ ಕೈಗೊಳ್ಳಿ:

ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರಹಳ್ಳಿ ಗ್ರಾಮದ ಸರ್ವೇ ನಂಬರ್ 42 ರ ಪೈಕಿ 2 ಎಕರೆ ಸರ್ಕಾರಿ ಜಮೀನನ್ನು 2019 ರಲ್ಲಿ ಸುಳ್ವಾಡಿ ವಿಷಪ್ರಸಾದದ ಸಂತ್ರಸ್ತರಿಗೆ ನೀಡಲು ಮಂಜೂರು ಮಾಡಲಾಗಿದೆ. ಆದರೆ ಏಳು ವರ್ಷ ಕಳೆದರೂ ವಿಷ ಪ್ರಸಾದ ಸಂತ್ರಸ್ತರಿಗೆ ಇನ್ನೂ ವಿತರಣೆಯಾಗಿಲ್ಲ‌. ಕೂಡಲೇ ಇದರ ಸೌಲಭ್ಯ ಒದಗಿಸಬೇಕು ಹಾಗೂ ಬಾಧಿತರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ನೀಡಬೇಕಾಗಿ ಮನವಿ ಮಾಡಿದರು.

ಮನವಿಯ ಸ್ವೀಕರಿಸಿ ಡಿಸಿ ಶಿಲ್ಪಾನಾಗ್ ಮಾತನಾಡಿ, ವಿಷ ಪ್ರಸಾದ ಸಂತ್ರಸ್ತರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ವಿತರಿಸಲು ಮತ್ತು ಹೆಚ್ಚಿನ ಪರಿಹಾರಕ್ಕಾಗಿ ಸರ್ಕಾರದ ಗಮನಕ್ಕೆ ತರುತ್ತೇನೆ. ಜೊತೆಗೆ, ಇಮ್ಮಡಿ ಮಹದೇವಸ್ವಾಮಿ ಜಾಮೀನು ರದ್ದುಗೊಳಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ಕರೆದು ಕೂಡಲೇ ಅದಕ್ಕೆ ಬೇಕಾಗಿರುವ ಪೂರಕವಾದ ದಾಖಲೆಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ನ್ಯಾಯಾಲಯಕ್ಕೆ ಬೇಕಾಗಿರುವ ದಾಖಲಾತಿಗಳನ್ನು ನೀಡಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಪೆದ್ದನ ಪಾಳ್ಯ ಮುಖಂಡ ಪಿ ಜಿ ಮಣಿ ಹಾಗೂ ಎಂಜಿ ದೊಡ್ಡಿ , ಬಿದರಳ್ಳಿ , ಸುಳ್ಳುವಾಡಿ ಮಾರ್ಟಳ್ಳಿ ಭಾಗದ ಸಂತ್ರಸ್ಥರು ಹಾಜರಿದ್ದರು.

----------

ಹನೂರು ಇಮ್ಮಡಿ ಮಹದೇವಸ್ವಾಮಿಗೆ ಜಾಮೀನು ಬೇಡ ಜಿಲ್ಲಾಧಿಕಾರಿಗೆ ಸಂತ್ರಸ್ತರಿಂದ ಮನವಿ ಸಲ್ಲಿಸಲಾಯಿತು.